ಹೊರ ರಾಜ್ಯದ ಗಣೇಶನಿಗೆ ಕರ್ನಾಟಕ ಪ್ರವೇಶ ನಿಷಿದ್ಧ
ಬೆ೦ಗಳೂರು, ಜುಲೈ, 28: ಮತ್ತೆ ಗಣೇಶ ಹಬ್ಬ ಎದುರಾಗುತ್ತಿದೆ. ಅದರೊಂದಿಗೆ ಪರಿಸರ ಜಾಗೃತಿಯೂ ನಮ್ಮ ಮುಂದೆ ನಿಂತಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ವಿಗ್ರಹಗಳ ನಿಷೇಧದ ಬಗ್ಗೆಯೂ ಚರ್ಚೆ ಅದಾಗಲೇ ಆರಂಭವಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒಂದು ನಿರ್ಧಾರಕ್ಕೆ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಈಗಾಗಲೆ ತಯಾರಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶ ವಿಗ್ರಹಗಳ ಗಣತಿ ನಡೆಸಿ ನಂತರ ನಿಷೇಧದ ಬಗ್ಗೆ ಸ್ಪಷ್ಟ ತೀರ್ಮಾನ ಹೇಳುತ್ತೇನೆ ಎಂದು ಹೇಳಿದೆ. ಆದರೆ ಹೊಸ ವಿಗ್ರಹ ತಯಾರಿಕೆಗೆ ಅವಕಾಶ ಇಲ್ಲ ಎಂದು ತಿಳಿಸಿದೆ.[ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ನಿಷೇಧ ಸಂಬಂಧ ಬುಧವಾರ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆ ನಡೆಸಿತು. ಬಿಬಿಎಂಪಿ ಸೇರಿ ಇತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಅನೇಕ ಅಂಶಗಳನ್ನು ಉಲ್ಲೇಖ ಮಾಡಲಾಯಿತು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಚೆಕ್ ಪೋಸ್ಟ್ ಗಳಲ್ಲಿ ಸಹ ಎಚ್ಚರಿಕೆ ವಹಿಸಿ ಹೊರರಾಜ್ಯದಿಂಲೂ ಮಾಲಿನ್ಯಕಾರಕ ಗಣಪ ರಾಜ್ಯದ ಒಳಗೆ ಬರಂದತೆ ನೋಡಿಕೊಳ್ಳಬೇಕು ಎಂದು ಹೇಳಲಾಯಿತು.
ಪರಿಸರಕ್ಕೆ ಹಾನಿಯಾಗುವಂಥ ಮಾಲಿನ್ಯಕಾರಕ ಗಣಪತಿ ಬಳಕೆ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು. ಇದಾದ ಮೇಲೆ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.