ಮಂಡ್ಯದಲ್ಲಿ ಆಲಿಕಲ್ಲು ಮಳೆ: ಧರೆಗುರುಳಿದವು ಕಲ್ಪವೃಕ್ಷ!
ಮಂಡ್ಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬಿರುಗಾಳಿ ಸಹಿತ ಆಲೀಕಲ್ಲು ಮಳೆ ಜಿಲ್ಲೆಯ ಜನರಿಗೆ ಸಂತಸ ತಂದರೂ, ಹಲವು ರೀತಿಯ ಅನಾಹುತಗಳನ್ನೂ ಉಂಟುಮಾಡಿದೆ.
ಮಂಡ್ಯ, ಏಪ್ರಿಲ್ 12: ಬಾ ಮಳೆಯೇ ಬಾ... ಎಂದು ವರುಣ ದೇವನಿಗಾಗಿ ಪ್ರಾರ್ಥಿಸುತ್ತಿದ್ದ ಮಂಡ್ಯದ ಜನತೆಗೆ ಮಂಗಳವಾರ (ಏಪ್ರಿಲ್ 11) ಸುರಿದ ಮಳೆ ಕೊಂಚ ನಿರಾಳತೆಯನ್ನುಂಟುಮಾಡಿದೆ. ಆದರೆ ಬಿರುಗಾಳಿ ಸಹಿತ ಬಿದ್ದ ಅಲಿಕಲ್ಲು ಮಳೆ ಹಲವು ಅನಾಹುತಗಳನ್ನೂ ಉಂಟು ಮಾಡಿ, 'ಯಾಕಾದ್ರೂ ಬಂತೋ ಮಳೆ' ಎಂದು ಕೆಲವರು ತಲೆಮೇಲೆ ಕೈಹೊತ್ತುಕೊಳ್ಳುವಂತೆ ಮಾಡಿದೆ.
ಕೆ.ಆರ್.ಪೇಟೆ ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ತೆಂಗು, ಅಡಿಕೆ ಮರಗಳು ನೆಲಕ್ಕುರುಳಿದ್ದು, ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದ ಎಂ.ಬಿ.ಶಶಿಧರ್ ಎಂಬುವವರಿಗೆ ಸೇರಿದ ಸುಮಾರು 100 ತೆಂಗಿನ ಮರಗಳು ಬುಡಸಮೇತ ನೆಲಕ್ಕುರುಳಿವೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.[ಮೇಲುಕೋಟೆ ದೇವಾಲಯದ ಕಲ್ಯಾಣಿಯಲ್ಲಿ ಮುಳುಗಿ ವ್ಯಕ್ತಿ ಸಾವು]
ತೆಂಗಿನ ಬೆಳೆಯ ಮೇಲೇ ಅವಲಂಬಿತರಾದ ಹಲವು ರೈತರಿಗೆ ಮಳೆಯಿಂದಾಗಿ ಉತ್ತಮ ಫಸಲು ನೀಡುತ್ತಿದ್ದ ತೆಂಗಿನ ಮರಗಳೇ ಧರೆಗುರುಳಿರುವುದು ಚಿಂತೆಗೀಡು ಮಾಡಿದೆ.
ಚಂದಗೋನಹಳ್ಳಿಯಮ್ಮ ಶ್ರೀ ಕ್ಷೇತ್ರದಲ್ಲಿ ನಿರ್ಮಿಸಲಾಗಿದ್ದ ಸುಮಾರು 30 ತಾತ್ಕಾಲಿಕ ಊಟದ ಶೆಡ್ ಗಳ ತಗಡಿನ ಮತ್ತು ಸಿಮೆಂಟ್ ಶೀಟಿನ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಊಟಕ್ಕೆ ಕುಳಿತಿದ್ದ ಹಲವು ಮಂದಿಗೆ ಶೀಟುಗಳು ಬಡಿದು ಗಾಯಗಳಾಗಿವೆ. ಸೀರೆಯ ತೊಟ್ಟಿಲಿನಲ್ಲಿ ಮಲಗಿದ್ದ ಎರಡು ವರ್ಷದ ಮಗು ಬಿರುಗಾಳಿಯ ರಭಸಕ್ಕೆ ಹಾರಿ ಬಿದ್ದ ಘಟನೆಯೂ ನಿನ್ನೆ ನಡೆದಿದ್ದು, ವ್ಯಕ್ತಿಯೊಬ್ಬ ತತ್ ಕ್ಷಣ ಮಗುವನ್ನು ರಕ್ಷಿಸಿದ್ದರಿಂದ ಮಗು ಅಪಾಯದಿಂದ ಪಾರಾಗಿದೆ.