'ಪೊವ್ವೋದಿ ಉತ್ಸವ', ಸಾಂಪ್ರದಾಯಿಕ ಉಡುಗೆಯಲ್ಲಿ ಕೊಡವರು
ಮಡಿಕೇರಿ,ಮಾರ್ಚ್,29: ಕೊಡಗಿನಲ್ಲಿ ನಡೆಯುವ ಗ್ರಾಮದೇವತೆ ಹಬ್ಬಗಳಲ್ಲಿ ಒಂದಾದ ಚೆಟ್ಟಳ್ಳಿಯ ಈರಳೆ ಗ್ರಾಮದ ಪೊವ್ವೋದಿ (ಭಗವತಿ) ಉತ್ಸವವು ವಿಭಿನ್ನ ಹಾಗೂ ವಿಶಿಷ್ಟವಾಗಿ ನಡೆಯಿತು. ಊರಿನ ಪ್ರತಿಯೊಬ್ಬರು ಭಾಗವಹಿಸಿ ಆಚರಣೆ ಮಾಡುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯ.
ಸಂಪ್ರದಾಯದಂತೆ ಹಬ್ಬದ ದಿನದಂದು ದೇವತಕ್ಕ ಹಾಗೂ ಭಂಡಾರತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯಿಂದ ದುಡಿಕೊಟ್ಟ್ ಹಾಡಿನೊಂದಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ದೇವರಭಂಡಾರ ಎತ್ತು ಪೋರಾಟದೊಂದಿಗೆ ದೇವಾಲಯಕ್ಕೆ ತೆರಳಿದರು.[ಭಾವೈಕ್ಯತೆಯ ಸಂಗಮ ಕೊಡಗಿನ ಎಮ್ಮೆಮಾಡು ದರ್ಗಾ]
ಬಳಿಕ ಮೇದರ ಪರೆಯ ಹೊಡೆತಕ್ಕೆ ಹಾಗೂ ದುಡಿಕೊಟ್ಟ್ ಹಾಡಿಗೆ ಸರಿಯಾಗಿ ಕೊಡಗಿನ ಸಂಪ್ರದಾಯದ ಬಿಳಿಯ ಕುಪ್ಯಚ್ಯಾಲೆಯನ್ನು ಧರಿಸಿದ ದೇವತಕ್ಕರು, ಊರುತಕ್ಕರು ಸರತಿ ಸಾಲಿನಲ್ಲಿ ದೇವಾಲಯ ಮತ್ತು ಬೊಳಕ್ ಮರದ ಸುತ್ತಲೂ ಬೊಳಕಾಟ್, ಚೌರಿಆಟ್ ನ ನೃತ್ಯ ಮಾಡಿ ದೇವರನ್ನು ಕೊಂಡಾಡಿದರು.
ಇದಾದ ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಭಂಡಾರ ಹಾಕಲಾಯಿತು. ಇದೇ ಸಂದರ್ಭ ಕೆಲವರು ತಾವು ಮಾಡಿಕೊಂಡಿದ್ದ ಹರಕೆಯನ್ನು ಅರ್ಪಿಸಿ ದೇವರ ಪ್ರಸಾದ ಸ್ವೀಕರಿಸಿದರು. ಹಬ್ಬದ ಅಂಗವಾಗಿ ದೇವರ ಕೋಲವೂ ನಡೆಯಿತು.[ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೆಚ್ಚಿದ ಕೊಡಗಿನ ಪುಷ್ಪಲೋಕ]
ದೇಗುಲದ ಇತಿಹಾಸ
ಚೆಟ್ಟಳ್ಳಿಯಿಂದ 5 ಕಿಮೀ ದೂರದಲ್ಲಿರುವ ಈರಳೆ ಗ್ರಾಮದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಇದಕ್ಕೆ ಸುಮಾರು ಮೂರು ಶತಮಾನಗಳ ಇತಿಹಾಸವಿದೆ.ಕೊಡಗಿನ ಕುಲದೇವರಾದ ಇಗ್ಗುತಪ್ಪ ಹಾಗೂ ಕಾವೇರಿಗೆ ನಿಕಟ ಸಂಬಂಧವಿರುವುದನ್ನು ಕಾಣಬಹುದು.
ಕಾವೇರಿ ತಾಯಿಯ ಮಾರ್ಗದರ್ಶನದಂತೆ ನೂರ್ಕೋಲ್ ಬೆಟ್ಟದ ಮೇಲಿಂದ ಮೂರು ಬಾಣ ಬಿಡಲಾಯಿತು. ಬಾಣಬಿದ್ದ ಜಾಗದಲ್ಲಿ ಮೂವರು ಸಹೋದರಿಯರು ನೆಲೆ ನಿಂತರು. ಈ ಪೈಕಿ ಮೊದಲನೆಯವಳು ಚೇರಳ ಗ್ರಾಮದಲ್ಲಿ, ಎರಡನೆಯವಳು ಶ್ರೀಮಂಗಲ ಗ್ರಾಮದಲ್ಲಿ, ಮೂರನೆಯವಳು ಈರಳೆ ಗ್ರಾಮದಲ್ಲಿ ನೆಲೆ ನಿಂತ ದೇವರೇ ಈರಳೆ ಪೊವ್ವೋದಿ(ಭಗವತಿ).[ಏಸುವಿನ ಇತಿಹಾಸ ನೆನಪಿಸುವ ಕೊಡಗಿನ ಸಂತ ಅನ್ನಮ್ಮ ಚರ್ಚ್]
ಈ ದೇವಾಲಯದಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಯುತ್ತದೆ. ದೇವಾಲಯದ ಹಬ್ಬವನ್ನು ಪೊರಿಮಂಡ, ಬಲ್ಲಾರಂಡ ಕೊಕ್ಕೆರ, ಚೋಳಪಂಡ, ಬದಲೆರ, ಮಾಳೇಟಿರ, ಸೂದನ, ಕೋರನ, ಕೊರವಂಡ, ಬಲ್ಲಚಂಡ, ಸೋಮಯಂಡ ಹಾಗು ಕಡೆಮಡ ಕುಟುಂಬಗಳು ತಲತಲಾಂತರದಿಂದ ನಡೆಸಿಕೊಂಡು ಬರುತ್ತಿವೆ.[ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ!]