ರಾಘವೇಶ್ವರ ಸ್ವಾಮೀಜಿಗೆ ಬೆದರಿಕೆ : ದಂಪತಿ ಬಂಧನ
ಬೆಂಗಳೂರು, ಆ.27 : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಕುರಿತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ರಾಮಕಥಾ ನಡೆಯಲು ಬಿಡುವುದಿಲ್ಲ ಎಂದು ಮಠದ ವ್ಯವಸ್ಥಾಪಕರಿಗೂ ಬೆದರಿಕೆ ಕರೆ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳಾದ ದಿವಾಕರ ಶಾಸ್ತ್ರೀ, ಪೇಮಲತಾ ಅವರನ್ನು ಹೊನ್ನಾವರದ ಪೊಲೀಸರು ಬಂಧಿಸಿದ್ದು, ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಮತ್ತು ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಹಾಜರಾಗದಂತೆ ಬಂಧಿತರು ಕಲಾವಿದರಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಆದರೆ, ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ದೂರು ನೀಡಲು ಪ್ರೇಮಲತಾ ನಿರ್ಧರಿಸಿದ್ದರು ಇದರಿಂದ ಸಿಟ್ಟಿಗೆದ್ದ ಸ್ವಾಮೀಜಿಗಳು ಸೇಡಿನ ಉದ್ದೇಶದಿಂದಾಗಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಪ್ರೇಮಲತಾ ಪುತ್ರಿ ಬೆಂಗಳೂರಿನ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದಾರೆ. ಏನಿದು ಘಟನೆ ಇಲ್ಲಿದೆ ನೋಡಿ
ಏನಿದು ಘಟನೆ
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ `ರಾಮಕಥಾ` ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಪ್ರೇಮಲತಾ ಮತ್ತು ಪತಿ ದಿವಾಕರ್ ಅವರನ್ನು ಹೊನ್ನಾವರದ ಪೊಲೀಸರು ಬಂಧಿಸಿದ್ದಾರೆ.
ಯಾರಿಗೆ ಬೆದರಿಕೆ ಹಾಕಿದ್ದರು
ಶ್ರೀಗಳ ರಾಮಕಥಾ ಮತ್ತು ಚಾತುರ್ಮಾಸ್ಯ ಕಾರ್ಯಕ್ರಮ ಹೊನ್ನಾವರ ತಾಲೂಕು ಕೆಕ್ಕಾರು ಮಠದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಗೀತಕಾರರಾದ ಡಾ. ಗಜಾನನ ಶರ್ಮಾ, ಗಾಯಕಿ ಶಂಕರಿ ಮೂರ್ತಿ ಬಾಳಿಲ ಮತ್ತು ಗಾಯಕಿ ದೀಪಿಕಾ ಅವರಿಗೆ ಬೆದರಿಕೆ ಹಾಕಲಾಗಿದೆ.
ವಿವಿಧ ಕಡೆ ದೂರು ದಾಖಲು
ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ, ಹೊನ್ನಾವರ, ಚನ್ನಮ್ಮನಕೆರೆ ಅಚ್ಚುಕಟ್ಟು ಮುಂತಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಪುತ್ರಿ ಹೇಳುವುದೇ ಬೇರೆ
ಆದರೆ, ಬಂಧಿತ ಪ್ರೇಮಲತಾ ದಿವಾಕರ್ ಪುತ್ರಿ ಬೇರೆ ಆರೋಪ ಮಾಡಿದ್ದಾರೆ. ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ದೂರು ನೀಡಲು ಪ್ರೇಮಲತಾ ನಿರ್ಧರಿಸಿದ್ದರು ಇದರಿಂದ ಸಿಟ್ಟಿಗೆದ್ದ ಸ್ವಾಮೀಜಿಗಳು ಸೇಡಿನ ಉದ್ದೇಶದಿಂದಾಗಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಬೆಂಗಳೂರಿನ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ವಾಮೀಜಿಗಳಿಂದ ಪತ್ರಿಕಾಗೋಷ್ಠಿ
ಇಂದು ಮಧ್ಯಾಹ್ನ 12.30ಕ್ಕೆ ರಾಘವೇಶ್ವರ ಸ್ವಾಮೀಗಳು ಪತ್ರಿಕಾಗೋಷ್ಠಿ ಕರೆದಿದ್ದು, ಘಟನೆ ಕುರಿತು ವಿವರ ನೀಡಲಿದ್ದಾರೆ. ದಂಪತಿಗಳನ್ನು ಪೊಲೀಸರು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.