ಸರ್ಕಾರ ಅನುಮತಿ ಕೊಟ್ಟರೆ ಬೀದರ್ ನಲ್ಲಿ ಪತಂಜಲಿ ಫುಡ್ ಪಾರ್ಕ್
ಬೀದರ್, ನವೆಂಬರ್. 15: ಪತಂಜಲಿ ಯೋಗ ಪೀಠ ಕರ್ನಾಟಕದಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಲು ಮುಂದಾಗಿದೆ. ವಿಶೇಷವೆಂದರೆ ಉತ್ತರ ಕರ್ನಾಟಕ ಬೀದರ್ ಜಿಲ್ಲೆಯಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಲು ಪತಂಜಲಿ ಯೋಗ ಪೀಠ ಆಸಕ್ತಿ ವಹಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಸಿಕ್ಕರೆ ಬೀದರ್ ಜಿಲ್ಲೆಯಲ್ಲಿ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಪತಂಜಲಿ ಯೋಗ ಪೀಠದ ರಾಜ್ಯ ಘಟಕದ ಪ್ರಭಾರಿ ಭವರಲಾಲ್ ಆರ್ಯ ಸೋಮವಾರ ಹೇಳಿದರು.
ಫುಡ್ ಪಾರ್ಕ್ ಸ್ಥಾಪನೆ ಮಾಡಲು ಸುಮಾರು 200 ಎಕರೆ ಜಾಗ ಬೇಕಾಗುತ್ತದೆ, ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಸ್ಥಾಪನೆ ಮಾಡಲಾಗುತ್ತದೆ ಎಂದರು.[ಅಶೋಕ್ ಖೇಣಿ ಅವರ ಬೀದರ್ ದಕ್ಷಿಣ ಕ್ಷೇತ್ರ ಈಗ ಡಿಜಿಟಲ್ ಕ್ಷೇತ್ರ]
ಬೇರೆ ರಾಜ್ಯಗಳಲ್ಲಿ ಈಗಾಗಲೇ ಫುಡ್ ಪಾರ್ಕ್ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಪಾರ್ಕ್ ಸ್ಥಾಪನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಕೇಂದ್ರದ ಒಪ್ಪಿಗೆ ಸಿಕ್ಕಿದ ಬಳಿಕ, ರಾಜ್ಯ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಾಧ್ಯತೆ ಇದೆ ಎಂದರು.
ಗ್ರಾಮೀಣ ಪ್ರದೇಶದ ಜನರಿಗೂ ಯೋಗ ತರಬೇತಿ ನೀಡಲು ಪತಂಜಲಿ ಯೋಗ ಪೀಠ ಬೀದರ್ ನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನ.17ರಿಂದ ಯೋಗ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.