ಆಮಂತ್ರಣ ನೀಡಲು ಬಂದ ಪಕ್ಷದ ಶಾಸಕನನ್ನು ಮನೆಯೊಳಗೆ ಬಿಡದ ಎಚ್ಡಿಕೆ?
ಕುಮಾರಸ್ವಾಮಿಯವರ ಮನೆಬಾಗಿಲಿಗೆ ಹೋಗಿದ್ದ ಶಾಸಕರೊಬ್ಬರನ್ನು, ಕುಮಾರಸ್ವಾಮಿಯವರು ಮನೆಯೊಳಗೆ ಇದ್ದರೂ ಒಳಗೆ ಬಿಡದೆ ಅವಮಾನಿಸಿದ್ದಾರೆಂದು ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ಆರೋಪಿಸಿದ್ದಾರೆ.
ಬೆಂಗಳೂರು, ಏ 10: ಪಕ್ಷ ವಿರೋಧಿ ಚಟುವಟಿಕೆಗಾಗಿ ಜೆಡಿಎಸ್ ನಿಂದ ಅಮಾನತುಗೊಂಡಿರುವ ಒಂದು ಕಾಲದ ಕುಮಾರಸ್ವಾಮಿಯ ಗಳಸ್ಯ ಕಂಠಸ್ಯ ಜಮೀರ್ ಅಹಮದ್, ಎಚ್ಡಿಕೆ ವಿರುದ್ದ ಗುರುತರ ಆರೋಪ ಮಾಡಿದ್ದಾರೆ.
ರಾಜಕೀಯ ಬೇರೆ, ವೈಯಕ್ತಿಕ ಜೀವನ ಬೇರೆ. ಆಮಂತ್ರಣ ನೀಡಲು ಕುಮಾರಸ್ವಾಮಿಯವರ ಮನೆಬಾಗಿಲಿಗೆ ಹೋಗಿದ್ದ ಶಾಸಕರೊಬ್ಬರನ್ನು, ಕುಮಾರಸ್ವಾಮಿಯವರು ಮನೆಯೊಳಗೆ ಬಿಡದೆ ಅವಮಾನಿಸಿದ್ದಾರೆಂದು ಜಮೀರ್ ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ, ಜಮೀರ್ ವಿರುದ್ದ ಹರಿಹಾಯ್ದಿದ್ದಾರೆ. ಜಮೀರ್ ಅವರ ಸಲಹೆಯ ಅವಶ್ಯಕತೆ ಪಕ್ಷಕ್ಕಿಲ್ಲ ಎಂದು ಎಚ್ಡಿಡಿಕೆ ಮತ್ತು ಗೌಡ್ರು ಹೇಳಿದ್ದಾರೆ.
ಕುಮಾರಸ್ವಾಮಿಯವರ ವಿರುದ್ದ ಇನ್ನೊಂದು ಬಾಂಬ್ ಸಿಡಿಸಿರುವ ಜಮೀರ್, ರಾಜ್ಯಸಭಾ ಚುನಾವಣೆಯ ವೇಳೆ ಅಡ್ಡಮತದಾನ ಮಾಡಲು ನಮಗೆ ತಿಳಿಸಿದ್ದೇ ಕುಮಾರಸ್ವಾಮಿ ಎಂದು ಜಮೀರ್ ಹೇಳಿದ್ದಾರೆ.
ಭಾನುವಾರ (ಏ 9) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಜೆಡಿಎಸ್ ನನ್ನನ್ನು ಮತ್ತೆ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದರೆ ಆ ಬಗ್ಗೆ ಯೋಚಿಸುವುದಾಗಿ ಜಮೀರ್ ಅಹಮದ್ ಹೇಳಿದ್ದಾರೆ.
ಆಮಂತ್ರಣ ನೀಡಲು ಬಂದ ಶಾಸಕನನ್ನು ಮನೆಯೊಳಗೆ ಬಿಡದ ಎಚ್ಡಿಕೆ?
ಜೆಡಿಎಸ್ ಪಕ್ಷದ ಶಾಸಕರೊಬ್ಬರು ಆಮಂತ್ರಣ ನೀಡಲು ಕುಮಾರಸ್ವಾಮಿ ಮನೆಗೆ ಹೋಗಿದ್ದರು. ಕುಮಾರಸ್ವಾಮಿಯವರು ಮನೆಯೊಳಗಿದ್ದರೂ, ಶಾಸಕರನ್ನು ಮನೆಯೊಳಗೆ ಸೇರಿಸಲಿಲ್ಲ. ಆ ಶಾಸಕರು ಬೇಸರಿಕೊಂಡು ಅಲ್ಲಿಂದ ನಿರ್ಗಮಿಸಿದರು ಎಂದು ಜಮೀರ್ ಹೇಳಿದರು. ಆದರೆ ಶಾಸಕರಾರು, ಯಾವ ಶುಭ ಸಂದರ್ಭದ ಆಮಂತ್ರಣ ಎಂದು ಜಮೀರ್ ಬಾಯಿಬಿಡಲಿಲ್ಲ.
ಎಚ್ಡಿಕೆ ಅಣತಿಯಂತೆ ಅಡ್ಡಮತದಾನ
ರಾಜ್ಯಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಅಣತಿಯಂತೆ ಅಡ್ಡಮತದಾನ ಮಾಡಿದ್ದೇನೆ. ಇದನ್ನು ಯಾವ ದೇವಸ್ಥಾನದ ಮುಂದೆ ನಿಂತು ಪ್ರಮಾಣ ಮಾಡಲು ಸಿದ್ದನಿದ್ದೇನೆ - ಜಮೀರ್ ಅಹಮದ್.
ಜಮೀರ್ ಸಹವಾಸ ನಮಗೆ ಬೇಕಾಗಿಲ್ಲ - ಎಚ್ಡಿಕೆ
ಜೆಡಿಎಸ್ಸಿಗೆ ಮತ್ತೆ ವಾಪಸ್ ಬರುವಂತೆ ಪಕ್ಷ ಆಹ್ವಾನಿಸಿದರೆ ಆ ಬಗ್ಗೆ ಚಿಂತಿಸುವುದಾಗಿ ಜಮೀರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಅವರ ಸಹವಾಸವೇ ಬೇಡ ಮತ್ತು ಅವರನ್ನು ವಾಪಸ್ ಕರೆಸಿಕೊಳ್ಳುವುದೂ ಇಲ್ಲ - ಕುಮಾರಸ್ವಾಮಿ.
ಜಮೀರ್ ವಿಷಯ ಈಗ ಬೇಡ
ದಿನಕ್ಕೊಂದು ಪಕ್ಷ, ದಿನಕ್ಕೊಂದು ನಾಯಕರ ಜೊತೆ ಸುತ್ತಾಡುವುದು ಜಮೀರ್ ಹವ್ಯಾಸ. ಪಕ್ಷ ವಿರೋಧಿ ಚಟುವಟಿಕೆಗಾಗಿ ಕೆಲವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಜಮೀರ್ ವಿಷಯ ಈಗ ಬೇಡ - ದೇವೇಗೌಡ.
ಕ್ಷೇತ್ರದ ಮತದಾರ ತೀರ್ಪು ನೀಡುತ್ತಾನೆ
ಕುಮಾರಸ್ವಾಮಿಯವರಿಗೆ ರಾಜಕೀಯದ ಅನಿವಾರ್ಯತೆಯಿದೆ, ನನಗೆ ಹಾಗಲ್ಲಾ. ನನ್ನ ಕ್ಷೇತ್ರದಲ್ಲಿ ಪರ್ಯಾಯ ನಾಯಕನನ್ನು ಸೃಷ್ಟಿಸಲು ಕುಮಾರಸ್ವಾಮಿ ಮತ್ತು ಗೌಡ್ರು ಪ್ರಯತ್ನಿಸಿದರೆ ಪ್ರಯತ್ನಿಸಲಿ. ಕ್ಷೇತ್ರದ ಮತದಾರ ಅಂತಿಮ ತೀರ್ಪು ನೀಡುತ್ತಾನೆ.