ಸಂಪುಟ ಸೇರಿದ ಎಂ.ಕೃಷ್ಣಪ್ಪಗೆ ವಸತಿ ಖಾತೆ ಹೊಣೆ
ಬೆಂಗಳೂರು, ಸೆಪ್ಟೆಂಬರ್ 06 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾತೆ ಹಂಚಿಕೆ ಮಾಡಿದ್ದಾರೆ. ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಎ. ಮಂಜು ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರೂ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಪಡೆದಿದ್ದಾರೆ.
ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಸಂಪುಟ ದರ್ಜೆ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು ಅವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಸಿದ್ದರಾಮಯ್ಯ ಅವರು ತಮ್ಮ ಬಳಿ ಇದ್ದ ವಸತಿ ಖಾತೆಯನ್ನು ಕೃಷ್ಣಪ್ಪ ಅವರಿಗೆ ನೀಡಿದ್ದಾರೆ.[ಹೊಸ ಸಚಿವರಿಗೆ ಜವಾಬ್ದಾರಿ: ಯಾರಿಗೆ ಯಾವ ಖಾತೆ?]
ಜೂನ್ 19ರಂದು ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಿದ್ದರು. ಈ ಸಂದರ್ಭದಲ್ಲಿ 14 ಸಚಿವರ ರಾಜೀನಾಮೆ ಪಡೆದು, 13 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆಗ, ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು.[ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]
ಆದ್ದರಿಂದ, ಅಂಬರೀಶ್ ಅವರ ಬಳಿಕ ಇದ್ದ ವಸತಿ ಖಾತೆ ಸಿದ್ದರಾಮಯ್ಯ ಅವರ ಕೈಗೆ ಬಂದಿತ್ತು. ಈಗ ತಮ್ಮ ಸಂಪುಟದಲ್ಲಿ ಖಾಲಿ ಇದ್ದ ಎರಡು ಸ್ಥಾನಗಳ ಪೈಕಿ ಒಂದನ್ನು ಸಿದ್ದರಾಮಯ್ಯ ಅವರ ಭರ್ತಿ ಮಾಡಿದ್ದು, ಸಂಪುಟ ಸೇರಿದ ಎಂ.ಕೃಷ್ಣಪ್ಪ ಅವರಿಗೆ ವಸತಿ ಖಾತೆ ನೀಡಲಾಗಿದೆ.
ಸದ್ಯ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ನಂತರ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ, ಒಂದು ಸ್ಥಾನ ಖಾಲಿ ಇದೆ.