ಮಹದೇಶ್ವರ ತಪ್ಪಲಿನ ಕಾಮಧೇನುಗಳ ಸೇವೆಯಲ್ಲಿ ರಾಮಚಂದ್ರಾಪುರ ಮಠ
ಹೊಸನಗರ ರಾಮಚಂದ್ರಾಪುರ ಮಠ 110 ಲೋಡ್ (880 ಟನ್) ಮೇವನ್ನು ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಹಳ್ಳಿಗಳಿಗೆ ಪೂರೈಸಿದೆ.
ಬೆಂಗಳೂರು, ಏ 28: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ 110ನೇ ಹುಟ್ಟುಹಬ್ಬದ ನೆನಪಿಗಾಗಿ ರಾಮಚಂದ್ರಾಪುರ ಮಠ 110 ಲೋಡ್ (880 ಟನ್) ಮೇವನ್ನು ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಹಳ್ಳಿಗಳಿಗೆ ಈಗಾಗಲೇ ಪೂರೈಸಿದೆ.
ಶ್ರೀಗಳ ಹುಟ್ಟುಹಬ್ಬದ ದಿನದಂದು ರಾಮಚಂದ್ರಾಪುರ ಮಠ ಈ ಯೋಜನೆಯನ್ನು ಘೋಷಿಸಿ, ಮೇವಿಲ್ಲದೇ ಸಾಯುತ್ತಿರುವ ಲಕ್ಷಾಂತರ ಜಾನುವಾರುಗಳ ಜೀವ ಉಳಿಸುವ ಸಲುವಾಗಿ 110 ಲಾರಿ ಮೇವನ್ನು ಬೆಟ್ಟದ ತಪ್ಪಲಿನ ಹಳ್ಳಿಗಳಿಗೆ ವಿತರಿಸುವುದಾಗಿ ಘೋಷಿಸಿತ್ತು. (ರಾಮಚಂದ್ರಾಪುರ ಮಠದಿಂದ 550 ಟನ್ ಮೇವು ಪೂರೈಕೆ)
ಇದೀಗ ಮಠದಿಂದ 880 ಟನ್ ಮೇವು ಪೂರೈಸಲಾಗಿದೆ. ಗೋಪ್ರಾಣಭಿಕ್ಷೆ ಯೋಜನೆಯಡಿ ಸಮಾಜ ಮತ್ತು ದಾನಿಗಳ ಸಹಕಾರದಿಂದ ಮಳೆಗಾಲ ಆರಂಭವಾಗುವವರೆಗೂ ಬೆಟ್ಟದ ತಪ್ಪಲಿನ ಜಾನುವಾರುಗಳಿಗೆ ಮೇವು ಪೂರೈಸಲು ಮಠ ನಿರ್ಧರಿಸಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
.@girishalva @shishir_heg @akshaykumar @vivekshettym @vivek_oberoi @Kaalateetham @OneindiaKannada @Shankaracarya36 @PuneethRajkumar @HIMESH_SS @patnaikt @StrangerMitron @VishweshwarBhat Wth Ur suport fodder supplied @ MM Hills by @ShankaraPeetha nw 800+ Ton #GiveUpAMeal &donate4 Cows undr Drought is Mission&Vision; Join us pic.twitter.com/bWLb14huRG
— #GiveUpAMeal Vidya (@Vidyakailankaje) April 28, 2017
ಯಾವುದೇ ಆಚರಣೆ ಆದರೂ ಅದು ಆಡಂಬರಕ್ಕೆ ಸೀಮಿತವಾಗದೆ, ಅರ್ಥಪೂರ್ಣವಾಗಿರವೇಕು ಎಂಬುದು ರಾಘವೇಶ್ವರ ಶ್ರೀಗಳ ಆಶಯ. ಹಾಗಾಗಿಯೇ ಕಾಯಕಯೋಗಿ ಸಿದ್ಧಗಂಗಾ ಶ್ರೀಗಳ 110ನೇ ಜನ್ಮದಿನವನ್ನು 110 ಲೋಡ್ ಮೇವು ವಿತರಿಸುವ ಕಾಯಕದ ಮೂಲಕ ರಾಮಚಂದ್ರಾಪುರ ಮಠದ ಬಳಗ ಆಚರಿಸಿಕೊಂಡಿದೆ.
ಗೋವು-ನಾವು-ಮೇವು ಎಂಬ ಘೋಷಣೆಯಡಿ ಮಠದ ನೂರಾರು ಕಾರ್ಯಕರ್ತರು ಬೆಟ್ಟದ ತಪ್ಪಲಿನ ಹಳ್ಳಿಗಳಲ್ಲಿ ಮೇವು ನೀರಿಲ್ಲದೇ ಬಳಲಿರುವ ಹಸುಗಳಿಗೆ ವ್ಯವಸ್ಥಿತವಾಗಿ ಮೇವು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗೋ ಪ್ರಾಣಭಿಕ್ಷೆಗಾಗಿ ರಾಘವೇಶ್ವರ ಶ್ರೀಗಳು ನೀಡಿದ ಕರೆಗೆ ಸ್ಪಂದಿಸಿದ ಮಠದ ಭಕ್ತರು, ಪುಟ್ಟಮಕ್ಕಳು ತಮ್ಮ ಮೈಮೇಲಿನ ಒಡವೆಗಳನ್ನು ಗೋವಿಗಾಗಿ ಸಮರ್ಪಿಸಿದ್ದಾರೆ. ಮಠದ ಸಮಸ್ತ ಶಿಷ್ಯವರ್ಗ ಸರಳ ಜೀವನ ನಡೆಸಿ, ಪ್ರತಿ ಸೋಮವಾರ ಒಂದು ಹೊತ್ತು ಉಪವಾಸವಿದ್ದು, ಆ ಹಣವನ್ನು ಗೋವಿನ ಮೇವಿಗಾಗಿ ನೀಡುವ ಮಾನವೀಯ ಸೇವೆಯಲ್ಲಿ ಭಾಗಿಗಳಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಪ್ರಿಲ್ ಒಂದರಿಂದ ಒಂದು ಕೇಂದ್ರದಲ್ಲಿ ಮೇವು ವಿತರಣೆ ಆರಂಭಿಸಿದ್ದು, 25 ದಿನಗಳ ಬಳಿಕ ಇದೀಗ 16 ಕೇಂದ್ರಗಳಲ್ಲಿ ಮೇವು ವಿತರಿಸಲಾಗುತ್ತಿದೆ. ಸುಮಾರು 22 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಕಬ್ಬು, ಜೋಳದ ಹಸಿ ಹುಲ್ಲು ಹಾಗೂ ಅಡಿಕೆ ಹಾಳೆಯ ಪುಡಿ ವಿತರಿಸಲಾಗುತ್ತಿದೆ.
ಸದ್ಯಕ್ಕೆ ಪ್ರತಿದಿನ 8-10 ಲೋಡ್ ಮೇವು ವಿತರಿಸಲಾಗುತ್ತಿದ್ದು, ಇತರ ಸ್ವಯಂಸೇವಾ ಸಂಸ್ಥೆಗಳು ಸುಮಾರು 5 ಲೋಡ್ ಮೇವು ವಿತರಿಸುತ್ತಿವೆ.
ಹಸಿವು ಹಾಗೂ ಮೇವಿನ ಕೊರತೆಯಿಂದಾಗಿ ಒಂದು ಜಾನುವಾರು ಕೂಡಾ ಜೀವ ಕಳೆದುಕೊಳ್ಳಬಾರದು ಎಂಬ ಸಂಕಲ್ಪದೊಂದಿಗೆ ಸ್ವಾಮೀಜಿಯವರು ಈ ಬೃಹತ್ ಆಂದೋಲನ ಆಯೋಜಿಸಿದ್ದು, ಮಳೆ ಬಂದು ಮತ್ತೆ ಜಾನುವಾರುಗಳಿಗೆ ಮೇವು ಲಭಿಸುವವರೆಗೂ ಮೇವು ಪೂರೈಸಲು ರಾಮಚಂದ್ರಾಪುರ ಮಠ ದಾನಿಗಳ ಸಹಕಾರ ಕೋರಿದೆ ಎಂದು ಮಠದ ಕಾಮದುಘಾ ವಿಭಾಗದ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ಹೇಳಿದ್ದಾರೆ.