ಸೋಮವಾರದ (ಜೂ12) ಕರ್ನಾಟಕ ಬಂದ್ : ತಾಜಾ ಬೆಳವಣಿಗೆಗಳು
ಸೋಮವಾರ (ಜೂ 12) ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆದಿರುವ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳಲ್ಲಿ ಪರವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರು, ಜೂ 10: ವಾರದ ಮೊದಲ ದಿನ ಸೋಮವಾರ (ಜೂ 12) ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆದಿರುವ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳಲ್ಲಿ ಪರವಿರೋಧ ವ್ಯಕ್ತವಾಗುತ್ತಿದೆ.
[ಕರ್ನಾಟಕ ಬಂದ್ : ಬಸ್ ಸಂಚಾರ, ಹೋಟೆಲ್, ಸ್ಕೂಲ್ ಓಪನ್ ಇರುತ್ತಾ?]
ರಾಜ್ಯದ ಬಯಲುಸೀಮೆ ವ್ಯಾಪ್ತಿಗೆ ಶಾಶ್ವತ ಪರಿಹಾರ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ, ಕನ್ನಡ ಒಕ್ಕೂಟ ಬಂದ್ ಗೆ ಕರೆನೀಡಿದೆ. ಈ ಸಂಬಂಧ ಶುಕ್ರವಾರ (ಜೂ 9) ವಾಟಾಳ್ ನಾಗರಾಜ್ ಬೆಂಗಳೂರಿನ ಬೀದಿಬೀದಿ ಸುತ್ತಿ ಸಾರ್ವಜನಿಕರ ಬೆಂಬಲ ಕೋರಿದ್ದಾರೆ.
ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ
ಪದೇ ಪದೇ ಬಂದ್ ಗೆ ಕರೆನೀಡಿದರೆ 'ಬಂದ್' ಎನ್ನುವ ಪದಕ್ಕೆ ಅರ್ಥವಿರುವುದಿಲ್ಲ ಜೊತೆಗೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಕೆಲವು ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಬಂದ್ ನಿಂದ ದೂರವಿರಲು ನಿರ್ಧರಿಸಿವೆ.
ಕನ್ನಡಪರ ಸಂಘಟನೆಗಳ ಪೈಕಿ ಅತಿಹೆಚ್ಚು ಸದಸ್ಯತ್ವವನ್ನು ಹೊಂದಿರುವ ನಾರಾಯಣ ಗೌಡರ ರಕ್ಷಣಾ ವೇದಿಕೆ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದೆ.
ಪ್ರಮುಖವಾಗಿ ಕಾರ್ಮಿಕ ಸಂಘಟನೆಗಳು ಬಂದ್ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬರದೇ ಇರುವ ಹಿನ್ನಲೆಯಲ್ಲಿ, ಸೋಮವಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದೋ, ಇಲ್ಲವೋ ಎನ್ನುವುದು ಅಂತಿಮವಾಗಿಲ್ಲ. ಮುಂದೆ ಓದಿ..
ನೀರಾವರಿ ವಿಚಾರದಲ್ಲಿ ರಾಜ್ಯದ ಗೋಳು ಕೇಳುವವರಿಲ್ಲ
ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಿದೆ. ರಾಜ್ಯದ ನೀರಾವರಿ ಯೋಜನೆಗೆ ಶಾಶ್ವತ ಪರಿಹಾರ, ರೈತರ ಸಾಲಮನ್ನಾ, ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಲಾಗಿದೆ.
ಬೆಳಗಾವಿಯ ಎಂಇಎಸ್ ಪುಂಡರು
ಜೊತೆಗೆ, ಬೆಳಗಾವಿಯಲ್ಲಿ ಎಂಇಎಸ್ ಪುಂಡರನ್ನು ಗಡೀಪಾರು ಮಾಡುವುದು, ಮೇಕೆದಾಟು ಯೋಜನೆ, ಬಿಇಎಂಎಲ್ ಖಾಸಗೀಕರಣಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇದೇ ಜೂನ್ 12 ರಂದು ಬಂದ್ ನಡೆಸಲು ಕನ್ನಡ ಒಕ್ಕೂಟಗಳು ಮುಂದಾಗಿದೆ.
ಬಂದ್ ಗೆ ಬೆಂಬಲ ಸೂಚಿಸಿ ಎನ್ನುವ ವಾಟಾಳ್ ಮನವಿಗೆ ಪರ ವಿರೋಧ
ವಾಟಾಳ್ ನಾಗರಾಜ್ ಶುಕ್ರವಾರ ಬಂದ್ ಗೆ ಬೆಂಬಲ ನೀಡುವಂತೆ ಸಾರ್ವಜನಿಕರ ಬಳಿ ಮನವಿ ಮಾಡಲು ಹೋಗಿದ್ದಾಗ, ಬಹುತೇಕ ಸಾರ್ವಜನಿಕರು ಮತ್ತು ವ್ಯಾಪಾರಿಗಳು ವಿರೋಧ ವ್ಯಕ್ತಪಡಿದರು. ಬಂದ್ ಮಾಡಿದ್ರೇನೇ ಸರಕಾರಕ್ಕೆ ಬಿಸಿಮುಟ್ಟುವುದು ಎಂದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ವಾಟಾಳ್ ಮುಂದಾಗಿದ್ದರು.
ಬಂದ್ ಗೆ ಯಾರ ಬೆಂಬಲವಿದೆ
ಡಾ. ರಾಜ್ ಅಭಿಮಾನಿಗಳ ಸಂಘ, ಪ್ರವೀಣ್ ಶೆಟ್ಟಿ ಬಣದ ಕರವೇ, ಹೋಟೇಲ್ ಮಾಲೀಕರ ಸಂಘಟನೆ, ಚಿತ್ರಮಂದಿರಗಳು, ಕನ್ನಡ ಸೇನೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದೆ.
ಬಹುತೇಕ ಸಂಘಟನೆಗಳು ಅಂತಿಮ ನಿರ್ಧಾರಕ್ಕೆ ಬಂದಿಲ್ಲ
ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರಕ್ಷಣಾ ಸೇನೆ, ಕಾರ್ಮಿಕ ಹಿತ ರಕ್ಷಣಾ ವೇದಿಕೆ ಸೇರಿದಂತೆ ಬಹಳಷ್ಟು ಸಂಘಟನೆಗಳು ಬಂದ್ ನಿಂದ ದೂರ ಉಳಿಯಲು ನಿರ್ಧರಿಸಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಒಕ್ಕೂಟ ಬಂದ್ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹಾಗಾಗಿ, ಸೋಮವಾರದಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ಮೂಡಿಲ್ಲ.