ಜೈವಿಕ ನಾವೀನ್ಯತೆ ಕೇಂದ್ರದಲ್ಲಿ ಕನ್ನಡಿಗರ ಕಡೆಗಣನೆ, ನೇಮಕಾತಿ ಅಕ್ರಮ!
ಬೆಂಗಳೂರು, ಅಕ್ಟೋಬರ್ 24: ಬೆಂಗಳೂರಿನ ಜೈವಿಕ ನಾವೀನ್ಯತೆ ಕೇಂದ್ರದಲ್ಲಿ ಕನ್ನಡಿಗರ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಅಕ್ರಮ ನೇಮಕಾತಿ ವಾಸನೆ ಬಡಿಯುತ್ತಿದೆ. ಈ ಬಗ್ಗೆ ಕೆಲ ದಾಖಲೆಗಳು ಒನ್ ಇಂಡಿಯಾ ಕನ್ನಡಕ್ಕೆ ದೊರೆತಿದ್ದು, ಈ ಕೇಂದ್ರದಲ್ಲಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬರು ಕನ್ನಡಿಗರನ್ನು ಬಿಟ್ಟರೆ ಉಳಿದವರು ಹೊರಗಿನವರೇ ಎಂದು ತಿಳಿದುಬಂದಿದೆ.
ಇದು ಸರಕಾರಿ ಅನುದಾನಿತ ಸಂಸ್ಥೆ. ಕರ್ನಾಟಕ ಜೈವಿಕ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಇಲಾಖೆಯ ಸಚಿವರಾಗಿ ಕೆಲಸ ಮಾಡುತ್ತಿರುವವರು ಪ್ರಿಯಾಂಕ್ ಖರ್ಗೆ. ಇನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಸಂಸ್ಥೆಗೆ ಕೇಳಿದ ಮಾಹಿತಿಯನ್ನೂ ತಪ್ಪಾಗಿ ನೀಡಲಾಗಿದೆ.[ಕಾಂಡೋಂ ವಿತರಣೆಯಲ್ಲಿ ಐನೂರು ಕೋಟಿ ಸೋರಿಕೆ ಆಗಿದೆಯಾ?]
ಅನನುಭವಿ-ಕನ್ನಡೇತರರು: ಆಡಳಿತಾಧಿಕಾರಿ ಎಂಬ ಹುದ್ದೆಗೆ ಯಾರೂ ಆಯ್ಕೆಯಾಗಿಲ್ಲ ಎಂದು ತಿಳಿಸಿ, ಒಬ್ಬರನ್ನು ಆಯ್ಕೆ ಮಾಡಿ, 16,300 ರುಪಾಯಿ ಸಂಬಳ ನೀಡಲಾಗುತ್ತಿದೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡುವಾಗ ಈ ಹುದ್ದೆ ಕನ್ನಡಿಗರಿಗೆ ಮೀಸಲು ಹಾಗೂ ಎರಡು ವರ್ಷದ ಅನುಭವ ಅಗತ್ಯ ಎಂದು ತಿಳಿಸಲಾಗಿತ್ತು.
ಆದರೆ, ಅನನುಭವಿ-ಕನ್ನಡೇತರರನ್ನು ನೇಮಿಸಿಕೊಳ್ಳಲಾಗಿದೆ. ಆ ನಂತರ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ, ಆ ಹುದ್ದೆಗೆ ಯಾರನ್ನೂ ಆಯ್ಕೆಯೇ ಮಾಡಿಲ್ಲ ಎಂದು ಉತ್ತರಿಸಲಾಗಿದೆ. ದಾಖಲೆಗಳನ್ನು ತಿದ್ದಿ, ಮ್ಯಾನೇಜ್ ಮೆಂಟ್ ಟ್ರೇನಿ ಎಂದು ಮಾಡಿ, ಯಾವುದೇ ನೇಮಕಾತಿ ನೋಟಿಫಿಕೇಷನ್, ಜಾಹೀರಾತು ನೀಡದೆ ಆಯ್ಕೆ ಮಾಡಿದ್ದಾರೆ.[ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ದಾಳಿ]
ಟ್ರೇನಿ ಸಂಬಳ ಪೂರ್ಣಾವಧಿ ನೌಕರರಿಗಿಂತ ಹೆಚ್ಚು: ಇನ್ನೂ ಅಚ್ಚರಿ ವಿಷಯ ಅಂದರೆ ಟ್ರೇನಿ ಸಂಬಳವು ಪೂರ್ಣಾವಧಿ ನೌಕರರಿಗಿಂತ ಹೆಚ್ಚಾಗಿದೆ. ಹಿರಿಯ ತಾಂತ್ರಿಕ ಅಧಿಕಾರಿ ನೇಮಕಾತಿಗೆ ಕರೆದು, ಅಭ್ಯರ್ಥಿಗೆ ಪಿಎಚ್.ಡಿ ಜತೆಗೆ ಐದು ವರ್ಷದ ಅನುಭವ ಅಗತ್ಯ ಎಂದು ತಿಳಿಸಲಾಗಿತ್ತು. ಆದರೆ ಆಯ್ಕೆಯಾದ ಅಭ್ಯರ್ಥಿ ಪಿಎಚ್.ಡಿ ಮಾಡೇ ಇಲ್ಲ. ಆದರೆ ನಕಲಿ ದಾಖಲೆ ಸೃಷ್ಟಿಸಿ ಕೊಟ್ಟಿದ್ದಾರೆ. ಅವರಿಗೆ ವಿಸಿಟಿಂಗ್ ಕಾರ್ಡ್ ಕೂಡ ಕೊಟ್ಟು, ಸೀನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆ, ಒಂದು ಲಕ್ಷ ಸಂಬಳ ನೀಡಿದ್ದಾರೆ.
ಈಚೆಗೆ ತುಂಬ ಒತ್ತಡ ಬಂದಿದ್ದರಿಂದ ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ತಮ್ಮ ಸ್ವಹಿತಾಸಕ್ತಿಗಾಗಿ ಈ ಆಯ್ಕೆ ಮಾಡಿರುವುದು ದುಡ್ಡಿನ ವ್ಯವಹಾರವನ್ನು ಗಮನಿಸಿದರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಮೊದಲುಗೊಂಡು ಸೆಕ್ಯೂರಿಟಿ ಗಾರ್ಡ್, ಹೌಸ್ ಕೀಪಿಂಗ್ ನವರು ಎಲ್ಲರೂ ಕನ್ನಡೇತರರೇ ಎಂಬುದು ಮತ್ತೊಂದು ಅರೋಪ.
ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಸಂಬಂಧಪಟ್ಟ ವಿಭಾಗಕ್ಕೆ ವಿವಿಧ ಸಂಘ-ಸಂಸ್ಥೆಗಳು ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಇನ್ನು ಈ ಸಂಸ್ಥೆಗೆ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ನಯಾಪೈಸೆ ಗೌರವ ಇಲ್ಲ. ಐವತ್ತು ದಿನದ ನಂತರ ಕೇಳಿದ ಮಾಹಿತಿ ನೀಡಿದ್ದಾರೆ. ಇದು ಸಂಬಂಧಪಟ್ಟವರು ಹೇಗೆ ದಾಖಲಾತಿ ತಿದ್ದುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಹೆಸರು ಹೇಳಲಿಚ್ಛಿಸಿದ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ.[ಭ್ರಷ್ಟರಿಗೆ ಶ್ರೀರಕ್ಷಾ ಭಾಗ್ಯ! ಇದು ರಾಜ್ಯದ ದೌರ್ಭಾಗ್ಯ!]
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು 'ಒನ್ ಇಂಡಿಯಾ ಕನ್ನಡ' ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ. ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವುದು ಸಂಬಂಧ ಪಟ್ಟ ಇಲಾಖೆಯ ಜವಾಬ್ದಾರಿ. ಅದೇನು ಉತ್ತರ, ಸ್ಪಷ್ಟನೆ ದೊರೆಯುತ್ತದೋ ಕಾದು ನೋಡೋಣ.