ಕೇಂದ್ರ-ರಾಜ್ಯಗಳ ನಡುವಿನ ಕಿತ್ತಾಟಕ್ಕೆ ಬಲಿಯಾದ ರೈತ ಸಮೂಹ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 177 ತಾಲೂಕುಗಳ ಪೈಕಿ 160 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಿದ್ದು ಬಿಟ್ಟರೆ ರೈತನ ನೆರವಿಗೆ ನಿಲ್ಲುವ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಎಎಪಿ ಕರ್ನಾಟಕ ಅರೋಪಿಸಿದೆ.
ಬೆಂಗಳೂರು, ಫೆಬ್ರವರಿ, 21: ರಾಜ್ಯದಲ್ಲಿ 177 ತಾಲೂಕುಗಳ ಪೈಕಿ 160 ತಾಲೂಕುಗಳನ್ನು ಬರ ಪೀಡಿತವೆಂದು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದು ಬಿಟ್ಟರೆ ರೈತನ ನೆರವಿಗೆ ನಿಲ್ಲುವ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆರೋಪಿಸಿದೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಕುರಿತು ಮಲತಾಯಿ ಧೋರಣೆ ಪ್ರದರ್ಶಿಸುತ್ತಿದ್ದು, ರೈತ ವಿರೋಧಿಯಂತೆ ವರ್ತಿಸುತ್ತಿದೆ.
ರಾಜ್ಯದ ಪಾಲಿಗೆ ಬರಬೇಕಿದ್ದ ಬರ ಪರಿಹಾರ ಪ್ಯಾಕೇಜ್ ಅನ್ನೂ ಬಿಡುಗಡೆಗೊಳಿಸದೆ, ರಾಜ್ಯದ ರೈತರನ್ನು ನಿರ್ಲಕ್ಷಿಸುತ್ತಾ ತಮಾಷೆ ನೋಡಲು ಕುಳಿತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಈ ಬೇಜವಾಬ್ದಾರಿತನವನ್ನು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕ ರಾಜ್ಯ ಕಳೆದ 6 ವರ್ಷಗಳಿಂದ ಸತತವಾಗಿ ಬರ ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದೆ, ಕಳೆದೆರಡು ವರ್ಷಗಳಿಂದ ಪರಿಸ್ಥಿತಿ ಕೈಮೀರಿ ಹೋಗಿದ್ದು, ಕಳೆದ ವರ್ಷದಲ್ಲಿ ರಾಜ್ಯದಲ್ಲಿ ಸರಿಸುಮಾರು 1,500 ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸ್ಮಶಾನ ಸದೃಶ್ಯ ಪರಿಸ್ಥಿತಿಗೆ ನೇರವಾಗಿ ಕಾರಣವಾಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯತೆ ಈಗಲೂ ಸಹ ಮುಂದುವರೆದಿದ್ದು, ಇದರಿಂದಾಗಿ ಕಳೆದ ಒಂದು ತಿಂಗಳಲ್ಲೇ ರಾಜ್ಯಕ್ಕೆ ಅನ್ನ ನೀಡಬೇಕಿದ್ದ 73 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳೆಗೆ ನೋಟು ರದ್ದತಿಯ ಪರಿಣಾಮ
ಒಂದೆಡೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಮೇಲೆ ನೋಟು ರದ್ದತಿ ಎಂಬ ಅಮಾನವೀಯ ಬರೆ ಎಳೆದಿದೆ. ಬರದ ನಡುವೆಯೂ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಗೆ ನೋಟು ರದ್ದತಿಯ ಪರಿಣಾಮದಿಂದಾಗಿ ಸರಿಯಾದ ಬೆಲೆಯೇ ಇಲ್ಲದಂತಾಗಿದೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಬೀದಿಗೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಕೇಂದ್ರ ಸರ್ಕಾರ ಹೊಣೆಯಾಗಿದ್ದರೂ, ರೈತರಿಗೆ ಪರಿಹಾರವಾಗಿ ಏನನ್ನೂ ನೀಡಲಾಗಿಲ್ಲ.
ಅಷ್ಟೇ ಅಲ್ಲದೆ, ಜನ ಸಾಮಾನ್ಯರಿಂದ, ರೈತರಿಂದ ಹಣವನ್ನು ಸಂಗ್ರಹಿಸಿ ಅವೆಲ್ಲವನ್ನೂ ಕಾರ್ಪೊರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡಲು ಮೋದಿ ಬಳಸಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡುವ ಗೋಜಿಗೇ ಹೋಗದಿರುವುದು ಈ ಸರ್ಕಾರದ ಅಮಾನವೀಯ ರೈತವಿರೋಧಿ ನಿಲುವನ್ನು ಪ್ರದರ್ಶಿಸುತ್ತಿದೆ.
ವಿದ್ಯುತ್ ದರವನ್ನು ಹೆಚ್ಚಿಸಲು ಸಜ್ಜಾಗಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಿಸಲು ಸಕಲ ತಯಾರಿಗಳನ್ನೂ ಮಾಡಿ ನಿಂತಿದೆ. ರೈತರಿಗೆ ಅಗತ್ಯವಿರುವಷ್ಟು ವಿದ್ಯುತ್ ಸಂಪರ್ಕ ನೀಡುವ ಯೋಗ್ಯತೆಯನ್ನು ಬೆಳೆಸಿಕೊಂಡಿರದಿದ್ದರೂ, ಯಾವುದೇ ನಾಚಿಕೆಯಿಲ್ಲದಂತೆ ವಿದ್ಯುತ್ ದರವನ್ನು ಹೆಚ್ಚಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಾಣೆಯಾಗಿದ್ದಾರೆ. ಕಳೆದ ಒಂದು ತಿಂಗಳಲ್ಲೇ 73 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಇಡೀ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ, ಆದರೂ ಈವರೆಗೂ ಯಾವುದೇ ಜನಪ್ರತಿನಿಧಿ ರೈತರೊಂದಿಗೆ ನಿಂತು ಅವರ ಧೈರ್ಯವನ್ನು ಹೆಚ್ಚಿಸುವ ಕೆಲಸವನ್ನೂ ಮಾಡಿಲ್ಲ.
ರಾಜ್ಯಕ್ಕೆ ಬರ ಪರಿಹಾರ ಪ್ಯಾಕೇಜ್
ರಾಜ್ಯದಿಂದ 17 ಜನ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ, ಕೇಂದ್ರದಿಂದ ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲರಾಗಿ ಅಪ್ರಯೋಕರಾಗಿದ್ದಾರೆ. ಇಂತಹ ರಾಜ್ಯ ವಿರೋಧಿ ಸಂಸದರು ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.
ರಾಜ್ಯದ ಎಲ್ಲಾ ಶಾಸಕರು, ಸಂಸದರು ಪಕ್ಷ ಭೇದ ಮರೆತು ಒಂದಾಗಿ ಸರ್ವಪಕ್ಷ ಸಭೆ ಕರೆದು, ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಪ್ಯಾಕೇಜ್ ಬಿಡುಗಡೆಗೊಳಿಸಲು ಒತ್ತಡ ಹೇರಬೇಕು.
ಜನರ ವಲಸೆ ತಪ್ಪಿಸಲು ಇದೇ ಮಾರ್ಗ
ರಾಜ್ಯ ಸರಕಾರ ಬರ ಪರಿಹಾರಕ್ಕೆ ಬೇಕಾದ ಹಣ ಬಿಡುಗಡೆ ಮಾಡಿ, ಮಾಡಿಸಿ ರೈತರ ನೆರವಿಗೆ ಧಾವಿಸಬೇಕು, ಜನರ ವಲಸೆ ತಪ್ಪಿಸಲು ಮನರೇಗಾ ಅಡಿಯಲ್ಲಿ ಅವರಿಗೆ ಬೇಕಾದ ದಿನಗೂಲಿ ಕೆಲಸ ಕಲ್ಪಿಸಬೇಕು, ರಾಜ್ಯದ ಎಲ್ಲಕೆರೆ-ಕಟ್ಟೆ-ಬಾವಿ, ಜಲಾಶಯಗಳ ಹೂಳೆತ್ತಿಸಿ, ಸಮರೋಪಾದಿಯಲ್ಲಿ ಜಲ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಸರಕಾರವನ್ನು ಆಮ್ ಆದ್ಮಿ ಪಾರ್ಟಿ ಎಚ್ಚರಿಸುತ್ತಿದೆ.
ಸಾಲ ವಜಾ ಮಾಡಿ
ಆತ್ಮಹತ್ಯೆಗೆ ಶರಣಾದ ರೈತರ ಸಾಲಬಾಕಿ ಇದ್ದಲ್ಲಿ ಅವರ ಕುಟುಂಬಕ್ಕೆ ಹೊರೆಯಾಗದಂತೆ ಅವರ ಸಾಲ ವಜಾ ಮಾಡಿ ಅವರಿಗೆ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ. ಈ ಕೆಲಸ ಆಗುವವರೆಗೆ ಆಮ್ ಆದ್ಮಿ ಪಾರ್ಟಿಸರಕಾರವನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಆತಂಕದಲ್ಲಿರುವ ರಾಜ್ಯದ ಜನರಿಗೆ ಬೇಕಾದ ಭರವಸೆ ಸರಕಾರ ಮೂಡಿಸದಿದ್ದಲ್ಲಿ, ರೈತರೊಂದಿಗೆ ಕೂಡಿ ತೀವ್ರವಾದ ಹೋರಾಟಕ್ಕೆ ಮುಂದಾಗಲಿದೆ ಎಂದು ಆಮ್ ಆದ್ಮಿ ಪಾರ್ಟಿ ಸರಕಾರವನ್ನುಎಚ್ಚರಿಸುತ್ತದೆ.