ಧರ್ಮ ಯುದ್ಧದಲ್ಲಿ ಮಡಿದರೆ ಅದುವೇ ಸ್ವರ್ಗ : ರಾಘವೇಶ್ವರ ಶ್ರೀ
ಬೆಂಗಳೂರು, ಆಗಸ್ಟ್ 10: ಜಗತ್ತಿನಲ್ಲಿ ಎರಡು ಮನಸ್ಸುಗಳು ಒಂದಾಗದೇ ಇದ್ದಾಗ ಆಗುವುದು ಯುದ್ಧ. ಧರ್ಮವನ್ನು ಬಿಟ್ಟ ಯುದ್ಧಕ್ಕೆ ಯಾವ ಅರ್ಥವೂ ಇಲ್ಲ. ಯುದ್ಧ ಯಾರಿಗೂ ಬೇಡ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಗಿರಿನಗರದಲ್ಲಿ ಭಾನುವಾರ (ಆ 9) ಛಾತ್ರ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಮಾತನಾಡುತ್ತಾ ರಾಘವೇಶ್ವರ ಶ್ರೀಗಳು, ಯುದ್ಧದಲ್ಲಿ ಧರ್ಮ ಸೇರಿದರೆ ಅದರಷ್ಟು ಪವಿತ್ರ ಯಾವುದೂ ಇಲ್ಲ. ಧರ್ಮದ ಮೇಲೆ ದಾಳಿಯಾದಾಗ ಧರ್ಮ ಯುದ್ಧ ಸಂಭವಿಸುತ್ತದೆ ಎಂದು ಅಭಿಮತ ವ್ಯಕ್ತ ಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಿಗರಿಂದ ನಡೆದ ಸರ್ವ ಸೇವೆಯ ನಂತರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುತ್ತಾ ಶ್ರೀಗಳು, ಧರ್ಮಕ್ಕಾಗಿ, ಧರ್ಮಮಾರ್ಗದಲ್ಲಿ, ಧರ್ಮದ ಫಲಕ್ಕಾಗಿ ನಡೆವುದು ಧರ್ಮಯುದ್ಧ. ಇಂತಹ ಯುದ್ಧದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಧರ್ಮ ಯುದ್ದದಲ್ಲಿ ತಾಟಸ್ಥ್ಯಕ್ಕೆ ಅವಕಾಶವಿಲ್ಲ. ಧರ್ಮ ಯುದ್ಧದಲ್ಲಿ ಮಡಿದರೆ ಸ್ವರ್ಗ. ಧರ್ಮ ಯುದ್ಧದಲ್ಲಿ ಗೆದ್ದರೆ ಭೂಮಿಯೇ ಸ್ವರ್ಗವಾಗುತ್ತದೆ ಎಂದು ಶ್ರೀಗಳು ನುಡಿದಿದ್ದಾರೆ. (ಶ್ರೀಗಳಿಂದ ಹರೇರಾಮ ಮೊಬೈಲ್ App ಬಿಡುಗಡೆ)
ಯೋಗಿ ಮತ್ತು ಯೋಧ ಇವರಿಬ್ಬರೂ ಒಂದೇ. ಈ ಇಬ್ಬರಿಗೆ ಮಾತ್ರ ಸೂರ್ಯಮಂಡಲ ಭೇದಿಸಿ, ಮೋಕ್ಷವನ್ನು ತಲುಪುವ ಸಾಮರ್ಥ್ಯವಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ rank ಪಡೆದ ಸ್ವರೂಪ ಹೆಗಡೆ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು. ಶ್ರೀಭಾರತೀ ಪ್ರಕಾಶನದ ವತಿಯಿಂದ ಗಜಾನನ ಶರ್ಮಾ ರಚಿಸಿದ ಮಕ್ಕಳ ರಾಜ್ಯವ ಕಟ್ಟಿಕೊಡು ಸಿಡಿ ಹಾಗೂ "ಶ್ರೀರಾಘವಾನುಗ್ರಹ" ಕೃತಿ ಲೋಕಾರ್ಪಣಗೊಳಿಸಲಾಯಿತು.
ಶ್ರೀ ಮಠದ ಸಮ್ಮುಖ ಸರ್ವಾಧಿಕಾರಿ ಟಿ ಮಡಿಯಾಲ್, ಖ್ಯಾತ ವಾಗ್ಮಿ ಪ್ರಮೋದ ಹೆಗಡೆ, ಮಹಾಮಂಡಲದ ಅಧ್ಯಕ್ಷ ಡಾ. ವೈ.ವಿ ಕೃಷ್ಣಮೂರ್ತಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಶ್ರೀಮಠದ ಸಿಇಒ ಕೆ.ಜಿ ಭಟ್, ಕಲ್ಲಬ್ಬೆ ರಾಮಕೃಷ್ಣ ಹೆಗಡೆ, ಪ್ರಸನ್ನ ಮಾವಿನಕುಳಿ, ಶ್ರೀಕಾಂತ ಕಾಳಮಂಜಿ ಉಪಸ್ಥಿತರಿದ್ದರು.
ಡಾ. ಸುವರ್ಣಿನೀ ರಾವ್ ಕೊಣಲೆ ಹಾಗೂ ಪ್ರಕಾಶ ಕುಕ್ಕಿಲ ಮಾತನಾಡಿದರು. ಪ್ರಶಾಂತ ಹೆಗಡೆ ಸಭಾಪೂಜೆ ನೆರವೇರಿಸಿದರೆ, ವಿದ್ವಾನ್ ಜಗದೀಶಶರ್ಮಾ ಪ್ರಸ್ಥಾವಿಸಿದರು. ಶ್ರದ್ಧಾ, ವೈಷ್ಣವಿ ಹಾಗೂ ಸಂದೇಶ ತಲಕಾಲಕೊಪ್ಪ ನಿರೂಪಿಸಿದರು.