ಎಸ್ಎಂ ಕೃಷ್ಣ ಭೇಟಿಯ ನಂತರ ರಮ್ಯಾ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 1 : ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ರಾಜಕೀಯದಲ್ಲಿ ಸಕ್ರಿಯವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಶನಿವಾರ ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಅವರು ಮಾತುಕತೆ ನಡೆಸಿದರು. 'ಸದ್ಯ ನನಗೆ ಯಾವ ಅಧಿಕಾರವು ಬೇಡ, ಪಕ್ಷ ಜವಾಬ್ದಾರಿ ಕೊಟ್ಟರೆ ಅದನ್ನು ನಿಭಾಯಿಸಲು ಸಿದ್ಧ' ಎಂದರು.
ಶನಿವಾರ ಬೆಳಗ್ಗೆ ರಮ್ಯಾ ಅವರು ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 'ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು' ಎಂದು ಎಸ್.ಎಂ.ಕೃಷ್ಣ ಕಿವಿಮಾತು ಹೇಳಿದ್ದಾರೆ. [ಮಂಡ್ಯಕ್ಕೆ ಭೇಟಿ ನೀಡಿದ ಮಾಜಿ ಸಂಸದೆ ರಮ್ಯಾ ಹೇಳಿದ್ದೇನು?]
ಎಸ್.ಎಂ.ಕೃಷ್ಣ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ ಅವರು, 'ನಾನು ಎಲ್ಲಾ ವಿಚಾರವನ್ನು ಕೃಷ್ಣ ಅವರ ಬಳಿ ಹೇಳಿಕೊಳ್ಳುತ್ತೇನೆ. ನನ್ನ ಓದು, ರಾಜಕೀಯ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಮಂಡ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆ ಬಗ್ಗೆ ಮಾತುಕತೆ ನಡೆಸಿದ್ದೇವೆ' ಎಂದು ತಿಳಿಸಿದರು. [ಪುಣೆಯಲ್ಲಿ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡ ರಮ್ಯಾ!]
'ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವಿಚಾರವನ್ನು ರಾಹುಲ್ ಗಾಂಧಿ ಅವರೇ ತಿಳಿಸಿದ್ದಾರೆ. ಯಾವಾಗ ಬರುತ್ತಾರೆ ಎನ್ನುವುದು ದಿನಾಂಕ ಇನ್ನು ನಿಗದಿಯಾಗಿಲ್ಲ' ಎಂದು ಹೇಳಿದರು.
'ನಾನು ಎಲ್ಲೂ ನಾಪತ್ತೆಯಾಗಿಲ್ಲ'
'ನಾನು ಎಲ್ಲೂ ನಾಪತ್ತೆಯಾಗಿಲ್ಲ ಎಂದು ಹೇಳಿದ ರಮ್ಯಾ ಅವರು, ಪಬ್ಲಿಕ್ ಪಾಲಿಸಿ ಆನ್ ಇಂಟರ್ ನ್ಯಾಷನಲ್ ರಿಲೇಷನ್' ಬಗ್ಗೆ ಅಧ್ಯಯನ ಮಾಡಲು ಲಂಡನ್ಗೆ ಹೋಗಿದ್ದೆ. ಆಗಸ್ಟ್ ಕೊನೆಯ ವಾರದಲ್ಲಿ ಜರ್ಮನಿ ಹೋಗಿ 'ಗ್ಲೋಬಲ್ ಗವರ್ನೆನ್ಸ್' ಬಗ್ಗೆ ಅಧ್ಯಯನ ಮಾಡುತ್ತೇನೆ ಎಂದು ಹೇಳಿದರು.
'ನಾನು ಯಾರನ್ನೂ ಓವರ್ ಟೇಕ್ ಮಾಡುತ್ತಿಲ್ಲ'
'ಮಂಡ್ಯದಲ್ಲಿ ರೈತರ ಮನೆಗೆ ಭೇಟಿ ನೀಡುವ ಮೂಲಕ ನಾನು ಯಾರನ್ನೂ ಓವರ್ ಟೇಕ್ ಮಾಡುತ್ತಿಲ್ಲ. ಅಂಬರೀಶ್ ಅವರು ಹಿರಿಯ ರಾಜಕಾರಣಿ. ನಾನು ಈಗ ರಾಜಕಾರಣಕ್ಕೆ ಬಂದಿದಿದ್ದೇನೆ. ನಮ್ಮ ಜಿಲ್ಲೆಯಾದ ಕಾರಣ ನಾನು ಹೋಗಿದ್ದೇನೆ' ಎಂದರು.
ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ
'ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಅವರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ವಿಚಾರವನ್ನು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಯಾವಾಗ ಬರುತ್ತಾರೆ? ಎನ್ನುವ ದಿನಾಂಕ ಇನ್ನೂ ನಿಗದಿಯಾಗಿಲ್ಲ' ಎಂದರು.
ನನಗೆ ಯಾವುದೇ ಅಧಿಕಾರವೂ ಬೇಡ
ರಮ್ಯಾ ಅವರನ್ನು ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವ ಬಗ್ಗೆ ಹಬ್ಬಿರುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅವರು, 'ನನಗೆ ಪರಿಷತ್ ಸ್ಥಾನ ನೀಡಬೇಕು ಎಂದು ಕೇಳಿಲ್ಲ. ನಾನು ತುಂಬಾ ಕಲೊಯಬೇಕಾಗಿದೆ. ಯಾವ ಅಧಿಕಾರವು ಬೇಡ, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷ ಜವಾಬ್ದಾರಿ ಕೊಟ್ಟರೆ ನಿರ್ವಹಿಸುವೆ' ಎಂದರು.