ಕೊಪ್ಪಳ : ಪಶುಭಾಗ್ಯ ಯೋಜನೆಯಿಂದ ನೆಮ್ಮದಿ ಕಂಡ ಕುಟುಂಬ
ಕೊಪ್ಪಳ, ಅ.23 : ಕೃಷಿ ಕಾರ್ಮಿಕರಾಗಿ ದುಡಿದು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಕುಟುಂಬವೊಂದ, ರಾಜ್ಯ ಸರ್ಕಾರದ ಪಶು ಭಾಗ್ಯ ಯೋಜನೆಯಿಂದಾಗಿ ಹೈನುಗಾರಿಕೆ ಕೈಗೊಂಡು ನಿತ್ಯ ಆದಾಯ ಗಳಿಸುತ್ತಿದೆ. ಯೋಜನೆಯ ಲಾಭ ಪಡೆದು ಬದುಕು ಕಟ್ಟಿಕೊಂಡಿದೆ.
ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ
ಕೃಷಿ ಕಾರ್ಮಿಕರಾಗಿ ದುಡಿಮೆ ಮಾಡಿಕೊಂಡಿದ್ದ ತಳಕಲ್ ಗ್ರಾಮದ ದುರುಗಪ್ಪ ತಾಯಮ್ಮನವರ ಎಂಬುವವರು ಯೋಜನೆ ಫಲಾನುಭವಿ. ಮೊದಲು ಇವರು ಆಯಾ ದಿನದ ದುಡಿಮೆಯಿಂದ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕುಟುಂಬ ನಿರ್ವಹಣೆ ಜೊತೆ ಮೂವರು ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದು ಕಷ್ಟವಾಗಿತ್ತು.
ಪಶುಸಂಗೋಪನಾ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಶುಭಾಗ್ಯ ಯೋಜನೆ ಈಗ ಇವರ ಕುಟುಂಬಕ್ಕೆ ನೆಮ್ಮದಿ ನೀಡಿದೆ, ಬದುಕಿಗೆ ಆಧಾರವಾಗಿದೆ. ದುರುಗಪ್ಪ ಅವರಿಗೆ ಇಲಾಖೆಯು ವಿಶೇಷ ಘಟಕ ಕಾರ್ಯಕ್ರಮದಲ್ಲಿ ಪಶು ಭಾಗ್ಯ ಯೋಜನೆಯಡಿ ಮಿಶ್ರತಳಿ ಆಕಳು ಕೊಡಿಸಿದೆ.
ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ
ಈ ಯೋಜನೆಯಡಿ ಫಲಾನುಭವಿಗೆ 60 ಸಾವಿರ ರೂ. ಸಹಾಯಧನ ಮತ್ತು 60 ಸಾವಿರ ರೂ. ಬ್ಯಾಂಕ್ ಸಾಲ ಸೇರಿದಂತೆ ಒಟ್ಟು 1. 20 ಲಕ್ಷ ರೂ. ವೆಚ್ಚವಾಗಿರುತ್ತದೆ. ಈ ಯೋಜನೆಯಡಿ ದುರುಗಪ್ಪ ಅವರಿಗೆ ಸದ್ಯ ಒಂದು ಮಿಶ್ರತಳಿ ಆಕಳು ಕೊಡಿಸಲಾಗಿದ್ದು, ಪಶು ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮಿಶ್ರತಳಿ ಆಕಳನ್ನು ಉತ್ತಮವಾಗಿ ಪಾಲನೆ ಮತ್ತು ಪೋಷಣೆ ಮಾಡಲಾಗುತ್ತಿದೆ.
ಈ ಆಕಳು ಒಂದು ಹೆಣ್ಣು ಕರು ಹಾಕಿರುವುದರಿಂದ, ದುರುಗಪ್ಪ ಕುಟುಂಬದ ಸಂತೋಷ ಇಮ್ಮಡಿಗೊಳಿಸಿದೆ. ಸದ್ಯ, ಆಕಳು ನಿತ್ಯ 8 ಲೀಟರ್ ಹಾಲು ಕೊಡುತ್ತಿದ್ದು, ಮನೆಯಲ್ಲಿ ಹಾಲು, ಮೊಸರಿನ ಸವಿ ಕಾಣಲು ಸಾಧ್ಯವಾಗಿದೆ. ಮನೆಯ ಉಪಯೋಗಕ್ಕೆ ನಿತ್ಯ 1 ಲೀಟರ್ ಹಾಲು ಹಾಗೂ ಕರುವಿಗೆ 1 ಲೀಟರ್ ಬಿಟ್ಟು ಉಳಿದ 6 ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದಾರೆ.
ಇದರಿಂದಾಗಿ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸಲು ಸಾಧ್ಯವಾಗಿದೆ. ಮನೆಯ ಆರ್ಥಿಕ ಸ್ಥಿತಿ-ಗತಿ ಸುಧಾರಣೆ ಕಂಡಿದೆ. ಮಕ್ಕಳಿಗೂ ಮನೆಯಲ್ಲಿ ಪೌಷ್ಠಿಕ ಆಹಾರ ದೊರೆಯುವಂತಾಗಿದ್ದು, ದುರುಗಪ್ಪ ಅವರ ಕುಟುಂಬ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ.
'ಪಶುಭಾಗ್ಯ ಯೋಜನೆಯಡಿ ಸದ್ಯ ಒಂದು ಮಿಶ್ರತಳಿ ಆಕಳು ಕೊಡಿಸಲಾಗಿದ್ದು, ಬ್ಯಾಂಕ್ನವರ ಸಹಕಾರವನ್ನು ಪಡೆದು, ಶೀಘ್ರದಲ್ಲಿಯೇ ಇನ್ನೊಂದು ಮಿಶ್ರತಳಿ ಆಕಳನ್ನು ಕುಟುಂಬಕ್ಕೆ ಕೊಡಿಸಲಾಗುವುದು. ಕೃಷಿ ಕಾರ್ಮಿಕರ ಕುಟುಂಬಗಳಿಗೆ ಯೋಜನೆ ವರದಾನವಾಗಿದೆ' ಎನ್ನುತ್ತಾರೆ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ತಿಪ್ಪಣ್ಣ.
(ಲೇಖನ : ತುಕಾರಾಂರಾವ್ ಬಿ.ವಿ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ)