ನೆಲಮಂಗಲ ಬಸ್ ಅಗ್ನಿ ದುರಂತಕ್ಕೆ ಪೂಜಾ ಸಾಮಗ್ರಿಯೇ ಕಾರಣ
ಪ್ರಯಾಣಿಕರೊಬ್ಬರ ಲಗೇಜಿನಲ್ಲಿ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ದಿದ್ದೇ ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 24: ನೆಲಮಂಗಲದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಸಂಸ್ಥೆಗೆ (ಕೆಎಸ್ಆರ್ ಟಿಸಿ) ಸೇರಿದ ಬಸ್ಸೊಂದು ಅಗ್ನಿಗೆ ಆಹುತಿಯಾಗಲು ಪ್ರಯಾಣಿಕರೊಬ್ಬರು ಪೂಜಾ ಸಾಮಗ್ರಿಗಳನ್ನು ಲಗೇಜಿನಲ್ಲಿಟ್ಟುಕೊಂಡು ಬಂದಿದ್ದೇ ಕಾರಣವೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸೊಂದು ಅಗ್ನಿಗೆ ಆಹುತಿಯಾಗಿತ್ತು. ಬಸ್ಸು, ನೆಲಮಂಗಲದ ಅರಿಶೀನಕುಂಟೆ ಬಳಿಗೆ ಬಂದಾಗ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅಗ್ನಿ ದುರಂತದಲ್ಲಿ 10 ಜನರಿಗೆ ಸುಟ್ಟ ಗಾಯಗಳಾಗಿದ್ದರೆ, ಪೀಣ್ಯದ ನಿವಾಸಿ ಭಾಗ್ಯಮ್ಮ ಎಂಬುವರು ಸಜೀವ ದಹನವಾಗಿದ್ದರು.[ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ]
ಘಟನೆಗೆ ಇಲಾಖೆಯ ತನಿಖೆಗೆ ಆದೇಶಿಸಲಾಗಿದ್ದು, ಇದೀಗ ತನಿಖೆಯು ಮುಕ್ತಾಯವಾಗಿ ವರದಿಯಲ್ಲಿ ಪ್ರಯಾಣಿಕರೊಬ್ಬರು ಪೂಜಾ ಸಾಮಗ್ರಿ ಕೊಂಡೊಯ್ದಿದ್ದರಿಂದಲೇ ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೆಂದು ಹೇಳಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.[ನೆಲಮಂಗಲದ ಮೈಲನಹಳ್ಳಿಯಲ್ಲಿ ಪುರಾತನ ದೇವಾಲಯ ಪತ್ತೆ]
ಏತನ್ಮಧ್ಯೆ, ಬಸ್ ಪ್ರಯಾಣಿಕರ ಲಗೇಜ್ ಅನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಕಂಡಕ್ಟರ್ ಗಳಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.