ಪ್ರಶ್ನೆ ಪತ್ರಿಕೆ ಸೋರಿಕೆ : ಹೈಕೋರ್ಟ್ ನ್ಯಾಯವಾದಿ ಅರೆಸ್ಟ್
ಕಲಬುರ್ಗಿ, ಡಿ. 18: ಕರ್ನಾಟಕ ಹೈ ಕೋರ್ಟ್ ವಕೀಲ ಎನ್.ಎಸ್. ಹಿರೇಮಠ ಅವರನ್ನು ಪೊಲೀಸರು ಕಲಬುರ್ಗಿಯಲ್ಲಿ ಬಂಧಿಸಿದ್ದಾರೆ. ಪೊಲೀಸ್ ಪೇದೆ ನೇಮಕಾತಿಗಾಗಿ ರಾಜ್ಯದಲ್ಲೆಡೆ ನವೆಂಬರ್ 16ರಂದು ನಡೆದಿದ್ದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಮಠ ಅವರನ್ನು ಬಂಧಿಸಲಾಗಿದೆ.
ಈ ಕುರಿತು ಕಲಬುರ್ಗಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದಲ್ಲಿ ಬಂಧಿತರ ಸಂಖ್ಯೆ 15ಕ್ಕೇರಿದೆ. ಇನ್ನೂ ಇಬ್ಬರ ಸುಳಿವು ಸಿಕ್ಕಿದ್ದು, ಇನ್ನೊಂದು ವಾರದಲ್ಲಿ ಅವರನ್ನು ಬಂಧಿಸಲಾಗುವುದು. ಬಂಧಿತರಿಂದ 77 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಎನ್.ಎಸ್. ಹಿರೇಮಠ ಅವರ ಹತ್ತಿರ ಯಾವುದೇ ಹಣ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ. [ಉತ್ತರ ಪತ್ರಿಕೆ ಬಾರ್ ನಲ್ಲಿಟ್ಟ ಉಪನ್ಯಾಸಕ]
ಪ್ರಕರಣದ ಆರೋಪಿಗಳಲ್ಲೋರ್ವರಾದ ಸಿದ್ದಣ್ಣ ಎಚ್. ದೇವದುರ್ಗಾ ಅವರನ್ನು ನವೆಂಬರ್ ತಿಂಗಳಲ್ಲಿ ಜೇವರ್ಗಿ ತಾಲೂಕಿನ ತೋಟದ ಮನೆಯೊಂದರಲ್ಲಿ ಬಂಧಿಸಲಾಗಿತ್ತು. ಅವರು ವಿಚಾರಣೆಯಲ್ಲಿ ಎನ್.ಎಸ್. ಹಿರೇಮಠ ಕೈವಾಡ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಪೊಲೀಸ್ ಪೇದೆ ಹುದ್ದೆಗೆ ಮರುಪರೀಕ್ಷೆ]
ಎನ್.ಎಸ್. ಹಿರೇಮಠ ಅವರು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿ. ಬೆಂಗಳೂರಿನ ಹೈ ಕೋರ್ಟ್ನ ಪ್ರಧಾನ ಪೀಠದಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದಾರೆಂದು ಅಮಿತ್ ಸಿಂಗ್ ವಿವರಿಸಿದ್ದಾರೆ.