ಕನ್ನಡ ಪಕ್ಷಕ್ಕೆ ಮರು ಚಾಲನೆ ನೀಡಿದ ಪ್ರಕಾಶ್ ಬೆಳವಾಡಿ
ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅಗತ್ಯತೆಯ ಕುರಿತಂತೆ ಅನೇಕ ಚರ್ಚ, ಸಭೆಗಳನ್ನು ನಡೆಸಿದ ಬಳಿಕ 'ಕನ್ನಡ ಪಕ್ಷ' ಎಂಬ ಹಳೆ ಪಕ್ಷಕ್ಕೆ ಮತ್ತೊಮ್ಮೆ ಚಾಲನೆ ನೀಡಲಾಗಿದೆ.
ಬೆಂಗಳೂರು, ಮೇ 21: ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅಗತ್ಯತೆಯ ಕುರಿತಂತೆ ಅನೇಕ ಚರ್ಚ, ಸಭೆಗಳನ್ನು ನಡೆಸಿದ ಬಳಿಕ 'ಕನ್ನಡ ಪಕ್ಷ' ಎಂಬ ಹಳೆ ಪಕ್ಷಕ್ಕೆ ಮತ್ತೊಮ್ಮೆ ಚಾಲನೆ ನೀಡಲಾಗಿದೆ. ಕನ್ನಡ ಬಾವುಟದ ವಿನ್ಯಾಸಗಾರ, ಹೋರಾಟಗಾರ ಮ.ರಾಮಮೂರ್ತಿ ಅವರ 'ಕನ್ನಡ ಪಕ್ಷ' ಮತ್ತೆ ಸಕ್ರಿಯವಾಗಿದೆ ಎಂದು ನಟ, ಪತ್ರಕರ್ತ ಪ್ರಕಾಶ್ ಬೆಳವಾಡಿ ಅವರು ಭಾನುವಾರ(ಮೇ 21)ದಂದು ಘೋಷಿಸಿದರು.
ಅಧಿಕೃತವಾಗಿ ಕನ್ನಡ ಪಕ್ಷವನ್ನು ಸೇರುವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಬೆಳಗ್ಗೆ ಸನ್ಮಾನ್ಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್. ಎಸ್. ದೊರೆಸ್ವಾಮಿ, ಪತ್ರಕರ್ತೆ, ಶ್ರೀಮತಿ ಪ್ರತಿಭಾ ನಂದಕುಮಾರ್ ಅವರ ಸಮ್ಮುಖದಲ್ಲಿ ನಡೆಯಿತು.
ಪ್ರಾದೇಶಿಕ ಪಕ್ಷದ ಬಗ್ಗೆ ಮಾತನಾಡುತ್ತಾ, ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅಗತ್ಯತೆಯ ಕುರಿತಂತೆ ಏಪ್ರಿಲ್14 ರಂದು ಸೆಂಟ್ರಲ್ ಕಾಲೇಜು, ಸೆನೇಟ್ ಹಾಲ್ನಲ್ಲಿ ನೆಡೆಸಿದ ಚರ್ಚೆಯಲ್ಲಿ ಆಸಕ್ತರು ಪಾಲ್ಗೊಂಡಿದ್ದರು. ಅಂತಹ ಪಕ್ಷ ಅಗತ್ಯ ಎಂದು ಅಂದು ಸಭೆ ಸರ್ವಾನುಮತದಿಂದ ನಿರ್ಣಯಿಸಿತ್ತು.
ಸಭೆಯನ್ನು ಆಯೋಜಿಸಿದ ನಾವುಗಳು ಈ ನಿಟ್ಟಿನಲ್ಲಿ ಪರಿಹಾರವನ್ನು ಕಂಡು ಕೊಳ್ಳಲು ಹಲವು ಸಲ ಭೇಟಿಯಾಗಿ ಚರ್ಚಿಸಿದ್ದು ಒಂದು ನಿರ್ಧಾರಕ್ಕೆ ಬಂದೆವು. 50 ವರ್ಷಗಳ ಹಿಂದೆ ಕನ್ನಡ ವೀರಸೇನಾನಿ ದಿವಂಗತ ಮದ್ದೂರು ರಾಮಮೂರ್ತಿ (ಮ. ರಾಮಮೂರ್ತಿ) ಹಾಗೂ ಆ.ನಾ.ಕೃಷ್ಣರಾಯರು ಮೊದಲುಗೊಂಡ ದಿಗ್ಗಜರ ಗುಂಪು ಸ್ಥಾಪಿಸಿದ 'ಕನ್ನಡ ಪಕ್ಷ' ವನ್ನು ಸೇರುವುದು ಎಂದು ತೀರ್ಮಾನಿಸಿದೆವು. ಅದನ್ನು ಮತ್ತೆ ಚೇತನಗೊಳಿಸಿವುದು, ಬೆಳಸುವುದು ನಮ್ಮ ಉದ್ದೇಶ ಎಂದರು.
ಕನ್ನಡ ಪಕ್ಷ ನವೆಂಬರ್ 23, 1991 ರಂದು ಚುನಾವಣೆ ಅಯೋಗದೊಂದಿಗೆ ನೋಂದಾಯಿತವಾಗಿದ್ದು ಹಲವಾರು ಕರ್ನಾಟಕ, ಕನ್ನಡ ಮತ್ತು ಕನ್ನಡಿಗರಪರ ಸಂಘಟನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಅಲ್ಲದೆ ಚುನಾವಣೆಗಳಲ್ಲೂ ಪಾಲ್ಗೊಂಡಿದೆ. ಅದರ ಮೂಲ ಚಿಂತನೆ ನಮ್ಮ ಇಂದಿನ ಆಶಯಗಳಿಗೆ ಹೊಂದುವಂತಿದೆ. ಹೆಮ್ಮೆಯ ವಿಷಯವೆಂದರೆ ಈಗ ಸರ್ವಸಮ್ಮತ ಹೊಂದಿರುವ 'ಕರ್ನಾಟಕದ ಬಾವುಟ' ವಾಸ್ತವವಾಗಿ ಈ ಪಕ್ಷದ ಸಂಸ್ಥಾಪಕರಾದ ಮ.ರಾಮಮೂರ್ತಿಗಳು ರಚಿಸಿದ ಪಕ್ಷದ ಅಧಿಕೃತ ಬಾವುಟ.
ಕನ್ನಡ ಪಕ್ಷದ ಇಂದಿನ ಅಧ್ಯಕ್ಷರು ಮಾನ್ಯ ಪಿ. ಪುರುಷೋತ್ತಮ ಅವರು. ನಮ್ಮ ಕಾರ್ಯಕಾರಿ ಸಮಿತಿಯ ತುರ್ತು ಸಭೆಗೆ ಬಂದು ಅವರು ನಮ್ಮ ತೀರ್ಮಾನವನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ.