ಆಸ್ತಿಗಾಗಿ ಮಹಿಳೆ ಮೇಲೆ ದಾಯಾದಿಗಳಿಂದ ಭೀಕರ ಹಲ್ಲೆ
ಮಂಡ್ಯ, ಮೇ 4 : ಮಕ್ಕಳಿಲ್ಲದ ಮಹಿಳೆಯೊಬ್ಬರ ಆಸ್ತಿಯನ್ನು ಕಬಳಿಸುವ ಸಂಚು ರೂಪಿಸಿದ ಮೂವರು ದಾಯಾದಿಗಳು ಆಕೆಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ವಿಫಲ ಯತ್ನ ನಡೆಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ವಿಜಿಯಮ್ಮ(50) ಎಂಬಾಕೆ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಮಹಿಳೆ. ಕೇಶವ, ಗೀತಾ, ಲಕ್ಕನಾಯಕ ಎಂಬುವರು ಹಲ್ಲೆ ನಡೆಸಿದ ಆರೋಪಿಗಳು.
ಅಕ್ಕಿಹೆಬ್ಬಾಳು ಗ್ರಾಮದ ಹನುಮಂತನಾಯಕ ಎಂಬುವವರ ಪತ್ನಿ ವಿಜಿಯಮ್ಮ ಅವರಿಗೆ ಮಕ್ಕಳಿಲ್ಲದ ಕಾರಣ ರಕ್ಷಿತಾ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡು ಸಾಕಿ ಸಲಹುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ವಿಜಿಯಮ್ಮನ ಭಾವ(ಗಂಡನ ಅಣ್ಣನ)ನ ಮಗ ಕೇಶವ, ತನ್ನ ಚಿಕ್ಕಪ್ಪನ ಆಸ್ತಿ ತಮಗೆ ಸಿಗುವುದಿಲ್ಲ ಎಂದು ವಿಜಿಯಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣ ಹಾರೆಯಿಂದ ತಲೆ ಭಾಗಕ್ಕೆ ಮತ್ತು ಕೆನ್ನೆಯ ಭಾಗಕ್ಕೆ ತಿವಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. [ಕಾವೇರಿ ನದಿಯಲ್ಲಿ ಮುಳುಗಿ ಅಪ್ಪ-ಮಕ್ಕಳ ಸಾವು]
ಈತ ಈ ಕೃತ್ಯವೆಸಗಲು ಈತನ ಪತ್ನಿ ಲತಾ ಮತ್ತು ಈತನ ತಂದೆ ಲಕ್ಕನಾಯಕ ಅವರುಗಳು ಪ್ರಚೋದನೆಯೇ ಕಾರಣ ಎನ್ನಲಾಗಿದೆ. ಹಲ್ಲೆಯಿಂದ ವಿಜಿಯಮ್ಮನಿಗೆ ಗಂಭೀರ ಗಾಯಗಳಾಗಿವೆ. ಅಪಾರ ಪ್ರಮಾಣದ ರಕ್ತ ಹರಿದು, ಪ್ರಜ್ಞೆ ಕಳೆದುಕೊಂಡ ವಿಜಿಯಮ್ಮ ಸತ್ತು ಹೋಗಿದ್ದಾಳೆ ಅಂತ ಅಂದುಕೊಂಡು ಆರೋಪಿಗಳಾದ ಕೇಶವ, ಲತಾ, ಲಕ್ಕನಾಯಕ ಗ್ರಾಮವನ್ನು ತೊರೆದು ಕಾಲಿಗೆ ಬುದ್ಧಿ ಹೇಳಿದ್ದಾರೆ.
ಗಾಯಾಳು ವಿಜಿಯಮ್ಮಳ ಸಂಬಂಧಿ ವಿಶಾಲಕ್ಷ್ಮಮ್ಮ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ವಿಜಿಯಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿ ಕೊಂಡಿರುವ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. [ಮುಸ್ಲಿಂ ಸಂಪ್ರದಾಯದಂತೆ ಆಶಿತಾ-ಶಕೀಲ್ ನಿಖಾಹ್!]