ಜೆಡಿಎಸ್ ಭಿನ್ನಮತೀಯ ಶಾಸಕರ 'ರುಂಡ' ದೇವೇಗೌಡರಿಗೆ ಏನಾದ್ರೂ ಬೇಕಿತ್ತಾ?
ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಒಂದು ವೇಳೆ ನೂರು ಕ್ಷೇತ್ರವನ್ನು ಗೆದ್ದರೆ ನನ್ನ ಕುತ್ತಿಗೆ ಕೊಯ್ಡು ಇಡುತ್ತೇನೆಂದು ಶಪಥ ಮಾಡಿದ್ದಾರೆ.
ಕೋಪದ ಬಾಯಲ್ಲಿ ಬುದ್ದಿ ಕೊಡಬಾರದು ಎನ್ನುವ ಮಾತಿದೆ.. ಅಲ್ಲಾ ಈ ರಾಜಕಾರಣಿಗಳು ನಾಲ್ಕು ಜನ ಚಪ್ಪಾಳೆ ಹೊಡೀತಾರಂತ ಎಂತೆಂಥಾ ಮಾತುಗಳನ್ನಾಡುತ್ತಾರೆ ನೋಡಿ.. ಒಂದು ವೇಳೆ ಚಾಲೆಂಜ್ ಮಾಡಿದ್ದು ಉಲ್ಟಾ ಹೊಡೆದರೆ, ಆಡಿದಂತೆ ನಡೆದುಕೊಳ್ಳುತ್ತಾರಾ ಇವರು?
ದೇವೇಗೌಡರ ಕುಟುಂಬದ ಮೇಲಿನ ಸಿಟ್ಟನ್ನು ಹೊರಹಾಕಲು ಇತ್ತೀಚೆಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಬುದ್ದಿಯನ್ನು ಕೈಗೆ ತೆಗೆದುಕೊಂಡು ತನ್ನ ರುಂಡವನ್ನು ಕತ್ತರಿಸಿಡುವ ಮಾತನ್ನಾಡಿದ್ದರು. ಈಗ ಜೆಡಿಎಸ್ಸಿನ ಮತ್ತೋರ್ವ ಭಿನ್ನಮತೀಯ ಶಾಸಕರ ಸರದಿ.
ಚಾಮರಾಜಪೇಟೇಲಿ JDS ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ
ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಒಂದು ವೇಳೆ ನೂರು ಕ್ಷೇತ್ರವನ್ನು ಗೆದ್ದರೆ ನನ್ನ ಕುತ್ತಿಗೆ ಕೊಯ್ಡು ಇಡುತ್ತೇನೆಂದು ಶಪಥ ಮಾಡಿದ್ದಾರೆ. ಇನ್ನು ವಿದೇಶ ಪ್ರವಾಸದಲ್ಲಿರುವ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಇನ್ಯಾವಾಗ ರುಂಡ, ಕುತ್ತಿಗೆ ಬಗ್ಗೆ ಮಾತನಾಡುತ್ತಾರೋ ಕಾಲಭೈರವೇಶ್ವರನೇ ಬಲ್ಲ..
ರಾಮನಗರದಲ್ಲಿ ಗುರುವಾರ (ಜುಲೈ 27) ಮಾತನಾಡುತ್ತಿದ್ದ ಬಾಲಕೃಷ್ಣ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮೊದಲು ಅಭ್ಯರ್ಥಿಗಳು ಸಿಗುತ್ತಾರೋ ಎಂದು ಕುಮಾರಸ್ವಾಮಿ ಅವಲೋಕಿಸಲಿ ಆಮೇಲೆ ನೂರು ಸೀಟು ಗೆಲ್ಲುವ ಬಗ್ಗೆ ಮಾತನಾಡಲಿ ಎಂದು ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ, ರೇವಣ್ಣ ಮತ್ತು ದೇವೇಗೌಡರ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ರೇವಣ್ಣ ಒಂದು ಹೇಳಿದರೆ, ಕುಮಾರಸ್ವಾಮಿ ಇನ್ನೊಂದು ಹೇಳುತ್ತಾರೆ ಎಂದು ಬಾಲಕೃಷ್ಣ ಹೇಳಿದ್ದಾರೆ. ಮುಂದೆ ಓದಿ..
ರೇವಣ್ಣ ಲೇವಡಿಗೆ ಬಾಲಕೃಷ್ಣ ತಿರುಗೇಟು
ನಾವು ಏಳು ಜನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಡ್ರೈವರ್ ಆಗಿ ಹೋಗುತ್ತಿದ್ದಾರೆಂದು ರೇವಣ್ಣ ಲೇವಡಿ ಮಾಡುತ್ತಾರೆ, ಮುಂದಿನ ಚುನಾವಣೆಯಲ್ಲಿ ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ. ನಾವು ಯಾವ ಕಾರಣಕ್ಕಾಗಿ ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಬರಬೇಕಾಯಿತು ಎನ್ನುವುದನ್ನು ರೇವಣ್ಣ ಅರಿತೂ ಈ ರೀತಿ ಹೇಳಿರುವುದು ತಪ್ಪು - ಬಾಲಕೃಷ್ಣ.
ನನ್ನ ಕುತ್ತಿಗೆ ಕೊಯ್ದು ಇಡುತ್ತೇನೆ
ಹಾಲೀ ಕೆಲವು ಶಾಸಕರು ಜೆಡಿಎಸ್ ಸೇರಲು ಸಿದ್ದರಾಗಿದ್ದಾರೆ ಎನ್ನುವ ಮಾತನ್ನು ರೇವಣ್ಣ ಆಡುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಒಂದು ವೇಳೆ 100 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದೇ ಆದಲ್ಲಿ ನನ್ನ ಕುತ್ತಿಗೆ ಕೊಯ್ದು ಇಡುತ್ತೇನೆಂದು ಬಾಲಕೃಷ್ಣ ಸವಾಲೆಸೆದಿದ್ದಾರೆ.
ಚಂಗಲಾಟ ಅವರಿಂದಲೇ ಕಲಿತಿದ್ದು
ನಾವು ಗೌಡರ ಕುಟುಂಬದ ಸದಸ್ಯರ ಜೊತೆ 25 ವರ್ಷ ಒಡನಾಟ ಇಟ್ಟುಕೊಂಡಿದ್ದವರು. ಚಂಗಲಾಟ ಅನ್ನೋದನ್ನಾ ನಮಗೆ ತೋರಿಸಿಕೊಟ್ಟಿದ್ದೇ ರೇವಣ್ಣ ಮತ್ತು ಕುಮಾರಸ್ವಾಮಿ ಸಹೋದರರು. ಈಗ ಅದನ್ನು ನಮ್ಮ ಜೊತೆ ಪ್ರಯೋಗಿಸಲು ಬಂದರೆ ನಾವು ಸುಮ್ಮನಿರುತ್ತೇವಾ - ಬಾಲಕೃಷ್ಣ.
ನಮ್ಮನ್ನು ಸೋಲಿಸಲು ಗೌಡ್ರು ಪ್ರಯತ್ನಿಸಲಿ
ನಾನೂ ಸೇರಿ ಏಳು ಜನ ಶಾಸಕರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಅವರೆಲ್ಲಾ ಸೋಲುವಂತೆ ಮಾಡುತ್ತೇನೆಂದು ದೇವೇಗೌಡರು ಹೇಳುತ್ತಾರೆ. ಅವರು ಹಿರಿಯರಿದ್ದಾರೆ, ಅವರ ಪ್ರಯತ್ನವನ್ನು ಅವರು ಮಾಡಲಿ, ನಾವೇನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ - ಬಾಲಕೃಷ್ಣ.
ಜಮೀರ್ ನಂತರ ಬಾಲಕೃಷ್ಣ ಸರದಿ
ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲುವುದಿರಲಿ ಠೇವಣಿ ಸಿಕ್ಕರೂ ನನ್ನ ರುಂಡವನ್ನು ಕತ್ತರಿಸಿಡುತ್ತೇನೆಂದು ಜಮೀರ್ ಹೇಳಿದ್ದರು, ಅದಾದ ನಂತರ ಈಗ ಮತ್ತೋರ್ವ ಗೌಡ್ರ ಗರಡಿಯಲ್ಲೇ ಪಳಗಿದ್ದ ಬಾಲಕೃಷ್ಣ ಸರದಿ. ಚುನಾವಣೆ ಫಲಿತಾಂಶ ಬರುವ ವೇಳೆ ಯಾರ್ಯಾರು ರುಂಡ ಕತ್ತರಿಸಿಡಬೇಕಾಗುತ್ತೋ?