ಲೋಕಸಭೆಯಲ್ಲಿ ಕಲಬುರ್ಗಿ ಹತ್ಯೆ ಪ್ರಸ್ತಾಪ, ಸಿಬಿಐ ತನಿಖೆ?
ಬೆಂಗಳೂರು, ಡಿಸೆಂಬರ್ 02 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಬಗ್ಗೆ ಲೋಕಸಭೆಯಲ್ಲಿ ಮಂಗಳವಾರ ಚರ್ಚೆ ನಡೆಯಿತು. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಒಪ್ಪಿದರೆ ಕೇಂದ್ರ ತನಿಖೆಯನ್ನು ಸಿಬಿಐಗೆ ಒಪ್ಪಿಸಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು. [ದೇಶಭಕ್ತಿ ಮನದೊಳಗಿರಲಿ : ಸಂಸತ್ತಿನಲ್ಲಿ ಮೋದಿ ಮಾತು]
'ನನ್ನ ಲೋಕಸಭಾ ಕ್ಷೇತ್ರ ಧಾರವಾಡದಲ್ಲಿ ಹಿರಿಯ ಸಂಶೋಧ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ 93 ದಿನಗಳು ಕಳೆದಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಇದುವರೆಗೂ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ' ಎಂದು ದೂರಿದರು. [ಕಲಬುರ್ಗಿ ಹತ್ಯೆಯ ತನಿಖೆ ವಿಳಂಬಕ್ಕೆ ಯಾರು ಕಾರಣ?]
ದೆಹಲಿಯಲ್ಲಿ ಮಂಗಳವಾರ ಸಂಜೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕಲಬುರ್ಗಿ ಅವರ ಹತ್ಯೆ ತನಿಖೆಯನ್ನು ಸಿಬಿಐಗೆ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. 'ಮಹಾರಾಷ್ಟ್ರದಲ್ಲಿ ಹತ್ಯೆಯಾದ ವಿಚಾರವಾದಿಗಳನ್ನು ಇನ್ನೂ ಸಿಬಿಐ ಪತ್ತೆ ಮಾಡಿಲ್ಲ' ಎಂದು ಅವರು ತಮ್ಮ ನಿರ್ಧಾರಕ್ಕೆ ಸಮರ್ಥನೆ ನೀಡಿದರು. ಚಿತ್ರಗಳಲ್ಲಿ ನೋಡಿ ಕಲಾಪದಲ್ಲಿನ ಚರ್ಚೆಯ ವಿವರ.... [ಕಲಬುರ್ಗಿ ಹತ್ಯೆ : ಎತ್ತ ಸಾಗಿದೆ ತನಿಖೆ?]
ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಅಸಹಿಷ್ಣುತೆ ವಿಚಾರದ ಕುರಿತು ಮಾತನಾಡಿ, ದೇಶದಲ್ಲಿ ನಡೆದ ವಿಚಾರವಾದಿಗಳ ಹತ್ಯೆಯ ಕುರಿತು ಉಲ್ಲೇಖಿಸಿದರು.
ಕಲಬುರ್ಗಿ ಹತ್ಯೆ ಪ್ರಸ್ತಾಪಿಸಿದ ಜೋಶಿ
ರಾಹುಲ್ ಗಾಂಧಿ ಅವರ ನಂತರ ಮಾತನಾಡಿದ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಆರೋಪಿಗಳನ್ನು ಬಂಧಿಸಿಲ್ಲ
'ಧಾರವಾಡದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದು 93 ದಿನಗಳು ಕಳೆದಿವೆ. ಇದುವರೆಗೂ ಯಾರನ್ನೂ ಬಂಧಿಲ್ಲ. ಹತ್ಯೆ ಹಿಂದೆ ಯಾರ ಕೈವಾಡವಿದೆ ಎನ್ನುವ ಸತ್ಯ ಹೊರಬರಲು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು' ಎಂದು ಒತ್ತಾಯಿಸಿದರು.
ಖರ್ಗೆಗೆ ಮಾತನಾಡಲು ಅವಕಾಶ ಸಿಗಲಿಲ್ಲ
ಪ್ರಹ್ಲಾದ್ ಜೋಶಿ ಅವರ ಮಾತಿಗೆ ತಿರುಗೇಟು ನೀಡಲು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎದ್ದು ನಿಂತರು. ಆದರೆ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅವಕಾಶ ನೀಡಲಿಲ್ಲ. 'ಇದ್ಯಾವುದೂ ದಾಖಲೆಗೆ ಹೋಗುವುದಿಲ್ಲ. ದಯವಿಟ್ಟು ಕುಳಿತುಕೊಳ್ಳಿ' ಎಂದು ಹೇಳಿದರು.
ಸಿಬಿಐ ತನಿಖೆ ನಡೆಸಲು ಸಿದ್ಧ
ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು, 'ದೇಶದ ಸೌಹಾರ್ದ ವಾತಾವರಣಕ್ಕೆ ಧಕ್ಕೆ ತರುವ ಯಾವುದೇ ಯತ್ನಕ್ಕೂ ಸರ್ಕಾರ ಅವಕಾಶ ನೀಡುವುದಿಲ್ಲ. ಕರ್ನಾಟಕ ಸರ್ಕಾರ ಬಯಸಿದರೆ ಕಲಬುರ್ಗಿ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರ ಸಿದ್ಧವಿದೆ. ಪ್ರಕರಣದ ತನಿಖೆಯನ್ನು ಈಗ ಕರ್ನಾಟಕದ ಸಿಐಡಿ ನಡೆಸುತ್ತಿದೆ' ಎಂದು ಹೇಳಿದರು.
ಸಿಬಿಐ ತನಿಖೆಗೆ ವಹಿಸುವುದಿಲ್ಲ
'ಕಲಬುರ್ಗಿ ಅವರ ಹತ್ಯೆ ತನಿಖೆಯನ್ನು ಸಿಬಿಐಗೆ ನೀಡುವುದಿಲ್ಲ. ಮಹಾರಾಷ್ಟ್ರದಲ್ಲಿ ಹತ್ಯೆಯಾದ ವಿಚಾರವಾದಿಗಳನ್ನು ಇನ್ನೂ ಸಿಬಿಐ ಪತ್ತೆ ಮಾಡಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.