ರಾಜ್ಯಸಭೆ ಚುನಾವಣೆ 2016 : ನಂಬರ್ ಗೇಮ್
ಬೆಂಗಳೂರು, ಜೂನ್ 06 : ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ರಾಜಕೀಯ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿವೆ. ಚುನಾವಣೆಯ ನಂಬರ್ ಗೇಮ್ನ ಚಿತ್ರಣ ಇಲ್ಲಿದೆ.
ಜೆಡಿಎಸ್ ಪಕ್ಷೇತರ ಸದಸ್ಯರನ್ನು ಸೆಳೆಯಬಹುದು ಎಂದು ಕಾಂಗ್ರೆಸ್ ರೆಸಾರ್ಟ್ ರಾಜಕೀಯ ಆರಂಭಿಸಿದೆ. 11 ಪಕ್ಷೇತರ ಶಾಸಕರು ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮುಂಬೈಗೆ ತೆರಳಿದ್ದು, ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. [ರಾಜ್ಯಸಭೆ ಚುನಾವಣೆ 2016 : ಅಭ್ಯರ್ಥಿಗಳ ಆಸ್ತಿ ವಿವರಗಳು]
ರಾಜ್ಯಸಭೆ ಚುನಾವಣೆ ಕಣದಲ್ಲಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ನಿಂದ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ ಕಣದಲ್ಲಿದ್ದಾರೆ. ಜೆಡಿಎಸ್ನಿಂದ ಬಿ.ಎಂ.ಫಾರೂಕ್ ಅಭ್ಯರ್ಥಿಯಾಗಿದ್ದಾರೆ. ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಲು 45 ಮತಗಳು ಬೇಕು. [ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ರಿಟರ್ನ್ಸ್, ಕಾಂಗ್ರೆಸ್ ಡೈರೆಕ್ಷನ್]
ಜೂನ್ 11ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ. ಕಾಂಗ್ರೆಸ್ನ 3ನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಮತ್ತು ಜೆಡಿಎಸ್ ಬಿ.ಎಂ.ಫಾರೂಕ್ ಅವರ ನಡುವಿನ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಚುನಾವಣೆಯ ನಂಬರ್ ಗೇಮ್ನ ವಿವರ ಹೀಗಿದೆ... [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?]
ಕಾಂಗ್ರೆಸ್ನಲ್ಲಿ ಮೂವರು ಅಭ್ಯರ್ಥಿಗಳಿದ್ದಾರೆ
ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಶಾಸಕರ ಬಲ ಹೊಂದಿದೆ. ಆಸ್ಕರ್ ಫರ್ನಾಂಡೀಸ್ ಮತ್ತು ಜೈರಾಮ್ ರಮೇಶ್ ಅವರಿಗೆ 45 ಮತಗಳು ಹಂಚಿಕೆಯಾದರೆ 90 ಮತಗಳಾಗುತ್ತವೆ. ಉಳಿದ 33 ಮತಗಳು ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಹಂಚಿಕೆಯಾಗುತ್ತದೆ. ಆಗ 12 ಮತಗಳ ಕೊರತೆ ಎದುರಾಗುತ್ತದೆ. ಸರ್ವೋದಯ ಪಕ್ಷದ ಕೆ.ಎಸ್.ಪುಟ್ಟಣ್ಣಯ್ಯ, ಕರ್ನಾಟಕ ಮಕ್ಕಳ ಪಕ್ಷದ ಅಶೋಕ್ ಖೇಣಿ, ಕೆಜೆಪಿಯ ಗುರುಪಾಟೀಲ್, ಬಿ.ಆರ್.ಪಾಟೀಲ್, ಬಿಎಸ್ಆರ್ ಕಾಂಗ್ರೆಸ್ನ ಪಿ.ರಾಜೀವ್ ಮತ್ತು ಪಕ್ಷೇತರರ ಬೆಂಬಲ ಸಿಕ್ಕರೆ ಕೆ.ಸಿ.ರಾಮಮೂರ್ತಿ ಗೆಲ್ಲುತ್ತಾರೆ ಎಂಬುದು ಲೆಕ್ಕಾಚಾರ. ಅಲ್ಲದೇ ಜೆಡಿಎಸ್ನ 5 ಶಾಸಕರು ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ.
ಬಿಜೆಪಿಗೆ ಸಮಸ್ಯೆಯೇ ಇಲ್ಲ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ (ಸ್ವತಂತ್ರ) ನಿರ್ಮಲಾ ಸೀತಾರಾಮನ್ ಬಿಜೆಪಿಯ ಅಭ್ಯರ್ಥಿ ವಿಧಾನಸಭೆಯಲ್ಲಿ ಬಿಜೆಪಿ 44 ಶಾಸಕರ ಬಲ ಹೊಂದಿದೆ. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.
ಪಕ್ಷೇತರರು ಜೆಡಿಎಸ್ ಬೆಂಬಲಿಸಬೇಕು
ವಿಧಾನಸಭೆಯಲ್ಲಿ ಜೆಡಿಎಸ್ 40 ಸದಸ್ಯ ಬಲ ಹೊಂದಿದೆ. ಅಭ್ಯರ್ಥಿ ಬಿ.ಎಂ.ಫಾರೂಕ್ ಅವರು ಗೆಲ್ಲಲು 45 ಮತಗಳು ಬೇಕು. ಪಕ್ಷೇತರರು ಜೆಡಿಎಸ್ಗೆ ಬೆಂಬಲ ನೀಡಬಹುದು ಎಂಬುದು ನಾಯಕರ ಲೆಕ್ಕಾಚಾರ, ಕಾಂಗ್ರೆಸ್ನಲ್ಲಿನ ಕೆಲವು ಭಿನ್ನಮತೀಯರು ಜೆಡಿಎಸ್ ಬೆಂಬಲಿಸಬಹುದು ಎಂಬ ನೀರಿಕ್ಷೇ ಇದೆ. ಯಾರು ಬೆಂಬಲಿಸುತ್ತಾರೆ ಕಾದು ನೋಡಬೇಕು.
ಜಮೀರ್ ಅಂಡ್ ಟೀಮ್ ಯಾರಿಗೆ ಮತ ಹಾಕುತ್ತಾರೆ?
ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಇತರ ನಾಲ್ವರು ಶಾಸಕರು ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಅವರು ಕಾಂಗ್ರೆಸ್ಗೆ ಮತ ಹಾಕಿದರೆ ಜೆಡಿಎಸ್ಗೆ ಸಂಕಷ್ಟ ಎದುರಾಗಲಿದೆ. ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಇಕ್ಬಾಲ್ ಅನ್ಸಾರಿ (ಗಂಗಾವತಿ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ) ಯಾರಿಗೆ ಮತ ಹಾಕುವರು ಎಂಬುದು ಕುತೂಹಲ ಮೂಡಿಸಿದೆ.
ಬಿ.ಎಂ.ಫಾರೂಕ್ಗೆ ಬೆಂಬಲ
ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರು ನಾಮಪತ್ರ ಸಲ್ಲಿಸುವಾಗ ಸತೀಶ್ ಸೈಲ್ (ಕಾರವಾರ), ಬಿ.ಆರ್.ಪಾಟೀಲ್ (ಅಳಂದ), ಸಂಭಾಜಿ ಪಾಟೀಲ್ (ಬೆಳಗಾವಿ ದಕ್ಷಿಣ), ಮಂಕಾಳ್ ವೈದ್ಯ (ಭಟ್ಕಳ), ಕುಡಚಿ ರಾಜೀವ್ (ಕುಡಚಿ), ನಾಗೇಂದ್ರ (ಕೂಡ್ಲಗಿ) ಮುಂತಾದ ಶಾಸಕರು ಸೂಚಕರಾಗಿ ಸಹಿ ಹಾಕಿದ್ದಾರೆ. ಈಗ ಅವರು ಯಾರಿಗೆ ಮತ ಹಾಕುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.