ಪ್ರೇಮಲತಾ ದಿವಾಕರ್ ಕ್ಲೀನ್ ಚಿಟ್: ರಾಮಚಂದ್ರಾಪುರ ಮಠದ ಪ್ರತಿಕ್ರಿಯೆ
ರಾಘವೇಶ್ವರ ಶ್ರೀಗಳ ವಿರುದ್ದ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ ಕ್ರಮವನ್ನು ಶ್ರೀ ರಾಮಚಂದ್ರಾಪುರ ಮಠ ತೀವ್ರವಾಗಿ ಖಂಡಿಸಿದೆ.
ಬೆಂಗಳೂರು, ಫೆ 22: ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀಗಳ ವಿರುದ್ದ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ ಕ್ರಮವನ್ನು ಶ್ರೀ ರಾಮಚಂದ್ರಾಪುರ ಮಠ ತೀವ್ರವಾಗಿ ಖಂಡಿಸಿದೆ.
ಆರೋಪಿಗಳಾದ ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ದಂಪತಿಗಳು ಪಂಚನಾಮೆ ವೇಳೆ ತಪ್ಪೊಪ್ಪಿಕೊಂಡಿದ್ದರೂ, ಜೊತೆಗೆ ಇದಕ್ಕೆ ಸಂಬಂಧಿಸಿದ ದಾಖಲೆಗಳು ಇದ್ದರೂ, ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವುದು ಖಂಡನೀಯ ಎಂದು ರಾಮಚಂದ್ರಾಪುರ ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (ಪ್ರೇಮಲತಾ ದಿವಾಕರ್ ಕ್ಲೀನ್ ಚಿಟ್)
ರಾಮಚಂದ್ರಾಪುರ ಮಠದಿಂದ 3 ಕೋಟಿ ರೂಪಾಯಿ ನೀಡುವಂತೆ ಆಗ್ರಹಿಸಿ, ನೀಡದಿದ್ದರೆ, ಸ್ವಾಮೀಜಿಯವರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಪ್ರಕರಣ ದಾಖಲಿಸುವುದಾಗಿ ಆರೋಪಿಗಳು ಹೇಳಿದ್ದರು.
ಈ ಸಂಬಂಧ ನಡೆದ ಇಮೇಲ್ ಸಂಭಾಷಣೆಯನ್ನು ಕೂಡಾ ಆರೋಪಿಗಳು ಪಂಚನಾಮೆ ವೇಳೆ ಒಪ್ಪಿಕೊಂಡಿದ್ದರು. ಆದರೆ ಇದೀಗ ಸರ್ಕಾರವೇ ಆರೋಪಿಗಳ ರಕ್ಷಣೆಗೆ ನೇರವಾಗಿ ಬಂದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ ಎಂದು ಮಠದ ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆದರೆ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿರುವವರ ಬಣ್ಣ ಬಯಲಾಗುತ್ತದೆ ಎನ್ನುವುದಕ್ಕಾಗಿ ಈ ಹುನ್ನಾರ ನಡೆದಿದೆ ಎನ್ನುವುದು ಸ್ಪಷ್ಟ. ಸರ್ಕಾರ ಮಠದ ವಿರುದ್ಧದ ಷಡ್ಯಂತ್ರದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲಲ್ಲ.
ನಕಲಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರೂ, ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೆ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಎಂದು ಮಠದ ಅಧಿಕಾರಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಸರಕಾರದ ಇಂದಿನ ನಡೆಯಿಂದ ಮಠದ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ತಪ್ಪಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ. ಸರ್ಕಾರದ ಈ ಕ್ರಮದ ವಿರುದ್ಧ ಮಠ ಕಾನೂನು ಹೋರಾಟಕ್ಕೆ ಮುಂದಾಗಲಿದೆ ರಾಮಚಂದ್ರಾಪುರ ಮಠ ಎಚ್ಚರಿಕೆ ನೀಡಿದೆ.
ರಾಘವೇಶ್ವರ ಶ್ರೀಗಳನ್ನು ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಗಾಯಕಿ ಪ್ರೇಮಲತಾ ಹಾಗೂ ಇತರರ ವಿರುದ್ಧ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ ಸಿಐಡಿ ಕ್ಲೀನ್ ಚಿಟ್ ನೀಡಿದೆ. ಹೊನ್ನಾವರ ಠಾಣೆಯಲ್ಲಿ 2014ರಲ್ಲಿ ಪ್ರೇಮಲತಾ ವಿರುದ್ಧ ದೂರು ದಾಖಲಾಗಿತ್ತು.