ಮಹದಾಯಿ ಪರ ಸಂಸತ್ ನಲ್ಲಿ ಬಿಎಸ್ ವೈ ಏಕೆ ಪ್ರತಿಭಟನೆ ಮಾಡ್ಲಿಲ್ಲ?
ಗದಗ, ಜುಲೈ 21 : ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರ ಆಮರಣ ಉಪವಾಸ ಸತ್ಯಾಗ್ರಹ ಜುಲೈ 21ರಂದು ಆರನೇ ದಿನಕ್ಕೆ ಕಾಲಿಸಿರಿಸಿದೆ. ಈ ವೇಳೆ ಪ್ರತಿಭಟನೆಕಾರರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಒನ್ ಇಂಡಿಯಾದೊಂದಿಗೆ ಮಾತನಾಡಿದ ಸೊಬರದಮಠ ಅವರು, "ರೈತ ಪರ ನಾಯಕ ಎಂದು ಕರೆಸಿಕೊಳ್ಳುವ ಯಡಿಯೂರಪ್ಪ ಹೋರಾಟದಲ್ಲಿ ಮಡಿದ ಈ ಭಾಗದ ಆರು ರೈತರ ಪರವಾಗಿ ಸಂಸತ್ನಲ್ಲಿ ಧ್ವನಿ ಎತ್ತುತ್ತಿಲ್ಲ. ಕೊನೆ ಪಕ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನವೊಲಿಸಿ ಮಾತುಕತೆ ಮೂಲಕ ಮಹದಾಯಿ ವಿವಾದವನ್ನು ಬಗೆ ಹರಿಸಲು ಪ್ರಯತ್ನಿಸುತ್ತಿಲ್ಲ" ಎಂದು ಅಸಮದಾನ ವ್ಯಕ್ತಪಡಿಸಿದರು.
ಮೊದಲ ನೀರು, ನಂತ್ರ ಧ್ವಜ - ಮಹಾದಾಯಿ ಹೋರಾಟಗಾರರ ಒಕ್ಕೊರಲ ಧ್ವನಿ
ರಾಜ್ಯದಲ್ಲಿ ಆರ್ಎಸ್ಎಸ್ ಮುಖಂಡರ ಸಾವು ನಮಗೂ ಬೇಸರ ತಂದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಂಸತ್ ಎದುರು ನಡೆದ ಪ್ರತಿಭಟನೆಗೆ ನಮ್ಮ ವಿರೋಧವಿಲ್ಲ.
ಆದರೆ, ಮಹದಾಯಿ, ಕಳಸಾ-ಬಂಡೂರಿಗಾಗಿ ನಡೆದ ಹೋರಾಟದಲ್ಲಿ ಆರು ಜನ ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ.
ಇವರ ಪರವಾಗಿಯೂ ಯಡಿಯೂರಪ್ಪ ಸಂಸತ್ ಭವನದ ಎದುರು ಯಾಕೆ ಪ್ರತಿಭಟನೆ ಮಾಡಲಿಲ್ಲ ಎಂದು ಆಮರಣಾಂತ ಉಪವಾಸ ನಿರತ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಪ್ರಶ್ನಿಸಿದರು.
'ಮಹದಾಯಿ ನೀರು ಕರ್ನಾಟಕಕ್ಕೆ ಕೊಡುವ ಪ್ರಶ್ನೆಯಿಲ್ಲ ಎಂದಿದ್ದ ಸೋನಿಯಾ'
ವೀರೇಶ್ ಅವರ ಆರೋಗ್ಯದ ಮೇಲೆ ನಿಗಾ ವಹಿಸಿರುವ ವೈದ್ಯರು, ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಆದರೆ, ಸೊರಬದಮಠ ಅವರ ಆರೋಗ್ಯ ಕೊಂಚ ಕ್ಷೀಣಿಸಿದ್ದು, ನೀರು ಬಿಟ್ಟು ಬೇರೆನು ಸೇವಿಸುತ್ತಿಲ್ಲ.
ಈ ಮಧ್ಯೆ ನರಗುಂದ ಪಟ್ಟದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ನವಲಗುಂದ ತಾಲೂಕಿನ ಯಮನೂರು ಗ್ರಾಮಸ್ಥರು ನರಗುಂದದವರೆಗೂ ಪಾದಯಾತ್ರೆ ಮೂಲಕ ಆಗಮಿಸಿ ಮಹದಾಯಿ, ಕಳಸಾ-ಬಂಡೂರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕೋಡಿಹಳ್ಳಿ ಚಂದ್ರಶೇಖರ ಭೇಟಿ: ಜುಲೈ 21ರಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭೇಟಿ ನೀಡಿ ಸೊರಬದಮಠ ಅವರಿಗೆ ಬೆಂಬಲ ಸೂಚಿಸಿದರು.
ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಳೆದುಕೊಂಡ ಮಹಾದಾಯಿ ಹೋರಾಟಗಾರರು
ಅಲ್ಲದೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ರೈತರಿಗೆ ಸಿಗಬೇಕಾದ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ತಂದೊಡ್ಡಿರುವ ಆಡಳಿತ ವ್ಯವಸ್ಥೆ ವಿರುದ್ಧ ಗುಡುಗಿದರು.
ಮುಖ್ಯಮಂತ್ರಿ ದೂರವಾಣಿ ಮೂಲಕ ಮನವೊಲಿಕೆ ಯತ್ನ: ಈ ಮಧ್ಯೆ ಜುಲೈ 20ರಂದು ಧಾರವಾಡಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವೊಲಿಕೆ ಮಾಡುವ ಯತ್ನವೂ ವಿಫಲಗೊಂಡಿದೆ.
'ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಸರ್ಕಾರ ಬದ್ದವಿದ್ದು, ಇದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ. ಸರ್ಕಾರ ಹೋರಾಟಗಾರರ ಪರವಾಗಿದ್ದು, ಉಪವಾಸ ಸತ್ಯಾಗ್ರಹ ಕೈಬಿಡಬೇಕು' ಎಂದು ಮನವಿ ಮಾಡಿದರು ಎನ್ನಲಾಗಿದೆ.
ಆದರೆ, ಇದಕ್ಕೆ ಒಪ್ಪದ ಸೊರಬದಮಠ 'ಮಹದಾಯಿ ಹೋರಾಟ ಆರಂಭವಾಗಿ ಎರಡು ವರ್ಷ ಕಳೆದಿದೆ. ನೀವು ಒಂದೇ ಒಂದು ಬಾರಿ ನರಗುಂದದ ಹೋರಾಟ ಸ್ಥಳಕ್ಕೆ ಭೇಟಿ ನೀಡಿಲ್ಲ.
ಮೊದಲು ನೀವು ಇಲ್ಲಿಗೆ ಬನ್ನಿ, ಉಪವಾಸ ಹಿಂತೆಗೆದುಕೊಳ್ಳುವ ಬಗ್ಗೆ ಚಿಂತನೆ ಮಾಡುತ್ತೇನೆ' ಎಂದು ಕಡಕ್ಕಾಗಿ ಉತ್ತರಿಸಿದ್ದಾರೆ.