ರವಿಶಂಕರ್ ಗುರೂಜಿಗೆ ಉಗ್ರರಿಂದ ಜೀವ ಬೆದರಿಕೆ
ಕೌಲಾಲಂಪುರ, ಮಾ 28: ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಐಎಸ್ಐಎಸ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆಯ ಪತ್ರಗಳು ಬಂದಿವೆ.
ಕಾಂಬೋಡಿಯಾ ಪ್ರವಾಸದ ನಂತರ ಮಲೇಷ್ಯಾದ ಕೌಲಾಲಂಪುರದ ಹೋಟೇಲ್ ನಲ್ಲಿ ಕಳೆದ ಎರಡು ದಿನಗಳಿಂದ ತಂಗಿರುವ ರವಿಶಂಕರ್ ಗುರೂಜಿ ಅವರಿಗೆ ಐಎಸ್ಐಎಸ್ (Islamic State Terror Group) ಉಗ್ರ ಸಂಘಟನೆಯಿಂದ ಬೆದರಿಕೆ ಪತ್ರಗಳು ಬಂದಿವೆ.
ಆಧ್ಯಾತ್ಮಕ ಗುರು ರವಿಶಂಕರ್ ತಂಗಿರುವ ಹೋಟೇಲಿನ ಮ್ಯಾನೇಜರ್ ಗೇವಿನ್ ವೈಟ್ ಹೆಡ್, ಆರ್ಟ್ ಆಫ್ ಲೀವಿಂಗ್ ನ ನಿರ್ದೇಶಕಿ ಅಂಬಿಕಾ ಮೆನನ್ ಮತ್ತು ಹಿರಿಯ ಸಿಬ್ಬಂದಿ ಈ ಮೀ ಅವರಿಗೆ ಬೆದರಿಕೆ ಪತ್ರಗಳು ಬಂದಿವೆ ಎಂದು ರವಿಶಂಕರ್ ಅವರ ಆಪ್ತ ಮತ್ತು ಆರ್ಟ್ ಆಫ್ ಲೀವಿಂಗ್ ವಕ್ತಾರ ನಕುಲ್ ಧವನ್ ಮಾಧ್ಯಮದವರಿಗೆ ತಿಳಿಸಿದ್ದಾರೆ. (ಗುರೂಜಿ ಮೇಲೆ ಗುಂಡು ಹಾರಿಸಿದ್ದು ಉಗ್ರರೆ)
ಕಾಂಬೋಡಿಯಾ ಪ್ರವಾಸದ ವೇಳೆಯೂ ರವಿಶಂಕರ್ ಗುರೂಜಿಗೆ ಬೆದರಿಕೆ ಪತ್ರಗಳು ಬಂದಿದ್ದವು ಎನ್ನುವ ಮಾಹಿತಿಯೂ ಈಗ ಲಭ್ಯವಾಗಿದೆ. ವಿಷಯ ತಿಳಿದ ಸ್ಥಳೀಯ ಕೌಲಾಲಂಪುರದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ಮತ್ತು ಭಾರತದ ದೂತಾವಾಸ ಕಚೇರಿಗೆ ಮಾಹಿತಿ ನೀಡಿದ್ದಾರೆ.
ರವಿಶಂಕರ್ ಅವರ ನೇತೃತ್ವದಲ್ಲಿ ಶನಿವಾರ (ಮಾ 28) ಬೆಳಗ್ಗೆ ಕೌಲಾಲಂಪುರದಲ್ಲಿ ನಡೆದ ಯೋಗ ಶಿಬಿರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮತ್ತು ಇನ್ನೊಂದು ಕಾರ್ಯಕ್ರಮದಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಮುಸ್ಲಿಂ ರಾಷ್ಟ್ರಗಳಿಗೆ ಪ್ರವೇಶಿಸುವ ಮುನ್ನ ಎಚ್ಚರ ! ಇರಾಕ್ ಮತ್ತು ಇರಾನ್ ದೇಶಗಳಲ್ಲಿ ಮುಸ್ಲಿಮರನ್ನ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ಮುಸ್ಲಿಮರನ್ನ ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.