ವಿದ್ಯಾರ್ಥಿನಿ ಬೆನ್ನುಬಿದ್ದ ಪೇದೆಗೆ ಬಿತ್ತು ಭರ್ತಿ ಒದೆ!
ಮಂಡ್ಯ, ಫೆಬ್ರವರಿ 06 : ಪೇದೆಯೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಾ ಕಿರುಕುಳ ನೀಡಿದ್ದಲ್ಲದೆ, ಆಕೆಯ ತಂದೆಗೆ ಕತ್ತರಿಯಿಂದ ಇರಿಯಲು ಹೋಗಿ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಗೂಸ ತಿಂದ ಘಟನೆ ಮಂಡ್ಯದ ನೆಹರು ನಗರ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಡ್ಯದ ಸೆಸ್ಕ್ ಜಾಗೃತ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಪುಟ್ಟಸ್ವಾಮಿ ಗೂಸಾ ತಿಂದವನು. ಈತ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಇತ್ತೀಚೆಗಷ್ಟೇ ಕೆಇಬಿ ಜಾಗೃತದಳಕ್ಕೆ ಪೇದೆಯಾಗಿ ನಿಯೋಜನೆಗೊಂಡಿದ್ದ. ಈತ ಇಲ್ಲಿನ ನೆಹರು ನಗರ ಬಡಾವಣೆಯಲ್ಲಿರುವ ಯುವತಿಯೊಬ್ಬಳು ಕಾಲೇಜಿಗೆ ಹೋಗುವಾಗ ಆಕೆಯನ್ನು ಹಿಂಬಾಲಿಸುವುದು, ಮಾತನಾಡಲು ಯತ್ನಿಸುವುದು ಮಾಡುತ್ತಿದ್ದ.
ಆದರೆ ಪುಟ್ಟಸ್ವಾಮಿಯ ವರ್ತನೆಗೆ ಸೊಪ್ಪು ಹಾಕದ ಆಕೆ ತನ್ನಪಾಡಿಗೆ ತಾನು ಇದ್ದಳು. ಇದರಿಂದ ಮತ್ತಷ್ಟು ಉತ್ತೇಜಿತನಾದ ಪೇದೆ ತನ್ನ ಕಪಿಚೇಷ್ಟೆಯನ್ನು ಮುಂದುವರೆಸಿದ್ದನು. ಈತನ ಅಸಹ್ಯಕರ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಕಡೆಗೆ ವಿಷಯವನ್ನು ತನ್ನ ತಂದೆಗೆ ತಿಳಿಸಿದ್ದಾಳೆ. [ಕೆಬ್ಬಳ್ಳಿ ಆನಂದ್ ಗೆ 'ಡಾನ್' ಬೆದರಿಕೆ?]
ಅವರು ಟೈಲರ್ ಅಂಗಡಿ ಬಳಿಗೆ ಬಂದು ಪೇದೆ ಪುಟ್ಟಸ್ವಾಮಿಯನ್ನು ಕೇಳಿದ್ದಾರೆ. ಈ ಸಂದರ್ಭ ಕೋಪಗೊಂಡ ಪೇದೆ ಅಂಗಡಿಯಲ್ಲಿದ್ದ ಕತ್ತರಿಯಿಂದ ಯುವತಿಯ ತಂದೆಗೆ ಇರಿಯಲು ಮುಂದಾಗಿ, ಏರು ದನಿಯಲ್ಲಿ ಮಾತನಾಡಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಸ್ಥಳಕ್ಕೆ ಬರುತ್ತಿದ್ದಂತೆ ಓಡಲು ಮುಂದಾಗಿದ್ದಾನೆ. ಆಗ ಬೆನ್ನತ್ತಿ ಹಿಡಿದ ಸಾರ್ವಜನಿಕರು ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೇದೆ ಪುಟ್ಟಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. [ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್]