ನಟಿ ಪೂಜಾಗಾಂಧಿ ಬಂಧನ, ಜಾಮೀನು, ಬಿಡುಗಡೆ
ರಾಯಚೂರು, ಏ.27: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸೆಷನ್ಸ್ ಕೋರ್ಟಿನಿಂದ ಸಮನ್ಸ್ ಪಡೆದಿದ್ದ ನಟಿ ಕಮ್ ರಾಜಕಾರಣಿ ಪೂಜಾಗಾಂಧಿ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು.
ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪೂಜಾಗಾಂಧಿಯವರು ಅನುಮತಿ ಪಡೆಯದೆ ಖಾಸಗಿ ವಾಹನದಲ್ಲಿ ಪ್ರಚಾರದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿಚಕ್ಷಣ ದಳ ಸದರ್ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. [ಪೂಜಾ ಗಾಂಧಿ ಮತ್ತೆ ರಾಜಕೀಯಕ್ಕೆ ಎಂಟ್ರಿ?]
ಅದರೆ, ಚುನಾವಣೆ ಸೋಲಿನ ನಂತರ ಸಿನಿಮಾ ರಂಗದಲ್ಲಿ ತೊಡಗಿಕೊಂಡು ಸಮನ್ಸ್ ಗೆ ಉತ್ತರಿಸಿರಲಿಲ್ಲ. ನಂತರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ಬಂದಿತ್ತು.
ಕಳೆದ
ಮೂರು
ಬಾರಿ
ವಿಚಾರಣೆಯಲ್ಲಿ
ನ್ಯಾಯಾಲಯಕ್ಕೆ
ಬಾರದಿದ್ದ
ಕಾರಣ
ವಾರೆಂಟ್
ಜಾರಿಗೊಳಿಸಲಾಗಿತ್ತು.
ಕೊನೆಗೂ
ಪೂಜಾಗಾಂಧಿ
ಸೋಮವಾರ(ಏ.27)
ಕೋರ್ಟಿಗೆ
ಹಾಜರಾಗಿ
ಕಟಕಟೆಯಲ್ಲಿ
ನಿಂತು
ವಾರೆಂಟ್
ಹಿಂಪಡೆಯುವಂತೆ
ಮನವಿ
ಮಾಡಿದರು.
ವಿಚಾರಣೆಗೆ ಗೈರು ಹಾಜರಿ ಆರೋಪ ಬಂಧನ
ಪೂಜಾ ಗಾಂಧಿ ಅವರನ್ನು ವಿಚಾರಣೆ ಅಂತ್ಯದವರೆಗೂ(ಒಂದು ಗಂಟೆಗಳ ಕಾಲ) ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ನಂತರ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು 500 ರು. ದಂಡ ವಿಧಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ.22ಕ್ಕೆ ಮುಂದೂಡಲಾಗಿದೆ. ಮುಂದಿನ ವಿಚಾರಣೆಗೆ ಹಾಜರಾಗದಿದ್ದರೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗುವುದು ಎಂದು ಪೂಜಾ ಗಾಂಧಿಗೆ ಎಚ್ಚರಿಕೆ ನೀಡಿದರು.
ಚುನಾವಣೆ ಸೋತಿದ್ದ ಪೂಜಾಗಾಂಧಿ
2013ರ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪೂಜಾ ಗಾಂಧಿ ನಾಲ್ಕನೇ ಸ್ಥಾನ ಗಳಿಸಿದ್ದೇ ಸಾಧನೆ. ಪೂಜಾ ಅವರ ಪ್ರತಿಸ್ಪರ್ಧಿಗಳಾದ ಜೆಡಿಎಸ್ ನ ಡಾ.ಎಸ್.ಶಿವರಾಜ್ ಪಾಟೀಲ್ ಮತಗಳು 17, 759 ಪಡೆದು ಜಯಭೇರಿ ಬಾರಿಸಿದ್ದರು. ಸೋತು ಸುಣ್ಣವಾದ ಮೇಲೆ ಮತ್ತೆ ಬಣ್ಣ ಹಚ್ಚಿ ಬೆಳ್ಳಿತೆರೆಯತ್ತ ತಿರುಗಿದ ಪೂಜಾ ಅವರು ಮತ್ತೊಮ್ಮೆ ರಾಜಕೀಯ ರಂಗ ಕೈ ಬೀಸಿ ಕರೆಯುತ್ತಿದೆ ಎಂದಿದ್ದರು.
ಮತ್ತೆ ರಾಜಕೀಯ ಪ್ರವೇಶ ಏಕೆ?
ಈಗಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ರಾಜಕೀಯ ರಂಗದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಪೂಜಾ ಗಾಂಧಿ ಅವರಿಗೆ ಚಿತ್ರರಂಗದಲ್ಲೇ ಸಾಕಷ್ಟು ಕೆಲಸಗಳಿರುವಾಗ ಮತ್ತೆ ರಾಜಕೀಯ ರಂಗಕ್ಕೆ ಎಂಟ್ರಿ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ನಿರ್ಮಾಪಕಿಯಾಗಿ ಕೂಡಾ ಪೂಜಾಗಾಂಧಿ ಗುರುತಿಸಿಕೊಂಡಿದ್ದು ಎಚ್ಚರಿಕೆಯಿಂದ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಈ ಸಮಯದಲ್ಲಿ ಪೂಜಾ ಗಾಂಧಿ ಅವರು ಅನಗತ್ಯವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರಾ?
ರಾಜಕೀಯ ಒಳ್ಳೆ ಅನುಭವವನ್ನು ನೀಡಿಲ್ಲ
ಜೆಡಿಎಸ್ ತೊರೆದು ಕೆಜೆಪಿ ಸೇರಿದ್ದ ಪೂಜಾಗಾಂಧಿ ಕೇವಲ ಮೂರೇ ತಿಂಗಳಲ್ಲೇ ಮೂರು ಪಕ್ಷಕ್ಕೆ ಹಾರಿದ್ದರು. ನಂತರ ಆಗ ಬಿಎಸ್ ಆರ್ ಕಾಂಗ್ರೆಸ್ ನಲ್ಲಿದ್ದ ರಕ್ಷಿತಾ ಪ್ರೇಮ್ ಅವರ ಕೋರಿಕೆಗೆ ಮಣಿದು ಬಿ.ಶ್ರೀರಾಮುಲು ಅವರ ಬಡವರ ಶ್ರಮಿಕರ ಕಾಂಗ್ರೆಸ್ ಪಕ್ಷ ಸೇರಿದ್ದರು. ಈಗ ಪೂಜಾ ಗಾಂಧಿ 'ಕೈ' ಯಾವ ಪಕ್ಷ ಹಿಡಿಯುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಇನ್ನೊಂದು ತಿಂಗಳಲ್ಲಿ ಪ್ರಕಟಿಸುವುದಾಗಿ ಪೂಜಾ ಗಾಂಧಿ ಹೇಳಿದ್ದಾರೆ.