ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯ ಸರ್ಕಾರವೇ ಫೇಲ್!
ಬೆಂಗಳೂರು, ಮಾರ್ಚ್ 31 : " ನಾವು ಮತ್ತೆ ಪರೀಕ್ಷೆ ಬರೆಯಲ್ಲ, ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಕಿಮ್ಮನೆ ಸುಮ್ಮನೆ" ಈ ಬಗೆಯ ಘೋಷಣೆಗಳೇ ಮಲ್ಲೇಶ್ವರಂ ಪಿಯು ಬೋರ್ಡ್ ನ ಆವರಣದಲ್ಲಿ ಗುರುವಾರ ಪ್ರತಿಧ್ವನಿಸಿದವು.
ಸರ್ಕಾರ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇನೆ ಎಂದು ಹೇಳಿದ್ದರೆ, ವಿದ್ಯಾರ್ಥಿಗಳು ನಾವು ಪರೀಕ್ಷೆ ಬರೆಯಲ್ಲ.. ಹಿಂದೆ ಮೊದಲನೇ ಸಾರಿ ಬರೆದ ಉತ್ತರ ಪತ್ರಿಕೆಯನ್ನೇ ಮೌಲ್ಯ ಮಾಪನ ಮಾಡಿ ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಈ ಬಗ್ಗೆ ಸದನದಲ್ಲಿ ಹೋರಾಟ ನಡೆಸುತ್ತೇವೆ ನಾವು ವಿದ್ಯಾರ್ಥಿಗಳ ಹಿತ ಕಾಯುತ್ತೇವೆ ಎಂದು ಹೇಳಿದ್ದಾರೆ.[ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]
ಪರೀಕ್ಷೆ ರದ್ದು ಎಂಬ ಸುದ್ದಿ ಮುಂಜಾನೆಯೇ ಹೊರಬಿದ್ದಿತ್ತು. ಇದಾದ ತಕ್ಷಣ ಸಾವಿರಾರು ವಿದ್ಯಾರ್ಥಿಗಳು ಮಲ್ಲೇಶ್ವರಂ ನಲ್ಲಿರುವ ಪಿಯು ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಿದರು. ಆಕ್ರೋಶಗೊಂಡ ವಿದ್ಯಾರ್ಥಿಗಳಲ್ಲಿ ಕೆಲವರು ಕಚೇರಿಯ ಗಾಜಿನ ಮೇಲೆ ಕಲ್ಲು ತೂರಿ ಪುಡಿ ಪುಡಿ ಮಾಡಿದರು. ಇಡಿ ದಿನದ ಪ್ರತಿಭಟನೆ ಹೇಗಿತ್ತು? ವಿದ್ಯಾರ್ಥಿಗಳು ಮತ್ತು ಪಾಲಕರ ಮಾತೇನು? ಎಂಬುದನ್ನು ಮುಂದಕ್ಕೆ ನೋಡಿ.....
ನಾವು ಪರೀಕ್ಷೆ ಬರೆಯಲ್ಲ
ಎನೇ ಆಗಲಿ ನಾವು ಮತ್ತೆ ಪರೀಕ್ಷೆ ಬರೆಯಲ್ಲ. ಒಮ್ಮೆ ಪೇಪರ್ ಲೀಕ್ ಆಗಿದೆ ಅಂದ್ರು,,, ಈಗ ಮತ್ತೊಮ್ಮೆ, ಸರ್ಕಾರ ಮತ್ತು ಇಲಾಖೆಗಳು ಹಾಗಾದರೆ ಏನುಮಾಡುತ್ತಿವೆ ಎಂದು ಬೆಳಗ್ಗೆ ಪರೀಕ್ಷೆಗೆ ತೆರಳಿ ಹಿಂದಕ್ಕೆ ಬಂದಿದ್ದ ಬಸವನಗುಡಿಯ ರಂಜನ್ ಪ್ರಶ್ನೆ ಮಾಡಿದರು.
ಗಣಿತ ಪರೀಕ್ಷೆಗೆ ಏನು ಉತ್ತರ
ಹಿಂದೆ ನಡೆದ ಗಣಿತ ಪರೋಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಸಿಲೆಬಸ್ ಮೀರಿ ಕೇಳಲಾಗಿತ್ತು . ರಾಜ್ಯ ಸರ್ಕಾರ ಮತ್ತು ಪಿಯು ಬೋರ್ಡ್ ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪಾಲಕರೊಬ್ಬರು ಆಕ್ರೋಶ ಹೊರಹಾಕಿದರು.
ಸದನದಲ್ಲಿ ಹೋರಾಟ
ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ವಾಗ್ದಾಳಿ ಮಾಡಿದ ಸುರೇಶ್ ಕುಮಾರ್ , ರಾಜ್ಯ ಸರ್ಕಾರವೇ ಪರೀಕ್ಷೆಯಲ್ಲಿ ಫೇಲ್ ಆಗಿದೆ ಎಂದು ಟೀಕಿಸಿದರು.
ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
ಪ್ರತಿಭಟನೆಯಲ್ಲಿ ಮೂರು ಸಾವಿರಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಒಮ್ಮೆ ಪರೀಕ್ಷೆ ಬರೆದು ನಂತರ ಇದೀಗ ರದ್ದುಗೊಂಡು ಇನ್ನೊಮ್ಮೆ ಪರೀಕ್ಷೆ ಬರೆಯುವಂತಹ ಸ್ಥಿತಿ ತಂದಿಟ್ಟಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.
ವಾಪಸ್ ಹೋದ ಜಲಫಿರಂಗಿ
ವಿದ್ಯಾರ್ಥಿಗಳ ಪ್ರತಿಭಟನೆ ವಿಕೋಪಕ್ಕೆ ಹೋದಾಗ ತಹಬದಿಗೆ ತರಲು ಒಂದು ಸಮಯದಲ್ಲಿ ಜಲಫಿರಂಗಿ ಪ್ರಯೋಗಕ್ಕೂ ಮುಂದಾಗಲಾಗಿತ್ತು. ಆದರೆ ವಾಹನ ಪಿಯು ಬೋರ್ಡ್ ಆವರಣ ಪ್ರವೇಶ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಹಿಂದಕ್ಕೆ ಕಳಿಸಿದರು.
ಗಾಜು ಪುಡಿ ಪುಡಿ
ಆಕ್ರೋಶಗೊಂಡ ಕೆಲ ವಿದ್ಯಾರ್ಥಿಗಳು ಪಿಯು ಬೋರ್ಡ್ ಮೇಲೆ ಕಲ್ಲು ಎಸೆದರು. ಪರಿಣಾಮ ಗಾಜು ಪುಡಿ ಪುಡಿ.
ಮಾತನಾಡಲು ಬಿಡಲಿಲ್ಲ
ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿದರೂ ವಿದ್ಯಾರ್ಥಿಗಳು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಆಕ್ರೋಶ ಮತ್ತು ಧಿಕ್ಕಾರಗಳು ಜೋರಾಗಿಯೇ ಇತ್ತು.
ಕುಮಾರಸ್ವಾಮಿ ಹೇಳಿಕೆ
ರಾಜ್ಯ ಸರ್ಕಾರ ಪ್ರತಿಯೊಂದು ಹಂತದಲ್ಲೂ ವಿಫಲವಾಗುತ್ತಿದೆ. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಲು ಬಾರದೇ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಸಂಘಟನೆಗಳ ಬೆಂಬಲ
ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಜೆಡಿಎಸ್ ಮತ್ತು ಎನ್ ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಮುಖಂಡರು
ಮಾಜಿ ಡಿಸಿಎಂ ಆರ್ ಅಶೋಕ್ , ಸುರೇಶ್ ಕುಮಾರ್, ಶಾಸಕರುಗಳಾದ ಸಿ ಟಿ ರವಿ, ನಾರಾಯಣಸ್ವಾಮಿ, ಡಾ. ಅಶ್ವತ್ಥನಾರಾಯಣ್ ಹಾಗೂ ಮೇಲ್ಮನೆಯ ಸದಸ್ಯ ಅಶ್ವತ್ಥನಾರಾಯಣ ಭೇಟಿ ನೀಡಿ ವಿದ್ಯಾರ್ಥಿಗಳ ನೋವನ್ನು ಆಲಿಸಿದರು.