ಕೊಟ್ಟೂರು ರಥ ಉರುಳಲು ಅಚ್ಚು ಮುರಿತ ಕಾರಣವಲ್ಲ
ಸುಮಾರು 70 ವರ್ಷಗಳ ಹಿಂದಿನ ರಥ; ಆರು ಗಾಲಿಗಳುಳ್ಳ ರಥ; ಅಚ್ಚು ತುಂಡಾಗಿದ್ದೇ ಅಪಘಾತಕ್ಕೆ ಕಾರಣ
ಕೊಟ್ಟೂರು (ಬಳ್ಳಾರಿ), ಫೆಬ್ರವರಿ 21: ವಿಖ್ಯಾತ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ರಥೋತ್ಸವದ ವೇಳೆ ರಥ ಸುತ್ತಲೂ ನೆರೆದಿದ್ದ ಭಕ್ತರ ಮೇಲೆ ಮಗಚಿಕೊಂಡ ಘಟನೆ ಮಂಗಳವಾರ ಕೊಟ್ಟೂರು ಕ್ಷೇತ್ರದಲ್ಲಿ ನಡೆದು ಕೆಲವಾರು ಭಕ್ತಾದಿಗಳು ಗಾಯಗೊಂಡಿದ್ದರು.
ಪ್ರತೀ ವರ್ಷದಂತೆ ಈ ವರ್ಷವೂ ಬಳ್ಳಾರಿ ಸೇರಿದಂತೆ ಸುತ್ತಲಿನ ಪ್ರಾಂತ್ಯಗಳಿಂದ ಸುಮಾರು 4 ಲಕ್ಷ ಜನರು ಸೇರಿದ್ದರು. ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ರಥೋತ್ಸವ ನಡೆದಿತ್ತು.
ಆದರೆ, ಈ ಮೊದಲು ರಥದ ಅಚ್ಚು ಮುರಿದಿದ್ದೇ ಅವಗಢಕ್ಕೆ ಕಾರಣ ಎನ್ನಲಾಗಿತ್ತು. ಆದರೆ, ರಥವನ್ನು ಅಲ್ಲಲ್ಲಿ ನಿಲ್ಲಿಸಿ ಎಳೆಯುವಾಗ ಮಾಡಿದ ಅಚಾತುರ್ಯವೇ ರಥ ಉರುಳಲು ಕಾರಣ ಎನ್ನಲಾಗಿದೆ.
ದೇಗುಲದಿಂದ ಸುಮಾರು 500 ಮೀ.ವರೆಗೆ ರಥವನ್ನು ಎಳೆಯಲಾಗುತ್ತದೆ. ಆಗ, ಲಕ್ಷಾಂತರ ಜನರ ನಡುವೆ ಹಾದು ಹೋಗುವ ರಥವನ್ನು ಜೋರಾಗಿ ಎಳೆಯಲಾಗುವುದಿಲ್ಲ. ಹಾಗಾಗಿ, ಅಲ್ಲಲ್ಲಿ ರಥವನ್ನು ನಿಲ್ಲಿಸಿ ರಥವನ್ನು ಮುಂದಕ್ಕೆ ಎಳೆಯಲಾಗುತ್ತದೆ.
ಅಲ್ಲಲ್ಲಿ ರಥವನ್ನು ನಿಲ್ಲಿಸುವಾಗ, ರಥದ ಚಕ್ರಗಳಿಗೆ ಮರದ ಕೊರಡನ್ನು ಅಡ್ಡಲಾಗಿ ಇಡಲಾಗುತ್ತದೆ. ಹೀಗೆ, ಅದೊಮ್ಮೆ ರಥ ನಿಂತಾಗ ಒಂದು ಚಕ್ರದ ಮುಂದೆ ಎರಡು ಕೊರಡು ಇಟ್ಟಿದ್ದಾರೆ ಹಾಗೂ ರಥವನ್ನು ಮತ್ತೆ ಎಳೆಯಲು ಆರಂಭಿಸಿದಾಗ ಅವಸರದಲ್ಲಿ ಆ ಕೊರಡುಗಳನ್ನು ಬೇಗನೇ ತೆಗೆಯುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ, ಒಂದು ಕಡೆ ವಾಲಿಕೊಂಡಿದೆ. ಆದರೆ, ಮತ್ತೊಂದಡೆ ನೂರಾರು ಜನರು ರಥದ ಹಗ್ಗಗಳನ್ನು ಒಂದೇ ಸವನೆ ಎಳೆದಿದ್ದರಿಂದಾಗಿ ರಥ ವಾಲಿಕೊಂಡಿದೆ.
ರಥ ವಾಲಿಕೊಂಡಿದ್ದನ್ನು ಅರಿಯದೇ ಮತ್ತೂ ಕೆಲವರು ಅದನ್ನು ಎಳೆದಿದ್ದರಿಂದಾಗಿ ರಥ ಪಕ್ಕಕ್ಕೆ ಉರುಳಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಈ ಅವಗಢದಲ್ಲಿ ರಥದ ಚಕ್ರದಡಿ ಕೆಲವರು ಸಿಕ್ಕಿಹಾಕಿಕೊಂಡಿದ್ದು ಈವರೆಗೆ ಯಾವುದೇ ಸಾವು ಸಂಭವಿಸಿಲ್ಲದಿರುವುದು ಸಮಾಧಾನಕರ ಸಂಗತಿ.
ರಥಕ್ಕೆ ಆರು ಗಾಲಿಗಳಿದ್ದು, ಈ ಗಾಲಿಗಳನ್ನೂ ಪ್ರತಿ ಆರು ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಸುಮಾರು 70 ವರ್ಷಗಳ ಹಳೆಯದಾದ ಈ ರಥವನ್ನು ರಥೋತ್ಸವಕ್ಕೂ ಮುನ್ನ ಸೂಕ್ತವಾಗಿ ದುರಸ್ತಿಗೊಳಿಸಲಾಗಿತ್ತು. ಹಾಗಾಗಿ, ಚಕ್ರಗಳಿಗೆ ಪರಸ್ಪರ ಸಂಬಂಧಕೊಡುವ ಅಚ್ಚು ಮುರಿದಿಲ್ಲ.
ಹಿಂದೆಯೂ ಅವಗಢ: ಸುಮಾರು ಏಳೆಂಟು ವರ್ಷಗಳ ಹಿಂದೆ, ಇದೇ ರಥೋತ್ಸವದ ವೇಳೆ ರಥದ ಚಕ್ರದಡಿಗೆ ಸಿಲುಕಿ ಮೂವರು ಭಕ್ತರು ಅಸುನೀಗಿದ್ದರು. ಅದಾದ ನಂತರ, ಫೆಬ್ರವರಿ 21ರಂದು ನಡೆದಿರುವ ದುರಂತ ಎರಡನೆಯದ್ದು ಎಂದು ದೇಗುಲದ ಪರಮ ಭಕ್ತರಾದ ಚನ್ನಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.