ಯತಿಗಳು ಒಂದಾದರೆ ಸಮಾಜಕ್ಕೆ ಒಳ್ಳೆಯ ಸಂದೇಶ: ರಾಘವೇಶ್ವರ ಶ್ರೀ
ಬೆಂಗಳೂರು, ಡಿ 19: ನಗರದ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ರಾಘವೇಂದ್ರ ಭಾರತಿ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ರಾಘವೇಶ್ವರ ಭಾರತೀ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಶುಕ್ರವಾರ (ಡಿ 18) ಸಂಪನ್ನಗೊಂಡಿದೆ.
ಜೀವನಕ್ಕೆ ಧರ್ಮ ಮೂಲವಾಗಿದ್ದು, ಧರ್ಮವನ್ನು ಅರಿಯಲು ಗುರು ಅವಶ್ಯ, ಹಾಗಾಗಿ ಗುರು ಸರ್ವಶ್ರೇಷ್ಟ ಎಂದು ಹೇಳಲಾಗಿದೆ. ಅಂತೆಯೇ ಶ್ರೇಷ್ಟವಾದ ಆಚಾರ್ಯ ಪರಂಪರೆಯನ್ನು ಪಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಸಾನ್ನಿಧ್ಯ ವಹಿಸಿದ್ದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ. (ಅಶ್ಲೀಲ ಸಿಡಿ ಪ್ರಕರಣ : ಸರ್ಕಾರಕ್ಕೆ ಭಕ್ತರ ಪ್ರಶ್ನೆಗಳು)
ಆರಾಧನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದ ರಾಘವೇಶ್ವರ ಶ್ರೀಗಳು, ಗುರುಗಳಾದ ರಾಘವೇಂದ್ರ ಭಾರತಿ ಶ್ರೀಗಳು ತರ್ಕಾದಿ ಶಾಸ್ತ್ರಗಳಲ್ಲಿ ಅನುಪಮವಾದ ಜ್ಞಾನ ಹೊಂದಿದ್ದವರು.
ಕೃಷಿ, ವ್ಯಾವಹಾರಿಕತೆ ಇತ್ಯಾದಿಗಳಲ್ಲೂ ಅವರು ಪ್ರಾವೀಣ್ಯವನ್ನು ಸಂಪಾದಿಸಿದ್ದರು, ಯಾವುದೇ ವಿಷಯವಾದರೂ ಅವುಗಳಲ್ಲಿ ನಿರರ್ಗಳವಾದ ವಿದ್ವತ್ತನ್ನು ಸಾಧಿಸಿಕೊಂಡಿದ್ದರು.
ಸಿಂಹದಂತೆ ಗಂಭೀರ ಸ್ವಭಾವದವರಾದರೂ ಮುಗ್ದ ಮಾತೃ ಹೃದಯಿಯಾಗಿದ್ದರು ಎಂದು ಪೂರ್ವಾಚಾರ್ಯರಾದ ರಾಘವೇಂದ್ರ ಭಾರತಿ ಶ್ರೀಗಳನ್ನು ಈ ಸಂದರ್ಭದಲ್ಲಿ ರಾಘವೇಶ್ವರ ಶ್ರೀಗಳು ಸ್ಮರಿಸಿಕೊಂಡಿದ್ದಾರೆ.
ಮುಷ್ಟಿದ್ರವ್ಯ ಸಮರ್ಪಣೆ ಹಾಗೂ ಗುರುಪರಂಪರಾಪೂಜೆಯನ್ನು ಸ್ವೀಕರಿಸಿದ ಶ್ರೀಗಳು, ಗುರುಪರಂಪರೆಯ ಸಂಪೂರ್ಣ ಅನುಗ್ರಹವಿದ್ದು, ಮೂಲಮಠದ ಪುನರ್ನಿರ್ಮಾಣ ನಿರಾತಂಕವಾಗಿ ಸಂಪನ್ನವಾಗಲಿದೆ, ಈ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿ ಧನ್ಯರಾಗಿ ಎಂದು ರಾಘವೇಶ್ವರ ಶ್ರೀಗಳು ಹಾರೈಸಿದ್ದಾರೆ.
ಧರ್ಮ ರಕ್ಷಣೆಗಾಗಿ ಯತಿಗಳೆಲ್ಲಾ ಒಂದಾಗಬೇಕಾಗಿದ್ದು, ಯತಿಗಳು ಒಂದಾದರೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಸಂತ ಜಾಗೃತನಾದರೆ ಸಮಾಜವೇ ಜಾಗೃತವಾದಂತೆ, ಹಾಗಾಗಿ ಯತಿಗಳೆಲ್ಲಾ ಒಂದಾಗಬೇಕು ಎಂದು ಶ್ರೀಗಳು ಆಶಿಸಿದರು.
ರಾಘವೇಂದ್ರ ಭಾರತೀ ಶ್ರೀಗಳ ನೆನಪಿನಲ್ಲಿ ಕೊಡಮಾಡುವ ಶ್ರೀ ರಾಘವೇಂದ್ರ ಭಾರತಿ ಪಾಂಡಿತ್ಯ ಪುರಸ್ಕಾರವು ಈ ಬಾರಿ ಸಾಹಿತಿ, ವಿದ್ವಾಂಸ ಡಾ. ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಅವರಿಗೆ ಶ್ರೀಗಳು ಅನುಗ್ರಹಿಸಿದರು.
ಪುರಸ್ಕಾರ ಸ್ವೀಕರಿಸಿದ ಸೂರ್ಯನಾರಾಯಣ ಭಟ್ ಮಾತನಾಡುತ್ತಾ, ಇದನ್ನು ನಾನು ಪುರಸ್ಕಾರ ಎಂದು ಭಾವಿಸುವುದಿಲ್ಲ. ಇದನ್ನು ಪರಮಾನುಗ್ರಹ ಎಂದು ಭಾವಿಸುತ್ತೇನೆ, ಸಾಹಿತ್ಯಕೃಷಿಗೆ ಪೂರಕವಾಗಿ ಶ್ರೀಗಳ ಅನುಗ್ರಹನವನ್ನು ಬೇಡುತ್ತೇನೆ ಎಂದು ಧನ್ಯತೆಯಿಂದ ನುಡಿದರು. (ರಾಘವೇಶ್ವರ ಶ್ರೀ ನಕಲಿ ಸಿಡಿ: ಸರಕಾರಕ್ಕೆ ಹಿನ್ನಡೆ)
ಸಭೆಯನ್ನು ನಿರ್ವಹಿಸಿದ ಗಣೇಶ್ ಕೂಜಳ್ಲಿ ಮುಂದಿನ ಫೆಬ್ರವರಿಯಲ್ಲಿ ಸಂಪನ್ನವಾಗಲಿರುವ ಸಹಸ್ರ ಸಂತ ಸಮಾವೇಶದ ಕುರಿತು ಮಾಹಿತಿ ನೀಡಿದರು.
ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ ಜಿ ಭಟ್, ಮೂಲಮಠ ಪುನರ್ನಿರ್ಮಾಣ ಸಮಿತಿಯ ಪದಾಧಿಕಾರಿಗಳು, ಮಹಾಮಂಡಲದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.