ವಾಜಪೇಯಿ ಅವರನ್ನು ಮತ್ತೆ ಪ್ರಧಾನಿ ಮಾಡಿದ ಸಿದ್ದರಾಮಯ್ಯ!
ಬೆಂಗಳೂರು, ಅಕ್ಟೋಬರ್. 09: : ಎರಡೂವರೆ ಗಂಟೆ ತಡವಾಗಿ ಆರಂಭವಾದ ಸಮಾವೇಶ, ಕಾಯಿಸಿದಕ್ಕೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣ ಹಾಡಿ ಮುಯ್ಯಿ ತೀರಿಸಿಕೊಂಡ ಗಾಯಕಿ ಸಂಗೀತಾ ಕಟ್ಟಿ. ವಂದೇ ಮಾತರಂ ಗೀತೆ ಮುಗಿಯಿತು ಎಂದು ಕುಳಿತುಕೊಂಡ ರಾಹುಲ್ ಗಾಂಧಿಯನ್ನು ಕೈ ಹಿಡಿದು ಮತ್ತೆ ನಿಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಸಿಎಂ ಸಿದ್ದರಾಮಯ್ಯ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮತ್ತೆ ಪ್ರಧಾನಿ ಎಂದು ಹೇಳಿದ ಸಿಎಂ.... ಇವು ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಗ್ರಾಮ ಸ್ವರಾಜ್ ಸಮಾವೇಶದ ಹೈ ಲೈಟ್ಸ್.
ಕರ್ನಾಟಕದ ರೈತರು ಭಾರತದ ರೈತರಲ್ಲವೇ? ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಕೊಡುವ ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ರೈತರ ಸಂಕಷ್ಟ ಕಾಣುತ್ತಿಲ್ಲವೆ? ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನೇರ ಪ್ರಶ್ನೆ.[ಕರ್ನಾಟಕದಲ್ಲಿ ರಾಹುಲ್ ಗಾಂಧಿ ಸಂಪೂರ್ಣ ಚಿತ್ರಣ]
ಕರ್ನಾಟಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಪ್ರವಾಸ ನಡೆಸುತ್ತಿದ್ದಾರೆ. ಅಕ್ಟೋಬರ್ 9 ರಂದು ಮಂಡ್ಯ ಜಿಲ್ಲೆಯ ರೈತರ ಮನೆಗೆ ತೆರಳಿ ಸಾಂತ್ವನ ಹೇಳಿದ ರಾಹುಲ್ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.[ರಾಹುಲ್ ಗಾಂಧಿ ಸಮಾವೇಶಕ್ಕಾಗಿ ಬೆಳೆದ ಬೆಳೆ ಧ್ವಂಸ?]
ಪ್ರಧಾನಿ ನರೇಂದ್ರ ಇಡೀ ದೇಶವನ್ನು ತಮ್ಮ ಸಚಿವಾಲಯದ ಮೂಲಕ ನಡೆಸಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ದೇಶದ ನೈಜ ಶಕ್ತಿ ಇರುವುದು ಗ್ರಾಮಗಳಲ್ಲಿ ಎಂಬುದನ್ನು ಮೋದಿ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಘಟನಾವಳಿಗಳನ್ನು ಮುಂದೆ ನೋಡಿ...
ಎರಡೂವರೆ ಗಂಟೆ ತಡವಾಗಿ ಆರಂಭವಾದ ಕಾರ್ಯಕ್ರಮ
ನಿಗದಿಯಂತೆ ಮಧ್ಯಾಹ್ನ 2.30ಕ್ಕೆ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಕಾರ್ಯಕರ್ತರ ಸಮಾವೇಶ ಆರಂಭವಾಗಬೇಕಿತ್ತು. ಆದರೆ ರಾಹುಲ್ ಗಾಂಧಿ ಮಂಡ್ಯದಿಂದ ಆಗಮಿಸಿದ ಮೇಲೆ ಕಾರ್ಯಕ್ರಮ ಶುರುವಾಗಿದ್ದು ಸಂಜೆ 4.30ಕ್ಕೆ.
ವಂದೇ ಮಾತರಂಗೆ ಕೆಳಕ್ಕೆ ಕುಳಿತ ರಾಹುಲ್
ಸಮಾವೇಶವನ್ನು ವಂದೇ ಮಾತರಂ ಗೀತೆಯ ಮೂಲಕ ಆರಂಭ ಮಾಡಲಾಯಿತು. ಗಾಯಕಿ ಸಂಗೀತಾ ಕಟ್ಟಿ ಅವರು ಗೀತೆಯನ್ನು ಸ್ವರಬದ್ಧವಾಗಿ ಹಾಡುತ್ತ ಒಂದು ಕ್ಷಣ ನಿಲ್ಲಿಸಿದ್ದರು ಆಗ ರಾಹುಲ್ ತಮಗೆ ಮೀಸಲಿದ್ದ ಆಸನದ ಮೇಲೆ ಕುಳಿತುಕೊಳ್ಳಲು ಯತ್ನ ಮಾಡಿದರು. ಆದರೆ ಸಿಎಂ ಮತ್ತು ಪರಮೇಶ್ವರ ಅವರನ್ನು ಮತ್ತೆ ನಿಲ್ಲಿಸಿದರು.
ಪ್ರಧಾನಿ ವಾಜಪೇಯಿ ರೈತರ ಹಿತ ಮರೆತಿದ್ದಾರೆ!
ತಮ್ಮ ಭಾಷಣದಲ್ಲಿ ಬಿಜೆಪಿಯನ್ನು, ಬಿಜೆಪಿಯ ರೈತ ಚೈತನ್ಯ ಯಾತ್ರೆಯನ್ನು ತರಾಟೆಗೆ ತೆದುಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮಾತಿನ ಭರದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೈತರ ಹಿತ ಮರೆತಿದ್ದಾರೆ ಎಂದರು. ಹಿಂದೆ ಕುಳಿತಿದ್ದ ಸಚಿವ ಎಚ್.ಕೆ ಪಾಟೀಲ್ ಮೋದಿ ಎಂದು ಹೇಳಿ ಭಾಷಣವನ್ನು ಸರಿದಾರಿಗೆ ತಂದರು.
ದೇಶದ ಶಕ್ತಿ ಇರುವುದು ಹಳ್ಳಿಗಳಲ್ಲಿ
ಪ್ರಧಾನಿ ನರೇಂದ್ರ ಇಡೀ ದೇಶವನ್ನು ತಮ್ಮ ಸಚಿವಾಲಯದ ಮೂಲಕ ನಡೆಸಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ದೇಶದ ನೈಜ ಶಕ್ತಿ ಇರುವುದು ಗ್ರಾಮಗಳಲ್ಲಿ ಎಂಬುದನ್ನು ಮೋದಿ ತಿಳಿದುಕೊಳ್ಳಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾವನಾಗಮನ
ನಟಿ, ಕಾಂಗ್ರೆಸ್ ನಾಯಕಿ ಬಾಲಭವನ ಅಧ್ಯಕ್ಷೆ ಭಾವನಾ ಸಮಾವೇಶಕ್ಕೆ ಬಂದಿದ್ದು ಹೀಗೆ. ಚಿತ್ರನಟ ಶಶಿಕುಮಾರ್ ಸಹ ಸಮಾವೇಶದಲ್ಲಿ ಹಾಜರಿದ್ದರು.
ಮುಯ್ಯಿ ತೀರಿಸಿಕೊಂಡ ಸಂಗೀತಾ ಕಟ್ಟಿ
ಮಧ್ಯಾಹ್ನ 1 ಗಂಟೆಯಿಂದ ನಿರಂತರವಾಗಿ ಸಂಗೀತ ರಸಧಾರೆ ಹರಿಸುತ್ತ, ದೇಶಭಕ್ತಿ ಗೀತೆಗಳ ಮೂಲಕ ಎಲ್ಲರ ಕಿವಿಗೆ ಇಂಪೆರಚುತ್ತಿದ್ದ ಗಾಯಕಿ ಸಂಗೀತಾ ಕಟ್ಟಿ ವಂದೇ ಮಾತರಂ ಗೀತೆಯನ್ನು ಸುದೀರ್ಘವಾಗಿ ಹಾಡಿದರು.
ಸಾಲಮನ್ನಾ ಗಿಫ್ಟ್ ಕೋಡ್ತಾರಾ?
ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ರೈತರಿಗೆ ಸಾಲಮನ್ನಾದ ಗಿಫ್ಟ್ ಕೋಡ್ತಾರಾ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಆರ್ಈರ್ವಾದ ಮಾಡಲು ಆಗಮಿಸಿದ ಗವಿ ತಿಮ್ಮಮ್ಮ
ರಾಹುಲ್ ಗಾಂಧಿಗೆ ಆಶೀರ್ವಾದ ಮಾಡಲು 102 ವರ್ಷದ ಗವಿ ತಿಮ್ಮಮ್ಮರನ್ನು ಕರೆದುಕೊಂಡು ಬರುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು.
ಅಂಬರೀಶ್, ರಮ್ಯಾ ಗೈರು
ಮಂಡ್ಯದಲ್ಲಿ ತರಾಟೆಗೆ ಸಿಕ್ಕಿದ್ದ ವಸತಿ ಸಚಿವ ಅಂಬರೀಶ್ ಸಮಾವೇಶದಲ್ಲಿ ಕಾಣಿಸಿಕೊಳ್ಳಲಿಲ್ಲ. ಮತ್ತೊಬ್ಬ ಸಚಿವ ಶಾಮನೂರು ಶಿವಶಂಕರಪ್ಪ ಸಹ ಗೈರಾದಂತೆ ಕಂಡುಬಂತು.
ಅರ್ಧಕ್ಕೆ ಹೊರಟರು
ಸಿಎಂ ಸಿದ್ದರಾಮಯ್ಯ ಭಾಷಣ ಮುಗಿದು ರಾಹುಲ್ ಗಾಂಧಿ ಭಾಷಣ ಆರಂಭವಾದ ತಕ್ಷಣ ಕಾರ್ಯಕರ್ತರು ಏಕಾಏಕಿ ಎದ್ದು ಹೊರಡಲು ಮುಂದಾದರು. ಹಿಂದಿ ಭಾಷೆ ಅರ್ಥವಾಗದ್ದೇ ಇದಕ್ಕೆ ಕಾರಣ ಇದ್ದರೂ ಇರಬಹುದು.