ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿಎನ್ವಿ ಸುಬ್ರಹ್ಮಣ್ಯ ವಿಧಿವಶ
ಬೆಂಗಳೂರು, ಜ 30: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮತ್ತು ಹಲವಾರು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರೂ ಆಗಿರುವ ಡಾ. ಬಿ ಎನ್ ವಿ ಸುಬ್ರಮಣ್ಯ ಶುಕ್ರವಾರ (ಜ 29) ರಾತ್ರಿ ಬಸವನಗುಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬಿಎನ್ವಿ ಎಂದೇ ಜನಪ್ರಿಯರಾಗಿದ್ದ 73 ವರ್ಷ ವಯಸ್ಸಿನ ಸುಬ್ರಮಣ್ಯ ಅವರು ಹಲವು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದರು. ಅವರ ಅಂತಿಮಸಂಸ್ಕಾರ ಶನಿವಾರ ಸಂಜೆ ಐದು ಗಂಟೆಗೆ ನಡೆಯಲಿದೆ.
ಎರಡು ಬಾರಿ ಮಹಾಸಭಾದ ಅಧ್ಯಕ್ಷರಾಗಿದ್ದ ಸುಬ್ರಮಣ್ಯ, ತಮ್ಮ ಮಗಳ ಸ್ಮರಣಾರ್ಥ ಜ್ಯೋತಿ ಇಂಟರ್ ನ್ಯಾಷ್ಯನಲ್ ಸ್ಕೂಲ್ ಮತ್ತು ಜ್ಯೋತಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದರು.
1986ರಲ್ಲಿ ನಿಧನ ಹೊಂದಿದ್ದ ತನ್ನ ಮಗಳು ಜ್ಯೋತಿ ನೆನಪಿನಲ್ಲಿ ವಿದ್ಯಾಸಂಸ್ಥೆಗಳನ್ನು ಸುಬ್ರಮಣ್ಯ ಅವರು ಸ್ಥಾಪಿಸಿದ್ದರು. ಜ್ಯೋತಿ ಸ್ಕೂಲ್ ಟ್ರಸ್ಟ್ ಮುಖಾಂತರ ಎಲ್ಲಾ ಧರ್ಮದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸುಬ್ರಮಣ್ಯ ಸಹಾಯ ಮಾಡುತ್ತಿದ್ದರು.
ಮಲ್ಲಿಕಾರ್ಜುನ ವೇದ ಕೇಂದ್ರವನ್ನೂ ಸ್ಥಾಪಿಸಿದ್ದ ಸುಬ್ರಮಣ್ಯ ಅವರ ಅಂತಿಮ ಸಂಸ್ಕಾರ ಕನಕಪುರ ರಸ್ತೆ ತಾತಗುಣಿ ಎಸ್ಟೇಟ್ ಬಳಿಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ನಡೆಯಲಿದೆ.