ನಾಡಿನಲ್ಲಿ ಗೋ ರಕ್ತದ ಹೊಳೆಯ ಬದಲು ಗೋವಿನ ಹಾಲು ಹರಿಯಲಿ
ಬೆಂಗಳೂರು, ಜ 15: ವಿಶ್ವ ಯೋಗ ದಿನ, ಫಾದರ್ಸ್ ಡೇಗಳು ಇರುವ ಹಾಗೆ ಗೋವಿಗೂ ಒಂದು ದಿನವನ್ನು ಆಚರಿಸಬೇಕು, ಸಂಕ್ರಾಂತಿಯ ದಿನವನ್ನೇ ಗೋದಿನವೆಂದು ಆಚರಿಸಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಶ್ರೀಗಳು ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ (ಜ 15) ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ 'ಕಾಮದುಘಾ-ಗೋ ಮಹೋತ್ಸವ' ಕಾರ್ಯಕ್ರಮದಲ್ಲಿದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಸಂಕ್ರಾಂತಿ ಎಂದರೆ ಬದಲಾವಣೆ, ಅದು ಶುಭದ ಬದಲಾವಣೆ.
ಗೋ ಹತ್ಯೆಯಿಂದ ಗೋ ರಕ್ಷಣೆಗೆ ಬದಲಾವಣೆ ಆಗಬೇಕು, ನಾಡಿನಲ್ಲಿ ಗೋ ರಕ್ತದ ಹೊಳೆಯ ಬದಲು ಗೋವಿನ ಹಾಲು ಹರಿಯಲಿ, ಬದಲಾವಣೆ ಬರಲಿ ಎಂದು ಶ್ರೀಗಳು ಹೇಳಿದ್ದಾರೆ. (ಯತಿಗಳು ಒಂದಾದರೆ ಸಮಾಜಕ್ಕೆ ಒಳ್ಳೆಯ ಸಂದೇಶ)
ಸುಮ್ಮನೆ ಕೂರುವುದಲ್ಲ, ಬದಲಾಗಿ ಬದಲಾವಣೆಯನ್ನು ನಾವು ತರಬೇಕು. ಇಂತಹ ಬದಲಾವಣೆಗಳು ಜನರ ಮನಸ್ಸು ಪರಿವರ್ತನೆಯಾದಾಗ ಮಾತ್ರ ಸಾಧ್ಯ. ಗೋವಿನೊಂದಿಗೆ ಒಡನಾಡುವ ಭಾಗ್ಯದಿಂದ ಇಂದಿನ ಮಕ್ಕಳು ವಂಚಿತರಾಗುತ್ತಿದ್ದಾರೆ.
ಕೊಟ್ಟಿಗೆ-ಎತ್ತಿನ ಗಾಡಿಗಳು ಭಾರತದ ಚಿತ್ರಣದಿಂದ ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಕಾಮದುಘಾ ವಿಭಾಗ ಅವೆಲ್ಲವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ.
ಮಕ್ಕಳ ಗೋ ಬಗೆಗಿನ ಪ್ರೀತಿ ಹಾಗೂ ಗೋವಿನೊಂದಿಗೆ ಒಡನಾಡುವ ಬಯಕೆಗೆ ಅವರೆಲ್ಲ ಇಂದು ಎತ್ತಿನ ಗಾಡಿ ಪಯಣಕ್ಕೆ ಮಕ್ಕಳು ಮುಗಿಬೀಳುತ್ತಿರುವುದೇ ಸಾಕ್ಷಿ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಏನೇ ಅಡೆತಡೆಗಳು, ಕಷ್ಟಗಳು ಬಂದರೂ ಹೆದರದೆ ಬೆದರದೇ, ಕುಗ್ಗದೆ ಬಗ್ಗದೇ ಮುನ್ನಡೆಯುವ ಮೂಲಕ ಭಾರತದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ಉಂಟು ಮಾಡೋಣ. ಗೋಮಾತೆಯ ಶಾಂತಿಗಾಗಿ ಹೋರಾಟ ಮಾಡೋಣ. ಗೋವು ಬಾಳಲಿ-ಗೋವಿನಿಂದ ಜಗತ್ತು ಬಾಳಲಿ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿದ್ದ ಸಿದ್ಧಾರೂಢ ಮಿಷನಿನ ಡಾ. ಪ್ರಭುಲಿಂಗ ದೇವರು ಮಾತನಾಡುತ್ತಾ ಉತ್ತರಾಯಣ ಪುಣ್ಯಕಾಲ ಆರಂಭವಾಗಿದೆ. ಗೋ ಮಹೋತ್ಸವದ ಮೂಲಕ ನೀವೆಲ್ಲರೂ ಸಂಕ್ರಾಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದೀರಿ.
ಈ ಕಾರ್ಯಕ್ರಮದಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕಾರ್ಯಕ್ರಮದ ಮೆರಗನ್ನು ಪರಮಪೂಜ್ಯ ಸ್ವಾಮಿಜಿಯವರು ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ವಿ ಸೋಮಣ್ಣ ಮಾತನಾಡುತ್ತಾ, ನನ್ನದು ಹಾಗೂ ರಾಘವೇಶ್ವರ ಶ್ರೀಗಳ ನಡುವೆ ತಂದೆ-ಮಗನ ಸಂಬಂಧವಿದೆ. ಶ್ರೀರಾಮನ ಸಂಕಲ್ಪವನ್ನು ನಾಡಿನ ಬಡವರಿಗೆ ಹಿಂದುಳಿದ ವರ್ಗದವರಿಗೆ ಕಷ್ಟದಲ್ಲಿರುವವರಿಗೆ ತಮ್ಮ ಸಂಕಲ್ಪದ ಮೂಲಕ ಶ್ರೀಗಳು ಸಮರ್ಪಿಸಿದ್ದಾರೆ. (ಅಶ್ಲೀಲ ಸಿಡಿ ಪ್ರಕರಣ : ಸರ್ಕಾರಕ್ಕೆ ಭಕ್ತರ ಪ್ರಶ್ನೆಗಳು)
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಮಹಾಚಿಂತನೆ ರಾಘವೇಶ್ವರ ಶ್ರೀಗಳದ್ದು. ಪ್ರಭು ಶ್ರೀರಾಮ ರಾಘವೇಶ್ವರ ಶ್ರೀಗಳಿಗೆ ಅದೆಂತಹ ಶಕ್ತಿಯನ್ನು ಕೊಟ್ಟಿದ್ದಾನೆ ಅಂದ್ರೆ ಶ್ರೀಗಳು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ ಸಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ಗೋವಿನ ಜೊತೆ ಸಂಬಂಧ ಬೆಳೆಸಿದರೆ ಪ್ರೀತಿ ವಿಶ್ವಾಸದ ನಿಜವಾದ ಅರ್ಥ ಗೊತ್ತಾಗುತ್ತದೆ. ಸ್ವದೇಶಿ ಗೋವಿನ ಉತ್ಪನ್ನಗಳು ಎಲ್ಲ ರೋಗಗಳಿಗೂ ರಾಮಬಾಣ. ಅಂತಹ ಗೋವುಗಳನ್ನು ಸಂರಕ್ಷಿಸುವ, ಬೆಳೆಸುವ ಮಹತ್ಕಾರ್ಯವನ್ನು ಪೂಜ್ಯ ಸ್ವಾಮೀಜಿಯವರು ಮಾಡಿತ್ತಿದ್ದಾರೆ.
ಅವರ ಎಲ್ಲಾ ಸಂಕಲ್ಪಗಳಿಗೆ ನಾವು ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಇದಕ್ಕೂ ಮುನ್ನ ನಡೆದ ವಿಚಾರ ಸಂಕಿರಣದಲ್ಲಿ NDRIನ ಹಿರಿಯ ವಿಜ್ಞಾನಿ ಡಾ. ಕೆ ಪಿ. ಮೇಶ್ ಅವರು 'A1-A2 ಹಾಲಿನ ತೊಳುನಿಕ ಅಧ್ಯಯನ'ದ ಕುರಿತು ಮಾತನಾಡಿದರು.
ಹೈದರಾಬಾದಿನ ಪಶುವೈದ್ಯರಾದ ಡಾ. ಸಾಯಿ ಬುಚ್ಚರಾವ್ ಅವರು 'ದೇಶೀ ಗೋತಳಿ ಹಾಗೂ ಕೃಷಿ'ಯ ಕುರಿತು ಮತ್ತು ಆಯುರ್ವೇದ ತಜ್ಞ ಡಾ. ರಾಮಕೃಷ್ಣ 'ಪಂಚಗವ್ಯ ಮತ್ತು ಆರೋಗ್ಯ' ಎಂಬ ವಿಚಾರಗಳ ಕುರಿತು ಗೋಷ್ಠಿ ನಡೆಸಿದರು.
ಇದಕ್ಕೂ ಮೊದಲು ನಡೆದ ಗೋ ಮಹೋತ್ಸವವನ್ನು ಬಿಬಿಎಂಪಿ ಸದಸ್ಯ ಆನಂದ್ ಹೊಸೂರು ಉದ್ಘಾಟಿಸಿದರು. ಇದರಲ್ಲಿ ವಿವಿಧ ಗೋ ತಳಿಗಳ ಪ್ರದರ್ಶನ, ಗೋಉತ್ಪನ್ನ ಮಳಿಗೆಗಳು ಆಕರ್ಷಣೀಯವಾಗಿದ್ದವು.
ವಿಶೇಷವಾಗಿ ಪಾಕೋತ್ಸವದಲ್ಲಿ ಗೋ ಉತ್ಪನ್ನಗಳಿಂದ ತಯಾರಿಸಿದ ಪೇಡಾ, ಬರ್ಫಿ, ಶಿರಾ, ಶ್ರೀಖಂಡ, ಮಜ್ಜಿಗೆಯ ದೋಸೆ ಸೇರಿದಂತೆ ಬಗೆಬಗೆಯ ಆಹಾರ ಪದಾರ್ಥಗಳು ಜನರ ಬಾಯಲ್ಲಿ ನೀರೂರುವಂತೆ ಮಾಡಿತು. (ರಾಘವೇಶ್ವರ ಶ್ರೀಗಳ ಕೇಸ್ ಬಗ್ಗೆ ಕೆಲವು ಅನುಮಾನಗಳು)
ನಂತರ ನಡೆದ ಲೋಕಾರ್ಪಣ ಸಂದರ್ಭದಲ್ಲಿ ರಾಘವೇಶ್ವರ ಶ್ರೀಗಳು ಸಾನಿಧ್ಯವಹಿಸಿ ಕಾಮದುಘಾ ವಿಭಾಗ ಹೊರತಂದಿರುವ ಕಾಮದುಘಾ ಮಾಹಿತಿ ಪತ್ರ, ಭಾರತೀಯ ಗೋವಂಶ ವೈಭವ ಹಾಗೂ ದ್ವಿಮಾಸ ಪತ್ರಿಕೆಯಾದ 'ಕಾಮದುಘಾ-ಗೋಲೋಕದ ಸುತ್ತಮುತ್ತ' ಎಂಬ ಹೊತ್ತಿಗೆಗಳನ್ನು ಬಿಡುಗಡೆಗೊಳಿಸಿದರು.
ಸಮಾರೋಪ ಸಮಾರಂಭದಲ್ಲಿ ಹವ್ಯಕ ಮಹಾಮಂಡಳಿಯ ಅಧ್ಯಕ್ಷ ಡಾ. ವೈ ವಿ ಕೃಷ್ಣಮೂರ್ತಿ ಮಾತನಾಡಿ ಪ್ರತಿ ಮನೆಯಲ್ಲಿ ಗೋವು ನೆಮ್ಮದಿಯಿಂದ ಜೀವಿಸುವಂತಹ ವಾತಾವರಣ ನಿರ್ಮಾಣ ಮಾಡಿಕೊಡಿ, ಅದಕ್ಕೆ ಪೂರಕ ವ್ಯವಸ್ಥೆಯನ್ನು ಮಠದಿಂದ ಮಾಡಿಕೊಡಲಾಗುವುದು. ಗೋಉತ್ಪನ್ನಗಳನ್ನು ಬಳಸುವ ಮೂಲಕ ಗೋವಂಶದ ಅಭಿವೃದ್ದಿಗೆ ಸಹಕರಿಸೋಣ ಎಂದಿದ್ದಾರೆ.
ಸಮಾರಂಭದಲ್ಲಿ ವಿಜಯನಗರ ಶಾಸಕರಾದ ಕೃಷ್ಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ರಘುನಾಥ್, ಮಹಾಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.