ದಲಿತ ಸಿಎಂ ಬರಲಿ, ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಸಿಗಲಿ
ಹರಪನಹಳ್ಳಿ, ಫೆ. 20: ರಾಜ್ಯದಲ್ಲಿ 65 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಜನಾಂಗಕ್ಕೆ ಶೇ.7.25 ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಶೀಘ್ರದಲ್ಲೇ ಮೀಸಲಾತಿ ಜಾರಿಗೊಳಿಸದಿದ್ದರೆ ಸರ್ಕಾರಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ.
ಸಂವಿಧಾನಬದ್ಧ ಮೀಸಲಾತಿಗಾಗಿ ನಿರಂತರ ಹೋರಾಟದ ಅಗತ್ಯತೆ ಇದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.7.25 ಮೀಸಲಾತಿ ನೀಡಿದರೆ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಪ್ರಬಲವಾಗುತ್ತವೆ. ಈ ದಿಸೆಯಲ್ಲಿ ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಗಳಾಗಬೇಕು ಎನ್ನುವ ದಲಿತ ಸಂಘಟನೆಗಳಿಗೆ ತಮ್ಮ ಬೆಂಬಲವಿದೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ದಲಿತ
ಸಿಎಂ
ಬರಲಿ:
ಜಾರಕಿಹೊಳಿ,
ಪರಮೇಶ್ವರ್,
ಖರ್ಗೆಯವರಂಥ
ಉತ್ತಮ
ಮುಖಂಡರು
ಇದ್ದರೂ
ಕೂಡ
ಮುಂದುವರೆದ
ಜನಾಂಗಕ್ಕೆ
ಮುಖ್ಯಮಂತ್ರಿಯನ್ನು
ಮಾಡುತ್ತಾ
ಹೊರಟರೆ
ಸಾಮಾಜಿಕ
ನ್ಯಾಯವನ್ನು
ಹೇಗೆ
ನೀಡಿದಂತಾಗುತ್ತದೆ
ಎಂದರು.
ಆಲೂರು ಗ್ರಾಮದಲ್ಲಿ ಜಿಲ್ಲಾ ವಾಲ್ಮೀಕಿ ಯುವಸೇನೆ, ಆಲೂರು ಗ್ರಾಮ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ರಾಜವೀರ ಮದಕರಿ ನಾಯ್ಕರ ಕಂಚಿನ ಪ್ರತಿಮೆ ಅನಾವರಣ ಮತ್ತು ಐತಿಹಾಸಿಕ ಕೋಟೆಯ ಮೇಲೆ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಶಿಕ್ಷಕ ಮುದುಕಪ್ಳ ಗಂಗಪ್ಪ ರಚಿಸಿರುವ 'ಐತಿಹಾಸಿಕ ಆಲೂರು ದರ್ಶನ' ಪುಸ್ತಕ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಾಳೆಪಟ್ಟುಗಳು ಅನೇಕ ಕೋಟೆ ಕೊತ್ತಲಗಳನ್ನು ಕಟ್ಟಿಸಿದ್ದು, ಅವುಗಳು ದುರಸ್ಥಿ ಕಾಣದೆ ಬಿಕೋ ಎನ್ನುತ್ತಿವೆ. ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ರಚಿಸಿದ ವಾಲ್ಮೀಕಿ, ವ್ಯಾಸ ದುಡಿಯುವ ವರ್ಗವನ್ನು ಚಿತ್ರಿಸಿದ್ದಾರೆ. ಅಂದಿನ ಇತಿಹಾಸವನ್ನು ಬಿಂಬಿಸುವ ಕೋಟೆ ಮತ್ತು ಕಲ್ಲುಗಳನ್ನು ಸರ್ಕಾರ ಸಂರಕ್ಷಿಸಬೇಕು.ನವಪೀಳಿಗೆಗೆ ತೋರಿಸಲು ಸ್ಮಾರಕಗಳು ಇರಬೇಕು ಎಂದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ವಾಲ್ಮೀಕಿ ಜನಾಂಗಕ್ಕೆ ಕೇಂದ್ರದಲ್ಲಿ ಈಗಾಗಲೇ ಶೇ.7.25 ಮೀಸಲಾತಿ ನೀಡಿದ್ದು,ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೂಡ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹನಗವಾಡಿ ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.