ರಾಘವೇಶ್ವರ ಶ್ರೀಗಳು ಖುಲಾಸೆ, ತೀರ್ಪಿನ 5 ಅಂಶಗಳು
ಬೆಂಗಳೂರು, ಏಪ್ರಿಲ್ 01 : ಗಾಯಕಿ ಪ್ರೇಮಲತಾ ದಿವಾಕರ್ ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಖುಲಾಸೆಗೊಳಿಸಲಾಗಿದೆ. ಸೆಷನ್ಸ್ ಕೋರ್ಟ್ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಶ್ರೀಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಬಿ. ಮುದಿಗೌಡರ್ ಅವರು ಗುರುವಾರ ತೀರ್ಪು ಪ್ರಕಟಿಸಿದರು. ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಶ್ರೀಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಆದೇಶ ನೀಡಿದರು. [ರಾಘವೇಶ್ವರ ಶ್ರೀಗಳು ನಿರ್ದೋಷಿ, ವಿಜಯೋತ್ಸವದ ಚಿತ್ರಗಳು]
'ಸತ್ಯ, ಸಹನೆ ಎರಡೂ ಇದ್ದರೆ ಗೆಲುವು ಖಚಿತ. ಇಂದು ಹೊಸತೇನೂ ಬಂದಿಲ್ಲ. ಇರುವುದು ಕಾಣಿಸಿದೆ. ಯಾರ ಮೇಲೂ ದ್ವೇಷ, ಪ್ರತೀಕಾರ ಇಲ್ಲ' ಎಂದು ನ್ಯಾಯಾಲಯದ ತೀರ್ಪು ಬಂದ ಬಳಿಕ ರಾಘವೇಶ್ವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. [ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ರಾಮಚಂದ್ರಾಪುರ ಮಠದ 12 ಪ್ರಶ್ನೆಗಳು]
ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ವಿಶೇಷ ಸರ್ಕಾರಿ ಅಭಿಯೋಜಕ ಬೆಳ್ಳಿಯಪ್ಪ ಅವರು, 'ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಲಾಗಿತ್ತು. ಆದರೂ ಕೋರ್ಟ್ ಸ್ವಾಮೀಜಿಗಳಿಗೆ ಕ್ಲೀನ್ ಚಿಟ್ ನೀಡಿದೆ. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ' ಎಂದು ಹೇಳಿದ್ದಾರೆ. ತೀರ್ಪಿನ 5 ಪ್ರಮುಖ ಅಂಶಗಳು ಇಲ್ಲಿವೆ.....[ಸಂದರ್ಶನದಲ್ಲಿ ಪ್ರೇಮಲತಾ ದಿವಾಕರ್ ಹೇಳಿದ್ದೇನು?]
ಸೂಕ್ತ ಸಾಕ್ಷ್ಯಗಳು ದೊರೆತಿಲ್ಲ
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಅವರ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಸೂಕ್ತವಾದ ಸಾಕ್ಷಿಗಳು ಲಭ್ಯವಾಗಿಲ್ಲ. ಆರೋಪಗಳು ಮೇಲ್ನೋಟಕ್ಕೆ ಕಪೋಲಕಲ್ಪಿತವಾಗಿದ್ದು, ಸೂಕ್ತ ಸಾಕ್ಷ್ಯಾಧಾರ ಒದಗಿಸಲು ದೂರುದಾರರು ಹಾಗೂ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.
ಕರೆಪಟ್ಟಿ ಹೊಂದಾಣಿಕೆ ಆಗುತ್ತಿಲ್ಲ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ಅವರು ಮಾಡಿರುವ ಆರೋಪಕ್ಕೂ ಅವರು ಒದಗಿಸಿರುವ ದೂರವಾಣಿ ಕರೆ ಪಟ್ಟಿಗೂ ಹಾಗೂ ಶ್ರೀಗಳ ದೂರವಾಣಿ ಕರೆ ಪಟ್ಟಿಗೂ ಹೊಂದಾಣಿಕೆ ಆಗುತ್ತಿಲ್ಲ. ಸ್ವಾಮೀಜಿ ಅವರ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಯಾವುದೇ ಪುರಾವೆಗಳು ದೋಷರೋಪ ಪಟ್ಟಿಯಲ್ಲಿ ಇಲ್ಲ.
ಮೊಬೈಲ್ ಟವರ್ ಲೊಕೇಶನ್ ತಾಳೆ ಆಗುತ್ತಿಲ್ಲ
ಇಬ್ಬರ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಕರೆಯಲ್ಲಿ ಸಾಮ್ಯತೆ ಇಲ್ಲ. ಅತ್ಯಾಚಾರ ನಡೆದ ಸ್ಥಳ, ಮೊಬೈಲ್ ಟವರ್ ಲೊಕೇಶನ್ಗಳು ಒಂದಕ್ಕೊಂದು ತಾಳೆ ಆಗುತ್ತಿಲ್ಲ. ಆರೋಪಗಳನ್ನು ಆಧಾರವಾಗಿಟ್ಟುಕೊಂಡು ವಿಚಾರಣೆ ನಡೆಸಲು ಸಾಧ್ಯವಿಲ್ಲ.
ಡಿಎನ್ಎ ಪರೀಕ್ಷೆಯಲ್ಲಿ ಹೊಂದಾಣಿಕೆ ಇಲ್ಲ
ಅತ್ಯಾಚಾರ ನಡೆದಿದೆ ಎಂದು ಆರೋಪಿಸಿರುವ ಸಂತ್ರಸ್ತೆ ಒದಗಿಸಿರುವ ಬಟ್ಟೆಯಲ್ಲಿದ್ದ ವೀರ್ಯದ ಕಲೆ ಡಿಎನ್ಎ ಪರೀಕ್ಷೆಯಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಡಿಎನ್ಎ ಪರೀಕ್ಷೆಯಲ್ಲೂ ಅತ್ಯಾಚಾರ ಸಾಬೀತು ಪಡಿಸುವ ಫಲಿತಾಂಶ ಬಂದಿಲ್ಲ ಎಂದು ಕೋರ್ಟ್ ಹೇಳಿದೆ.
ಯಾವುದೇ ಅಂಶಗಳು ಸಿಕ್ಕಿಲ್ಲ
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಅವರು ಮಾಡಿರುವ ಆರೋಪವನ್ನು ಸಾಬೀತು ಮಾಡಲು ತನಿಖೆಯಲ್ಲಿ ಸೂಕ್ತ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಹೇಳಿರುವ ಕೋರ್ಟ್ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿದೆ.