ಡಿಕೆ ರವಿ ಪ್ರಕರಣ : ಮಾ.28ರಂದು ಕರ್ನಾಟಕ ಬಂದ್
ಬೆಂಗಳೂರು, ಮಾ. 20 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಮಾ.28ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಕುರಿತು ಮಾಹಿತಿ ನೀಡಿದರು. ವಿವಿಧ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಈ ಬಂದ್ಗೆ ಕರೆ ನೀಡಿದ್ದೇವೆ ಎಂದು ಹೇಳಿದರು. [ಮೃತ ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ]
ದಕ್ಷ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ಮಾ.28ರ ಶನಿವಾರ ಬೆಳಗ್ಗೆ ಬೆಂಗಳೂರಿನ ಟೌನ್ಹಾಲ್ನಿಂದ ಫ್ರೀಡಂಪಾರ್ಕ್ ತನಕ ಮೌನ ಮೆರವಣಿಗೆ ನಡೆಸಲಾಗುತ್ತದೆ ಎಂದು ವಾಟಾಳ್ ತಿಳಿಸಿದರು. [ಡಿಕೆ ರವಿ ಪ್ರಕರಣ, ಶುಕ್ರವಾರದ ಬೆಳವಣಿಗೆಗಳು]
ಮಾ.28ರಂದು ಬೆಳಗ್ಗೆಯಿಂದ ಸಂಜೆಯ ತನಕ ಸಂಪೂರ್ಣ ಬಂದ್ ಆಚರಿಸಬೇಕು. ಬಂದ್ ವೇಳೆಯಲ್ಲಿ ಎಲ್ಲಿಯೂ ಗಲಾಟೆ ನಡೆಸದೇ ಶಾಂತಿ ಕಾಪಾಡಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು. ಕನ್ನಡ ಚಳವಳಿ ವಾಟಾಳ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಈ ಬಂದ್ಗೆ ಬೆಂಬಲ ನೀಡಿವೆ ಎಂದು ವಾಟಾಳ್ ಹೇಳಿದರು. [ಸ್ನೇಹಿತರೇ... ಯುಗಾದಿ ಶುಭಾಶಯ ಹಂಚಿಕೊಳ್ಳಬೇಡಿ]
ಬಂದ್ ಇಲ್ಲ : ಸರ್ಕಾರ ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಮಾ.23ರ ಸೋಮವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಸಿಬಿಐಗೆ ವಹಿಸಿದರೆ ಕರ್ನಾಟಕ ಬಂದ್ ಮಾಡುವುದಿಲ್ಲ. ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಿ ಸಂತಾಪ ಸಭೆ ನಡೆಸುತ್ತೇವೆ ಎಂದು ವಾಟಾಳ್ ಸ್ಪಷ್ಟಪಡಿಸಿದರು.