"ಟಿಪ್ಪು ಮತ್ತು ಕೊಡವರು" ಮಡಿಕೇರಿಯಲ್ಲಿ ಮಂಥನ
ಮಡಿಕೇರಿ, ಜನವರಿ,23: ರಂಗಭೂಮಿ ಕೊಡಗು ಪ್ರಕಾಶನ ಹೊರ ತಂದಿರುವ ಅಡ್ಡಂಡ ಕಾರ್ಯಪ್ಪ ರಚಿತ "ಟಿಪ್ಪು ಮತ್ತು ಕೊಡವರು" ಎಂಬ ಕೃತಿಯನ್ನು ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕೃತಿ ಮಂಥನ ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಕೃತಿ ರಚನೆಕಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಕೊಡಗಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ' ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.[ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಪಿ.ಸುಜಾಕುಶಾಲಪ್ಪ ಮಾತನಾಡಿ,'ಕೊಡಗಿನ ಜನರ ಭಾವನೆಗಳಿಗೆ ಧಕ್ಕೆ ತಂದಿರುವ ವ್ಯಕ್ತಿಯನ್ನು ವೈಭವೀಕರಿಸಬಾರದು ಹಾಗೂ ಅಂತಹ ವ್ಯಕ್ತಿಯ ಜಯಂತಿಯನ್ನು ಆಚರಿಸಬಾರದು. ಸರ್ಕಾರ ಚರಿತ್ರೆಯನ್ನು ತಿದ್ದುವ ಹೀನ ಕೆಲಸಕ್ಕೆ ಮುಂದಾಗಬಾರದು' ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡುತ್ತಾ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಮತ್ತು ವೈಫಲ್ಯವನ್ನು ಜನರಿಂದ ಮರೆಮಾಚುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಲು ಮುಂದಾಗಿ ಕೊಡಗಿನಲ್ಲಿನ ಸೌಹಾರ್ದತೆ ಕೆಡಿಸಿದ್ದಾರೆ ಎಂದರು.[ಟಿಪ್ಪು ಜಯಂತಿ ವಿವಾದದ ಒಳ-ಹೊರಗು, ನಿಮ್ಮ ಮುಂದೆ]
ಶಕ್ತಿ ಪತ್ರಿಕೆಯ ಸಂಪಾದಕ ಬಿ.ಜಿ. ಅನಂತ ಶಯನ ಮಾತನಾಡಿ, 'ಭವ್ಯ ಪರಂಪರೆ ಹೊಂದಿರುವ ಭಾರತ ಧರ್ಮ ಮತ್ತು ಅಧರ್ಮದ ಮುಖಗಳನ್ನು ಕಂಡಿದೆ. ವೈಯಕ್ತಿಕ ಹಿತಾಸಕ್ತಿ, ಭದ್ರತೆ, ಸಾಮ್ರಾಜ್ಯ ವಿಸ್ತರಣೆ ನೆಪದಲ್ಲಿ ಅನೇಕ ರಾಜರು ರಾಜಧರ್ಮ ಬಿಟ್ಟು ಅಧರ್ಮದ ಕಾರ್ಯ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಸರ್ಕಾರ ವಾಸ್ತವತೆ ಮನವರಿಕೆ ಮಾಡಿ ಜನ ಹಿತಕಾರ್ಯ ಮಾಡಬೇಕೆ ಹೊರತು ಜನಾಭಿಪ್ರಾಯಕ್ಕೆ ವಿರುದ್ಧವಾದ ಯಾವುದೇ ಕಾರ್ಯಕ್ರಮ ಮಾಡಬಾರದು. ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಐ.ಎಂ.ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು.