ಜಲ ಸಂರಕ್ಷಣೆಗಾಗಿ ರಾಮನಗರದಲ್ಲಿ ಮ್ಯಾರಥಾನ್
ರಾಮನಗರ, ಫೆಬ್ರವರಿ 26 : ಕರ್ನಾಟಕದಲ್ಲಿ ಭಾರೀ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಜೀವಜಲ ಸಂರಕ್ಷಣೆ ಮತ್ತು ಜಲ ಸಂಪನ್ಮೂಲ ನಿರ್ವಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಮನಗರದಲ್ಲಿ ಭಾನುವಾರ ಬೆಳಿಗ್ಗೆ ರಾಮನಗರದಲ್ಲಿ 'ಜಲಾಂದೋಲನ ಮ್ಯಾರಥಾನ್' ಆಯೋಜಿಸಲಾಗಿತ್ತು.
ರಾಮನಗರದ ಕೆಂಪೇಗೌಡನದೊಡ್ಡಿ ಸಮೀಪದ ಜೀಗೇನಹಳ್ಳಿ ಬಡಾವಣೆಯಿಂದ ಸಿದ್ದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿರುವ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಮ್ಯಾರಥಾನ್ ನಲ್ಲಿ ವಿದ್ಯಾರ್ಥಿಗಳು, ಹಿರಿಯರು, ನುರಿತ ಓಟಗಾರರು, ಹವ್ಯಾಸಿಗಳು ಭಾರೀ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಎಲ್ಲ ವಯೋಮಾನದವರಿಗಾಗಿ 7 ಕಿ.ಮೀ ಓಟ, ಹವ್ಯಾಸಿ ಓಟಗಾರರಿಗಾಗಿ 11 ಕಿ.ಮೀ ಮತ್ತು ನುರಿತ ಓಟಗಾರರಿಗಾಗಿ 21 ಕಿ.ಮೀ (ಹಾಫ್ ಮ್ಯಾರಥಾನ್) ವಿಭಾಗಗಳಲ್ಲಿ 1,700 ಸ್ಪರ್ಧಿಗಳು ಭಾಗವಹಿಸಿದ್ದರು. ಅಲ್ಲದೆ, ಹಿರಿಯ ನಾಗರಿಕರಿಗಾಗಿ 5 ಕಿ.ಮೀ ದೂರದ ಓಟವನ್ನೂ ಆಯೋಜಿಸಲಾಗಿತ್ತು.
ಜನರಲ್ಲಿ ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಿದ್ದರಿಂದ ಗೆದ್ದವರಿಗೆ ಯಾವುದೇ ಬಹುಮಾನವನ್ನು ಇಟ್ಟಿರಲಿಲ್ಲ. ಆದರೂ, ಸ್ಪರ್ಧಿಗಳಲ್ಲಿ ಉತ್ಸಾಹದ ಕೊರತೆಯಿರಲಿಲ್ಲ. ಬಿರುಬಿಸಿಲಿನಲ್ಲಿ ಓಟಗಾರರು ಓಡಿದರಲ್ಲದೆ, ಹಳ್ಳಿಜನರಲ್ಲಿ ನೀರಿನ ಬಳಕೆ ಮತ್ತು ಉಳಿಕೆಯ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.
ಯೆಲ್ಲೋ ಅಂಡ್ ರೆಡ್ ಫೌಂಡೇಷನ್ ಈ ಓಟದ ಸ್ಪರ್ಧೆಯನ್ನು ಆಯೋಜಿಸಿತ್ತು. ಬಾಷ್ ಫೌಂಡೇಷನ್, ಬಿಡದಿ ಕೈಗಾರಿಕಾ ಒಕ್ಕೂಟ ಮತ್ತು ರೋಟರಿ ಸಿಲ್ಕ್ ಸಹಯೋಗದಲ್ಲಿ ಮ್ಯಾರಥಾನ್ ನಡೆಸಲಾಯಿತು. ಬೆಂಗಳೂರು ಗ್ರಾಮೀಣ ಲೋಕಸಭೆಯನ್ನು ಪ್ರತಿನಿಧಿಸುವ ಡಿಕೆ ಸುರೇಶ್ ಅವರು ರಾಮನಗರ ಮ್ಯಾರಥಾನ್ ಗೆ ಚಾಲನೆ ನೀಡಿದರು.
ಮ್ಯಾರಥಾನ್ ಯಶಸ್ವಿಯಾಯಿತಾದರೂ, ನೀರಿನ ಉಳಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದ್ದ ಸ್ಪರ್ಧಾಳುಗಳು ಓಡುವಾಗ ಬಳಸಿದ ಮಿನರಲ್ ನೀರಿನ ಬಾಟಲಿಯನ್ನು ಅಲ್ಲಲ್ಲಿ ಚೆಲ್ಲಿದ್ದಲ್ಲದೆ, ನೀರನ್ನು ಪೋಲು ಮಾಡುತ್ತಿದ್ದುದು ಕಂಡುಬಂದಿತು. ಅಲ್ಲದೆ, ಮ್ಯಾರಥಾನ್ ದಾರಿಯುದ್ದಕ್ಕೂ ಹಳ್ಳಿಯಾಗಲಿ, ಮನೆಗಳಾಗಲಿ ಅಷ್ಟೊಂದು ಇಲ್ಲದಿರುವುದು ಸ್ವಲ್ಪ ಹಿನ್ನಡೆಯಂತೆ ಕಂಡಿತು.