ದೇಶದ ಗಡಿ, ಸಭ್ಯತೆ ಮಿತಿಮೀರಿದ ಎಚ್ಡಿಕೆ-ರಮ್ಯಾ ವಾಕ್ಸಮರ
ಬೆಂಗಳೂರು, ಫೆಬ್ರವರಿ 18 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಟಿ, ಮಾಜಿ ಸಂಸದೆ ರಮ್ಯಾ ಅವರ ನಡುವೆ ನಡೆಯುತ್ತಿರುವ ವಾಕ್ಸಮರಕ್ಕೆ ತೆರೆಬಿದ್ದಿಲ್ಲ. ರಮ್ಯಾ ಲಂಡನ್ಗೆ ಹೋದ ಬಗ್ಗೆ ಕುಮಾರಸ್ವಾಮಿ ಪ್ರಶ್ನಿಸಿದ್ದರೆ, ರಮ್ಯಾ ಅವರು ಕುಮಾರಸ್ವಾಮಿ ಶ್ರೀಲಂಕಾಗೆ ಹೋದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಕಣ ಕುಮಾರಸ್ವಾಮಿ ಮತ್ತು ರಮ್ಯಾ ಅವರ ನಡುವಿನ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. 'ರಮ್ಯಾ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವ ಜೆಡಿಎಸ್ ನಾಯಕರಿಗೆ ಜನರು ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']
ಬುಧವಾರ ಮಾತನಾಡಿರುವ ರಮ್ಯಾ ಅವರು, 'ನಾನು ಲಂಡನ್ಗೆ ವ್ಯಾಸಂಗಕ್ಕಾಗಿ ಹೋಗಿದ್ದೇನೆಯೇ ವಿನಃ ಮಜಾ ಮಾಡಲು ಹೋಗಿರಲಿಲ್ಲ. ಆದರೆ, ಕುಮಾರಸ್ವಾಮಿ ಅವರು, ಶ್ರೀಲಂಕಾಗೆ ಹೋಗಿದ್ದರ ಹಿಂದಿನ ಗುಟ್ಟೇನು? ಎಂದು ಪ್ರಶ್ನಿಸಿದ್ದಾರೆ. ಅವರ ಹಲವು ರಹಸ್ಯ ಸತ್ಯಗಳು ತಮಗೆ ಗೊತ್ತಿವೆ' ಎಂದು ತಿಳಿಸಿದ್ದಾರೆ. ['ಕಾಂಗ್ರೆಸ್ ಹೈಕಮಾಂಡ್ ರಮ್ಯಾಗೆ ಬುದ್ಧಿ ಹೇಳಲಿ']
ರಮ್ಯಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, 'ರಾಧಿಕಾ ವಿಚಾರ ನನ್ನ ಖಾಸಗಿ ವಿಷಯ. ನಾನು ಶ್ರೀಲಂಕಾಗೆ ಏಕೆ ಹೋಗುತ್ತೇನೆ? ಎಂಬುದನ್ನು ಪ್ರಶ್ನಿಸಲು ತಮ್ಮ ಪತ್ನಿ ಇದ್ದಾಳೆ. ಆದರೆ, ಇವರು ಲಂಡನ್ಗೆ ಹೋಗಿ ಏನು ಮಾಡಿದರು? ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ' ಎಂದು ವ್ಯಂಗ್ಯವಾಡಿದ್ದಾರೆ. ಮಾತಿನ ಸಮರದ ವಿವರ ಚಿತ್ರಗಳಲ್ಲಿ..... [ರಮ್ಯಾ ವಿರುದ್ದ ಕುಮಾರಸ್ವಾಮಿ ಗಂಭೀರ ಆರೋಪ]
ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ
ಬುಧವಾರ ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು 'ರಮ್ಯಾ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದರು'. ಆದರೆ, ನಂತರ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, 'ರಾಧಿಕಾ ಬಗ್ಗೆ ರಮ್ಯಾ ಮಾತನಾಡಲು ಏನಿದೆ?. ಲಂಡನ್ಗೆ ಹೋಗಿ ರಮ್ಯಾ ಏನು ಮಾಡಿಕೊಂಡು ಬಂದರು ಎಂಬ ವಿಷಯ ಹಾದಿಬೀದಿಯಲ್ಲಿ ಚರ್ಚೆಯಾಗುತ್ತಿದೆ. ಖಾಸಗಿ ವಿಚಾರ ಮಾತನಾಡುವಾಗ ಹುಷಾರಾಗಿರಬೇಕು' ಹೇಳಿದರು.
'ನಾನು ಹೋಗಿದ್ದು ವಿದ್ಯಾಭ್ಯಾಸ ಮಾಡಲು'
ಮಂಡ್ಯದಲ್ಲಿ ಬುಧವಾರ ಮಾತನಾಡಿದ ರಮ್ಯಾ ಅವರು, 'ನಾನು ಲಂಡನ್ಗೆ ಹೋಗಿದ್ದು ವಿದ್ಯಾಭ್ಯಾಸ ಮಾಡಲು, ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೇಲಿಂದ ಮೇಲೆ ಶ್ರೀಲಂಕಾಗೆ ಹೋಗುವುದು ಏಕೆ?' ಎಂದು ಪ್ರಶ್ನಿಸಿದ್ದಾರೆ.
'ಪ್ರಶ್ನಿಸಲು ತಮ್ಮ ಪತ್ನಿ ಇದ್ದಾಳೆ'
'ರಮ್ಯಾ ಪ್ರಮಾಣಿಕವಾಗಿ ಕೆಲಸ ಮಾಡಿದರೆ ಜನರು ಗುರುತಿಸುತ್ತಾರೆ. ನಾಟಕೀಯವಾಗಿ ನಡೆದುಕೊಂಡರೆ ಗುರುತಿಸುವುದಿಲ್ಲ. ರಾಧಿಕ ವಿಚಾರ ತಮ್ಮ ಖಾಸಗಿ ವಿಷಯ. ತಾವು ಶ್ರೀಲಂಕಾಗೆ ಏಕೆ ಹೋಗುತ್ತೇನೆ? ಎಂಬುದನ್ನು ಪ್ರಶ್ನಿಸಿಸಲು ತಮ್ಮ ಪತ್ನಿ ಇದ್ದಾಳೆ. ಆದರೆ, ಇವರು ಲಂಡನ್ಗೆ ಹೋಗಿ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ' ಎಂದು ವ್ಯಂಗ್ಯವಾಡಿದರು.
'ವಾಚ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ'
'ಕುಮಾರಸ್ವಾಮಿ ಅವರ ಬಳಿ ಬಿಎಂಡಬ್ಲ್ಯು, ಆಡಿ ಸೇರಿದಂತೆ ನಾಲ್ಕಾರು ಐಷಾರಾಮಿ ಕಾರುಗಳಿವೆ. ಮನೆಯಲ್ಲಿ ಪತ್ನಿ ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಗೋಲ್ಡ್ ವಾಚ್ ಕಟ್ಟುತ್ತಾರೆ. ನಾನು ಅದನ್ನು ನೋಡಿದ್ದೇನೆ. ಇವರಿಗೆ ಸಿದ್ದರಾಮಯ್ಯ ವಾಚ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ರಮ್ಯಾ ಹೇಳಿದ್ದಾರೆ.
'ನಮ್ಮ ಮನೆಗೆ ಯಾವಾಗ ಬಂದಿದ್ದರು'
'ನಾನು ಮನೆಯಲ್ಲಿ ಇದ್ದಾಗ ಗೋಲ್ಡ್ ವಾಚ್ ಕಟ್ಟುತ್ತೇನೆ, ಹೊರಗೆ ಬಂದಾಗ ಸಿಂಪಲ್ ವಾಚ್ ಕಟ್ಟುತ್ತೇನೆಂದು ರಮ್ಯಾ ಹೇಳಿದ್ದಾರೆ. ಅದನ್ನು ನೋಡಲು ರಮ್ಯಾ ನಮ್ಮ ಮನೆಗೆ ಯಾವಾಗ ಬಂದಿದ್ದರು?, ನಾನು ಯಾವಾಗ ಗೋಲ್ಡ್ ವಾಚ್ ಕಟ್ಟಿದ್ದೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
'ಅಸ್ತಿತ್ವ ಕಳೆದುಕೊಳ್ಳುವ ಭೀತಿ ಬಂದಿದೆ'
'ನಾನು ಮಂಡ್ಯ ಜಿಲ್ಲೆಯಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನನಗೂ ಮಾತನಾಡುವುದು, ಟೀಕಿಸುವುದು ಗೊತ್ತು. ಜೆಡಿಎಸ್ ಪಕ್ಷಕ್ಕೆ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅಸ್ತಿತ್ವ ಉಳಿದುಕೊಂಡಿದೆ. ನನ್ನ ಓಡಾಡದಿಂದ ಇಲ್ಲಿಯೂ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಬಂದಿದೆ. ಆದ್ದರಿಂದ ಕುಮಾರಸ್ವಾಮಿ ಅವರು ಖಾಸಗಿ ಬದುಕಿನ ವಿಷಯದ ಬಗ್ಗೆ ಮಾತನಾಡುತ್ತಾರೆ. ನನ್ನ ಜೀವನ ತೆರೆದ ಪುಸ್ತಕ, ಏನೂ ಸಿಕ್ರೇಟ್ ಇಲ್ಲ' ಎಂದು ರಮ್ಯಾ ಹೇಳಿದರು.
'ಮಂಡ್ಯಕ್ಕೆ ರಮ್ಯಾ ಕೊಡುಗೆ ಏನು?'
'ನಾನು ಚಿತ್ರ ನಟಿ ರಮ್ಯಾ ಬಗ್ಗೆ ಮಾತನಾಡಿಲ್ಲ. ಬರೀ ರಮ್ಯಾ ಬಗ್ಗೆ ಮಾತನಾಡಿದ್ದೇನೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ರಮ್ಯಾ ಕೊಡುಗೆ ಏನೆಂದು ಹೇಳಲಿ' ಎಂದು ಬುಧವಾರ ರಾತ್ರಿ ಮಂಡ್ಯ ತಾಲೂಕು ಶಿವಳ್ಳಿಯಲ್ಲಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
'ಜೆಡಿಎಸ್ಗೆ ಜನರು ತಕ್ಕ ಪಾಠ ಕಲಿಸುತ್ತಾರೆ'
'ಮಾಜಿ ಸಂಸದೆ ರಮ್ಯಾ ಬಗ್ಗೆ ಜೆಡಿಎಸ್ ಮುಖಂಡರು ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಜನಪ್ರತಿನಿಧಿ ಬಗ್ಗೆ ಏಕವಚನದಲ್ಲಿ ಸಂಬೋಧಿಸಿ ಮಾತನಾಡುವುದು ಸರಿಯಲ್ಲ. ಮತದಾರರು ಜೆಡಿಎಸ್ಗೆ ತಕ್ಕಪಾಠ ಕಲಿಸುತ್ತಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.