ಅಗ್ರಿ ಗೋಲ್ಡ್, ಮೈತ್ರಿ ಪ್ಲಾನ್ಟೇಶನ್ ಆಸ್ತಿ ಮುಟ್ಟುಗೋಲಿಗೆ ಆದೇಶ
‘ಅಗ್ರಿ ಗೋಲ್ಡ್’ ಮತ್ತು ‘ಮೈತ್ರಿ ಪ್ಲಾಂಟೇಷನ್ ಅಂಡ್ ಹಾರ್ಟಿಕಲ್ಚರ್ ಪ್ರಾಪರ್ಟಿ’ ಕಂಪೆನಿಗಳ ಆಸ್ತಿ ಮುಟ್ಟುಗೋಲು ಹಾಕಲು ಆದೇಶ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಬೆಂಗಳೂರು, ಮೇ 18: ಗ್ರಾಹಕರಿಗೆ ಸಾವಿರಾರು ಕೋಟಿ ರು ವಂಚಿಸಿರುವ 'ಅಗ್ರಿ ಗೋಲ್ಡ್' ಮತ್ತು 'ಮೈತ್ರಿ ಪ್ಲಾಂಟೇಷನ್ ಅಂಡ್ ಹಾರ್ಟಿಕಲ್ಚರ್ ಪ್ರಾಪರ್ಟಿ' ಕಂಪೆನಿಗಳ ಆಸ್ತಿ ಮುಟ್ಟುಗೋಲು ಹಾಕಲು ಆದೇಶ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಈ ಸಂಸ್ಥೆಗಳಿಗೆ ಸೇರಿದ ಎಲ್ಲ ಆಸ್ತಿಗಳನ್ನು 15 ದಿನಗಳಲ್ಲಿ ವಶಕ್ಕೆ ಪಡೆಯಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಬುಧವಾರ(ಮೇ 17) ದಂದು ನಡೆದ ಸಚಿವ ಸಂಪುಟ ಸಭೆಯ ನಂತರದ ಸುದ್ದಿಗೋಷ್ಠಿಯಲ್ಲಿ ಸಚಿವ ಜಯಚಂದ್ರ ಹೇಳಿದರು.
ಅಧಿಕ ಬಡ್ಡಿ ಆಸೆ ತೋರಿಸಿ ಈ ಕಂಪೆನಿಗಳು ಗ್ರಾಮೀಣ ಭಾಗದಲ್ಲಿ ಬಡವರಿಂದ ಠೇವಣಿ ಸಂಗ್ರಹಿಸಿವೆ.ಮಧುಗಿರಿಯ ಸಾಕಷ್ಟು ಜನ ದೂರು ನೀಡಿದ್ದರಿಂದ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದರು.
ಜನರಿಂದ ಸಂಗ್ರಹಿಸಿದ ಠೇವಣಿಯಿಂದ ಕರ್ನಾಟಕ ಮಾತ್ರವಲ್ಲದೆ, ಕೇರಳ ಮತ್ತು ಆಂಧ್ರದಲ್ಲಿಯೂ ಆಸ್ತಿ ಖರೀದಿಸಿವೆ. ಕೇರಳ, ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆಯಲಾಗಿದೆ.
ಕಂಪೆನಿಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಯಾರು, ಅವರು ಎಲ್ಲಿರುತ್ತಾರೆ ಎಂಬ ಮಾಹಿತಿಯೇ ಸಿಗುತ್ತಿಲ್ಲ. ಈ ಸಂಬಂಧ ಸಿಐಡಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇಂತಹ ಕಂಪೆನಿಗಳು ಇರುವುದರಿಂದ ಇವುಗಳ ಮೇಲೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವೇ ಒಂದು ಹೊಸ ಕಾನೂನು ಜಾರಿಗೆ ತರಬೇಕು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಇಂತಹ ಕಂಪೆನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.