ಕೃಷ್ಣಮಠಕ್ಕೆ ಬನ್ನಿ, ರಾಜ್ಯದ ಸಂಕಷ್ಟ ದೂರವಾಗಲಿದೆ: ಸಿದ್ದುಗೆ ಪೇಜಾವರ ಶ್ರೀ
ಉಡುಪಿ, ಜ 5: ಇದೇ ತಿಂಗಳು 18ರಂದು ನಡೆಯಲಿರುವ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಯಸ ಕಳುಹಿಸಿದ್ದೇವೆಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.
ಐತಿಹಾಸಿಕ ಐದನೇ ಬಾರಿ ಪರ್ಯಾಯ ಸರ್ವಜ್ಞ ಪೀಠವನ್ನೇರುವ ಮುನ್ನ ನಡೆಯುವ ಸಾಂಪ್ರದಾಯಿಕ ಪುರಪ್ರವೇಶ ಮೆರವಣಿಗೆಯಲ್ಲಿ ಭಾಗವಹಿಸಿ, ಪೌರ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಪೇಜಾವರ ಶ್ರೀಗಳು, ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಉಡುಪಿಗೆ ಆಹ್ವಾನಿಸಿದ್ದಾರೆ.
ಸಿದ್ದರಾಮಯ್ಯನವರು ಈ ಹಿಂದೆ ಹಲವು ಬಾರಿ ಉಡುಪಿಗೆ ಭೇಟಿ ನೀಡಿದ್ದಾರೆ. ಆದರೆ, ಒಮ್ಮೆಯೂ ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ. ಮಠಕ್ಕೆ ಬಂದು ಶ್ರೀಕೃಷ್ಣನ ಆಶೀರ್ವಾದ ಪಡೆದರೆ ರಾಜ್ಯದ ಸಂಕಷ್ಟಗಳು ದೂರವಾಗಲಿವೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. (ಮಗನಿಗಾಗಿ ಪರಿತಪಿಸುತ್ತಿರುವ ಉಡುಪಿ ಕುಟುಂಬ)
ನಾಗರೀಕ ಸನ್ಮಾನಕ್ಕೆ ಮುನ್ನ ನಡೆದ ಅಭೂತಪೂರ್ವ ಪುರಪ್ರವೇಶ ಮೆರವಣಿಗೆಯಲ್ಲಿ, ಎಲ್ಲಾ ಸಮುದಾಯದ ಸಾವಿರಾರು ಜನರು ವರ್ಣರಂಜಿತ ಮೆರವಣಿಗೆಗೆ ಸಾಕ್ಷಿಯಾದರು.
ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ, ನಾಲ್ಕು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಉಡುಪಿ ನಗರವನ್ನು ವೈಭವದಿಂದ ತೇಲಿಸಿದರು.
ಸೋಮವಾರ (ಜ 4) ಸಂಜೆ 4.28ಕ್ಕೆ ಜೋಡುಕಟ್ಟೆ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ, ತಟ್ಟೀರಾಯ, ಯಕ್ಷಗಾನ, ಗೊರವರ ಕುಣಿತ, ಸೋಮನ ಕುಣಿತ, ಹಾಲಕ್ಕಿ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಎಪ್ಪತ್ತಕ್ಕೂ ಕಲಾವಿದರು ಭಾಗವಹಿಸಿದ್ದರು. ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು ಮೆರವಣಿಗೆಯೊಂದಿಗೆ ವಿಶೇಷ ವಾಹನದಲ್ಲಿ ಆಗಮಿಸಿದರು.
ಸಿದ್ದುಗೆ ಪೇಜಾವರ ಶ್ರೀಗಳ ಸಲಹೆ, ಮುಂದೆ ಓದಿ..
ಡಾ. ಮೋಹನ್ ಆಳ್ವ
ಉಡುಪಿ ಪರ್ಯಾಯ ಮತ್ತು ಅದರ ಪೂರ್ವಭಾವಿಯಾಗಿ ನಡೆಯುವ ಮೆರವಣಿಗೆಯನ್ನು ತನ್ನ ಸಂಸ್ಥೆಯ ನೇತೃತ್ವದಲ್ಲಿ ನಡೆಸಬೇಕೆನ್ನುವ ಆಳ್ವ ಅವರ ಇಚ್ಚೆಯಂತೆ ಪುರಪ್ರವೇಶ ಮೆರವಣಿಗೆ ನಡೆಯಿತು. ಆಳ್ವಾಸ್ ಪ್ರತಿಷ್ಠಾನದ ಮೂರು ಸಾವಿರಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗವಹಿಸಿದ್ದರು.(ಪುರಪ್ರವೇಶ ಮೆರವಣಿಗೆಯ ಚಿತ್ರಗಳು)
ಪೇಜಾವರ ಶ್ರೀಗಳಿಂದ ಮತ್ತೊಮ್ಮೆ ಆಹ್ವಾನ
ಬೆಂಗಳೂರಿನಲ್ಲಿ ಚಾತುರ್ಮಾಸ ವೃತದಲ್ಲಿದ್ದಾಗಲೇ ಮುಖ್ಯಮಂತ್ರಿಗಳನ್ನು ಪರ್ಯಾಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ನೋಡೋಣ ಎಂದಿದ್ದರು, ಅವರ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನಮ್ಮ ಹಿಂದಿನ ಪರ್ಯಾಯದ ವೇಳೆ ರಾಮಕೃಷ್ಣ ಹೆಗಡೆ, ಎಸ್ ಎಂ ಕೃಷ್ಣ ಆಗಮಿಸಿದ್ದರು. ನೀವೂ ಬರಬೇಕೆಂದು ಸಿದ್ದರಾಮಯ್ಯನವರಿಗೆ ಹೇಳಿದ್ದೇವೆ. ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುತ್ತಿದ್ದೇವೆ - ಪೇಜಾವರ ಶ್ರೀ (ಪುರಪ್ರವೇಶ ಮೆರವಣಿಗೆಯ ಚಿತ್ರಗಳು)
ಕೃಷ್ಣ ಮಠಕ್ಕೆ ಬಂದರೆ ಸಂಕಷ್ಟ ದೂರವಾಗುತ್ತದೆ
ನಮಗೆ ಎಲ್ಲಾ ವರ್ಗ, ಸಮುದಾಯದಲ್ಲೂ ಭಕ್ತರಿದ್ದಾರೆ. ಅಲ್ಪಸಂಖ್ಯಾತ, ಬಹು ಸಂಖ್ಯಾತರು ಎನ್ನುವ ವ್ಯತ್ಯಾಸ ನಮ್ಮಲಿಲ್ಲ. ಮುಖ್ಯಮಂತ್ರಿಗಳು ಉಡುಪಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆಯಲಿ, ನಾಡಿಗೆ ಎದುರಾಗಿರುವ ಎಲ್ಲಾ ಸಂಕಷ್ಟ ದೂರವಾಗಲಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. (ಪುರಪ್ರವೇಶ ಮೆರವಣಿಗೆಯ ಚಿತ್ರಗಳು)
ಚಿಕ್ಕ ದೇಹದಲ್ಲಿ ಅದೆಂಥಾ ಶಕ್ತಿ
ಪೇಜಾವರ ಶ್ರೀಗಳು ಅಪರೂಪದ ದಾರ್ಶನಿಕರು. ಈ ಚಿಕ್ಕ ದೇಹದಲ್ಲಿ ದೇವರು ಅವರಿಗೆ ಅದೆಂಥಾ ಶಕ್ತಿಯನ್ನು ನೀಡಿದ್ದಾನೆ. ಶ್ರೀಗಳಿಂದ ನಮಗೆ ಆದೇಶ ಮುಂದಿನ ದಿನಗಳಲ್ಲೂ ಬರುತ್ತಿರಲಿ, ಅದನ್ನು ಶ್ರದ್ದಾಪೂರ್ವಕವಾಗಿ ಮಾಡುತ್ತೇವೆ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ಹೇಳಿದ್ದಾರೆ. (ಪುರಪ್ರವೇಶ ಮೆರವಣಿಗೆಯ ಚಿತ್ರಗಳು)
ಶೋಭಾ ಕರಂದ್ಲಾಜೆ
ಪೇಜಾವರ ಶ್ರೀಗಳು ಬರೀ ಉಡುಪಿ, ಕರ್ನಾಟಕಕ್ಕೆ ಸೀಮಿತರಾದವರಲ್ಲ. ಶ್ರೀಗಳು ಇಡೀ ಭಾರತದ ಆಸ್ತಿ. ಶ್ರೀಗಳ ಪರ್ಯಾಯ ಅವಧಿಯಲ್ಲಿ ಇನ್ನಷ್ಟು ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿ ಕೆಲಸ ನಡೆಯಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. (ಪುರಪ್ರವೇಶ ಮೆರವಣಿಗೆಯ ಚಿತ್ರಗಳು)
ನಾಗರೀಕ ಸಮಿತಿಯಿಂದ ಸನ್ಮಾನ
ನಾಗರೀಕ ಸಮಿತಿ ಆಯೋಜಿಸಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪೇಜಾವರ ಕಿರಿಯ ವಿಶ್ವಪ್ರಸನ್ನ ತೀರ್ಥರು, ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಗಳು, ಪಲಿಮಾರು ಮಠದ ಶ್ರೀ ವಿದ್ಯಾಧೀಶಧಿ ತೀರ್ಥ ಶ್ರೀಗಳು, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ನಗರಸಭಾಧ್ಯಕ್ಷ ಯುವರಾಜ್, ಪೌರಾಯುಕ್ತ ಮಂಜುನಾಥಯ್ಯ ಮುಂತಾದ ಪ್ರಮುಖರು ಭಾಗವಹಿಸಿದ್ದರು. (ಪುರಪ್ರವೇಶ ಮೆರವಣಿಗೆಯ ಚಿತ್ರಗಳು)