ರಾಹುಲ್ ಪ್ರತ್ಯಕ್ಷ, ಕನ್ನಡ ದಿನ ಪತ್ರಿಕೆ ಹೆಡ್ಲೈನ್ ಹೇಗಿದೆ?
ಬೆಂಗಳೂರು, ಏ. 17 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಲ್ಲಿದ್ದರು? ಈ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರ ದೊರಕಿಲ್ಲ. ಆದರೆ, 56 ದಿನಗಳ ಬಳಿಕ ರಾಹುಲ್ ತವರಿಗೆ ಮರಳಿದ್ದು ಎಲ್ಲಾ ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರಿಗೆ ಸುದ್ದಿ.
ಬುಧವಾರ ರಾತ್ರಿ 10 ಗಂಟೆಗೆ ದೆಹಲಿ ಏರ್ಪೋರ್ಟ್ಗೆ ಆಗಮಿಸಿದ ರಾಹುಲ್ ಗಾಂಧಿ ಅವರ ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ 12 ತುಘಲಕ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಬಂದು ಸೇರಿದ್ದಾರೆ. ಗುರುವಾರ ತಾಯಿ ಸೋನಿಯಾ ಗಾಂಧಿ ಹಾಗೂ ಅಕ್ಕ ಪ್ರಿಯಾಂಕಾ ಗಾಂಧಿ ಅವರನ್ನು ಮಾತ್ರ ರಾಹುಲ್ ಭೇಟಿಯಾಗಿದ್ದಾರೆ. [ರಾಹುಲ್ ನಾಪತ್ತೆಯಾಗಿದ್ದೇಕೆ? ಟ್ವಿಟ್ಟರಿನಲ್ಲಿ ರಹಸ್ಯ ಲೀಕ್]
ಕಾಂಗ್ರೆಸ್ ಉಪಾಧ್ಯಕ್ಷರು ತವರಿಗೆ ಬಂದಿದ್ದು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲಾ ಭಾಷೆಯ ಪತ್ರಿಕೆಗಳಿಗೂ ಸುದ್ದಿ. ಕರ್ನಾಟಕದ ಕನ್ನಡ ಪತ್ರಿಕೆಗಳೂ ಇದಕ್ಕೆ ಹೊರತಾಗಿಲ್ಲ. ರಾಜ್ಯದ ವಿದ್ಯಾಮಾನಗಳ ಜೊತೆ ರಾಹುಲ್ ಗಾಂಧಿ ಇಂದು ಕನ್ನಡ ಪತ್ರಿಕೆ ಮುಖಪುಟವನ್ನು ಅಲಂಕರಿಸಿದ್ದಾರೆ.[ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ತೆ]
ರಾಹುಲ್ ಗಾಂಧಿ ವಿಯೆಟ್ನಾಂ, ಬ್ಯಾಂಕಾಕ್, ಮ್ಯಾನ್ಮಾರ್, ಥೈಲ್ಯಾಂಡ್, ಯುರೋಪ್, ಭೂತನ್, ಉತ್ತರಾಖಂಡ್ ಸೇರಿದಂತೆ ಎಲ್ಲಿಂದ ಬಂದರು ಎಂಬುದು ತಿಳಿದಿಲ್ಲ. ಆದರೆ, 'ರಾಹುಲ್ ಘರ್ ವಾಪಸಿ' ಇಂದಿನ ಕನ್ನಡ ಪತ್ರಿಕೆಗಳ ಬಹುತೇಕ ಪತ್ರಿಕೆಗಳ ಹೆಡ್ಲೈನ್ ಆಗಿದೆ. ಯಾವ ಪತ್ರಿಕೆ ಹೆಡ್ಲೈನ್ ಏನು?
ರಾಹುಲ್ ಗಾಂಧಿ ಘರ್ ವಾಪಸಿ
ಕನ್ನಡ ಪ್ರಭ 'ರಾಹುಲ್ ಗಾಂಧಿ ಘರ್ ವಾಪಸಿ' ಎಂಬ ಹೆಡ್ ಲೈನ್ ನೀಡಿದೆ. ಕರ್ನಾಟಕದ ಪ್ರಮುಖ ಸುದ್ದಿಗಳ ಜೊತೆಗೆ ರಾಹುಲ್ ಗಾಂಧಿಗೆ ಮುಖಪುಟದಲ್ಲಿ ಜಾಗ ನೀಡಲಾಗಿದೆ.
ರಾಹುಲ್ ಗಾಂಧಿ ಪ್ರತ್ಯಕ್ಷ
ವಿಜಯ ಕರ್ನಾಟಕ 'ರಾಹುಲ್ ಗಾಂಧಿ' ಪ್ರತ್ಯಕ್ಷ ಎಂಬ ಶೀರ್ಷಿಕೆ ನೀಡಿದೆ. ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ನಡೆಯುವ ಹೋರಾಟದಲ್ಲಿ ಅವರ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದೆ.
ರಾಹುಲ್ ಗಾಂಧಿ ಘರ್ ವಾಪಸಿ
'ರಾಹುಲ್ ಗಾಂಧಿ ಘರ್ ವಾಪಸಿ' ಎಂಬ ಶೀರ್ಷಿಕೆಯನ್ನು ವಿಜಯವಾಣಿ ನೀಡಿದ್ದು, ಮುಖಪುಟದಲ್ಲಿ ರಾಹುಲ್ ಗಾಂಧಿ ಫೋಟೋ ಮಾತ್ರ ಲಭ್ಯವಿದೆ. ಕರ್ನಾಟಕದ ಸುದ್ದಿಗೆ ಆದ್ಯತೆ ನೀಡಿದ್ದು, ರಾಹುಲ್ ಆಗಮನದ ವಿವರ 10ನೇ ಪುಟಕ್ಕೆ ಹೋಗಿದೆ.
56 ದಿನಗಳ ಬಳಿಕ ರಾಹುಲ್ ವಾಪಸ್
ಉದಯವಾಣಿ '56 ದಿನಗಳ ಬಳಿಕ ರಾಹುಲ್ ವಾಪಸ್' ಎಂಬ ಶೀರ್ಷಿಕೆಯನ್ನು ನೀಡಿದ್ದು ಮುಖಪುಟದ ಕೊನೆಯಲ್ಲಿ ರಾಹುಲ್ ಸುದ್ದಿಗೆ ಜಾಗ ಕೊಟ್ಟಿದೆ. ಬ್ಯಾಂಕಾಕ್ನಿಂದ ದೆಹಲಿಗೆ ಮರಳಿದ್ದಾರೆ ಎಂದು ಪತ್ರಿಕೆ ಹೇಳಿದೆ.
ರಾಹುಲ್ ಸ್ವದೇಶಕ್ಕೆ ವಾಪಸ್
ವಾರ್ತಾಭಾರತಿ 'ರಾಹುಲ್ ಸ್ವದೇಶಕ್ಕೆ ವಾಪಸ್' ಎಂಬ ಶೀರ್ಷಿಕೆ ನೀಡಿದೆ. ರಾಹುಲ್ ಸ್ವಯಂ ಪ್ರೇರಿತ ಅಜ್ಞಾತವಾಸ ಅಂತ್ಯಗೊಂಡಿದೆ ಎಂದು ಪತ್ರಿಕೆ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದೆ.
ರಾಹುಲ್ ಬಂದರು ಮ್ಯಾನ್ಮಾರ್ನಿಂದ
'ರಾಹುಲ್ ಬಂದರು ಮ್ಯಾನ್ಮಾರ್ನಿಂದ' ಎಂದು ಪ್ರಜಾವಾಣಿ ಹೆಡ್ಲೈನ್ ಕೊಟ್ಟಿದ್ದು ಮುಖಪುಟದಲ್ಲಿ ಕರ್ನಾಟಕದ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಹುಲ್ ಗಾಂಧಿ ಚಿಕ್ಕಫೋಟೋ ಮುಖಪುಟದಲ್ಲಿದೆ.