ಆನ್ ಲೈನ್ ನಲ್ಲಿ ಬೇಕಾಬಿಟ್ಟಿ ದರ ಕಡಿತ, ಭುಗಿಲೆದ್ದ ಜನ
ವಿಜಯಪುರ, ನ. 24: ಆನ್ ಲೈನ್ ವ್ಯಾಪಾರಿ ಸಂಸ್ಥೆಗಳು ಅವೈಜ್ಞಾನಿಕವಾಗಿ ದರ ಕಡಿತಗೊಳಿಸಿ ಮಾರುತ್ತಿರುವ ಕಾರಣ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿ ವಿಜಯಾಪುರದ ಐಟಿ ಸಂಘಟನೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಸಂಘಟನೆ ಅಧ್ಯಕ್ಷ ರವೀಂದ್ರ ಶಿಲೇದಾರ ಮಾತನಾಡಿ, ಆನ್ ಲೈನ್ನಲ್ಲಿ ಕಂಪ್ಯೂಟರ್ ಹಾಗೂ ಬಿಡಿ ಭಾಗಗಳ ಮೌಲ್ಯವನ್ನು ಅವೈಜ್ಞಾನಿಕವಾಗಿ ಕಡಿತಗೊಳಿಸುತ್ತಿರುವ ಕಾರಣ ಸ್ಥಳೀಯ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಖಂಡಿಸಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟಿಸಲಾಗಿದೆ. ಇಂತಹ ಅವೈಜ್ಞಾನಿಕ ವ್ಯಾಪಾರದ ವಿರುದ್ಧ ಶಿಸ್ತು ಕ್ರಮ ಜಾರಿಗೊಳಿಸಬೇಕು. ಇಲ್ಲಿದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. [ಹಣ್ಣು, ತರಕಾರಿ ಆನ್ ಲೈನ್]
ಇಂದು ಆನ್ ಲೈನ್ ಮೂಲಕ ಖರೀದಿ ಹೆಚ್ಚುತ್ತಿದೆ. ಆದರೆ, ಇಂತಹ ವಸ್ತುಗಳಲ್ಲಿ ಸಮಸ್ಯೆ ಕಂಡುಬಂದರೆ ಮಾರಾಟಗಾರರಿಂದ ಸೂಕ್ತ ವಿವರಣೆ ಸಿಗುವುದಿಲ್ಲ. ಆದ್ದರಿಂದ ಗ್ರಾಹಕರು ಸ್ಥಳೀಯ ವಿತರಕರಿಂದಲೇ ವಸ್ತುಗಳನ್ನು ಖರೀದಿಸಬೇಕು. ಇದರಿಂದ ಯಾವುದೇ ಸಮಸ್ಯೆ ಬಂದರೆ ವಿತರಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘಟನೆ ಉಪಾಧ್ಯಕ್ಷ ರಿಕಬ ರುಣವಾಲ, ಕಾರ್ಯದರ್ಶಿ ಕಿರಣ ಗುಡ್ಡೋಡಗಿ, ಪದಾಧಿಕಾರಿಗಳು ಹಾಗೂ ಕಂಪ್ಯೂಟರ್ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.