ಕೊಳವೆ ಬಾವಿ ಮುಚ್ಚದಿದ್ದರೆ ಪೊಲೀಸ್ ಕೇಸ್
ಬೆಂಗಳೂರು, ಆ.7 : ರಾಜ್ಯದಲ್ಲಿ ನಡೆದ ಕೊಳವೆ ಬಾವಿ ದುರಂತದ ಬಳಿಕ ರಾಜ್ಯ ಸರ್ಕಾರ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲು ನಿರ್ಲಕ್ಷ್ಯ ತೋರುವ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದೆ. ಈ ಕುರಿತ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬುಧವಾರ ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಅನ್ವಯ ರಾಜ್ಯದಲ್ಲಿರುವ ಎಲ್ಲಾ ನಿರುಪಯುಕ್ತ ಕೊಳವೆಬಾವಿಗಳನ್ನು ಆ.31ರೊಳಗೆ ಮುಚ್ಚಿಸಬೇಕು. ಗ್ರಾಮದಲ್ಲಿನ ಕೊಳವೆಬಾವಿ ಮುಚ್ಚಿಸಿರುವ ಕುರಿತು ಪಿಡಿಒ, ಕಿರಿಯ ಎಂಜಿನಿಯರ್ ಹಾಗೂ ಗ್ರಾಮಲೆಕ್ಕಿಗರು ಜಂಟಿ ಪ್ರಮಾಣಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ಸಲ್ಲಿಸಲೇಬೇಕು. [ತಿಮ್ಮಣ್ಣ ರಕ್ಷಣಾ ಕಾರ್ಯ ಹೇಗೆ ಸಾಗಿದೆ?]
ಹೊಸ ಮಾರ್ಗಸೂಚಿ ಅನ್ವಯ ಕೊಳವೆಬಾವಿಗಳನ್ನು ಮುಚ್ಚಿಸುವುದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದನ್ನು ಖಾತ್ರಿಪಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿ.ಪಂ ಸಿಇಒ, ಎಸ್ಪಿ, ಸಮಾಜ ಕಲ್ಯಾಣಾಧಿಕಾರಿ, ಜಿಲ್ಲಾ ಭೂ ವಿಜ್ಞಾನಿ, ತಾಲೂಕಿನ ತಹಸೀಲ್ದಾರ್, ತಾಪಂ ಇಒಗಳು ಸಮಿತಿ ಸದಸ್ಯರಾಗಿರುತ್ತಾರೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಗ್ರಾಮದಲ್ಲಿನ ಕೊಳವೆ ಬಾವಿ ತಕ್ಷಣ ಮುಚ್ಚಿ
* ಎಲ್ಲಾ ನಿರುಪಯುಕ್ತ ಕೊಳವೆಬಾವಿಗಳನ್ನು ಆ.31ರೊಳಗೆ ಮುಚ್ಚಿಸಬೇಕು. ಕೊಳವೆಬಾವಿ ಮುಚ್ಚಿಸಿರುವ ಕುರಿತು ಪಿಡಿಒ, ಕಿರಿಯ ಎಂಜಿನಿಯರ್ ಹಾಗೂ ಗ್ರಾಮಲೆಕ್ಕಿಗರು ಜಂಟಿ ಪ್ರಮಾಣಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ಸಲ್ಲಿಸಲೇಬೇಕು.
* ಪಿಡಿಒ, ಗ್ರಾಮ ಲೆಕ್ಕಿಗ, ಪಂಚಾಯತ್ ರಾಜ್ ಇಲಾಖೆಯ ಕಿರಿಯ ಎಂಜಿನಿಯರ್ ಹಾಗೂ ಪೊಲೀಸ್ ಠಾಣೆಯ ಎಸ್ಐ ಅಥವಾ ಕಾನ್ ಸ್ಟೇಬಲ್ ತಂಡ ಮಾಡಿಕೊಂಡು ಗ್ರಾಮದಲ್ಲಿರುವ ಎಲ್ಲಾ ಸರ್ಕಾರಿ, ಖಾಸಗಿ ಕೊಳವೆಬಾವಿಗಳನ್ನು ಮುಚ್ಚಿಸಬೇಕು.
* ಜಿಲ್ಲಾ ಪಂಚಾಯಿತಿ ಸಿಇಒ ಸರ್ಕಾರದ ನಾನಾ ಇಲಾಖೆಗಳಿಂದ ಕೊರೆದಿರುವ ಕೊಳವೆ ಬಾವಿಗಳ ಮಾಹಿತಿ ಪಡೆದು ತಕ್ಷಣವೇ ಮುಚ್ಚಿಸಲು ಗಮನಹರಿಸಬೇಕು.
ಕೊಳವೆ ಬಾವಿ ಕೊರೆಯುವ ಮುನ್ನ ಎಚ್ಚರ
* ಕೊಳವೆ ಬಾವಿ ಕೊರೆಯುವ 15 ದಿನಗಳ ಮುಂಚಿತವಾಗಿ ಜಮೀನಿನ ಮಾಲೀಕ, ಗುತ್ತಿಗೆದಾರ, ಸಂಸ್ಥೆಗಳು ಸಂಬಂಧಿಸಿದ ಗ್ರಾಪಂ ಕಾರ್ಯದರ್ಶಿಗೆ ಮಾಹಿತಿ ನೀಡಿ ಸ್ವೀಕೃತಿ ಪಡೆಯಬೇಕು.
* ಕೊಳವೆಬಾವಿ ಕೊರೆಯುವ ಎಲ್ಲಾ ಯಂತ್ರಗಳ ಮಾಲೀಕರು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ನೋಂದಾವಣೆ ಮಾಡಿಕೊಳ್ಳಬೇಕು. ನೋಂದಣಿ ಮಾಡದೇ ಇದ್ದ ಯಂತ್ರದ ಮಾಲೀಕರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬಹುದು.
* ವಿಫಲವಾದ ಕೊಳವೆಬಾವಿಗಳನ್ನು ಸಂಸ್ಥೆ ಹಾಗೂ ಜಮೀನಿನ ಮಾಲೀಕರು ಮುಚ್ಚದಿದ್ದರೆ ಅವರನ್ನು ಮುಂದಿನ ಅನಾಹುತಗಳ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಮುಚ್ಚಲು ನಿರ್ಲಕ್ಷ್ಯ ಮಾಡಿದ ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
* ಕೊಳವೆಬಾವಿ ಕೊರೆಯುವ ಯಂತ್ರದ ಮಾಲೀಕರು ಸಕ್ಷಮ ಪ್ರಾಧಿಕಾರದಿಂದ ಪಡೆದ ಅನುಮತಿ ಪತ್ರ/ಸ್ವೀಕೃತಿ ಪತ್ರನ್ನು ಮಾರ್ಗದುದ್ದಕ್ಕೂ ಇಟ್ಟಿರಬೇಕು. ಇಲ್ಲದಿದ್ದಲ್ಲಿ ಸಬ್ ಇನ್ಸ್ಪೆಕ್ಟರ್ ಯಂತ್ರವನ್ನು ವಶಕ್ಕೆ ಪಡೆಯಲು ಅವಕಾಶವಿದೆ.
ಕೊಳವೆಬಾವಿ ಮುಚ್ಚುವಿಕೆ
* ಕೊಳವೆಬಾವಿ ವಿಫಲವಾದರೆ ಕಲ್ಲುಮಣ್ಣಿನಿಂದ ಸಂಪೂರ್ಣವಾಗಿ ಮುಚ್ಚಬೇಕು. ಕೇಸಿಂಗ್ ಪೈಪ್ ಹಾಕಿದ್ದರೆ ಕ್ಯಾಪ್ ಹಾಕಿಸಿ ಸುತ್ತ ಕಟ್ಟೆ ನಿರ್ಮಿಸಬೇಕು.
* ಕೊಳವೆಬಾವಿ ಸಫಲವಾದಲ್ಲಿ ಅಗತ್ಯ ಪಂಪ್, ಮೋಟಾರ್ ಅಳವಡಿಸಬೇಕು. ಅಲ್ಲಿಯವರೆಗೆ ಬಾವಿಯ ಕೇಸಿಂಗ್ ಪೈಪ್ ಕ್ಯಾಪ್ ಹಾಕಿ ಸುತ್ತಲೂ ಕಾಂಕ್ರೀಟ್ ನಿಂದ ಮುಚ್ಚಬೇಕು.
* ಈಗಾಗಲೇ ಕೊರೆದ ಕೊಳವೆ ಬಾವಿಗಳಿಗೆ ಸುರಕ್ಷತೆ ವ್ಯವಸ್ಥೆ ಕಲ್ಪಿಸದೇ ಇದ್ದರೆ ಅಂಥವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ.
ಜಿಲ್ಲಾ ಮಟ್ಟದ ಸಮಿತಿ ರಚನೆ
ಕೊಳವೆಬಾವಿಗಳನ್ನು ಮುಚ್ಚಿಸುವುದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದನ್ನು ಖಾತ್ರಿಪಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿ.ಪಂ ಸಿಇಒ, ಎಸ್ಪಿ, ಸಮಾಜ ಕಲ್ಯಾಣಾಧಿಕಾರಿ, ಜಿಲ್ಲಾ ಭೂ ವಿಜ್ಞಾನಿ, ತಾಲೂಕಿನ ತಹಸೀಲ್ದಾರ್, ತಾಪಂ ಇಒಗಳು ಸಮಿತಿ ಸದಸ್ಯರಾಗಿರುತ್ತಾರೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಆ.31ರೊಳಗೆ ವರದಿ ನೀಡಿ
ರಾಜ್ಯದಲ್ಲಿರುವ ಎಲ್ಲಾ ನಿರುಪಯುಕ್ತ ಕೊಳವೆಬಾವಿಗಳನ್ನು ಆ.31ರೊಳಗೆ ಮುಚ್ಚಿಸಬೇಕು. ಗ್ರಾಮದಲ್ಲಿನ ಕೊಳವೆಬಾವಿ ಮುಚ್ಚಿಸಿರುವ ಕುರಿತು ಪಿಡಿಒ, ಕಿರಿಯ ಎಂಜಿನಿಯರ್ ಹಾಗೂ ಗ್ರಾಮಲೆಕ್ಕಿಗರು ಜಂಟಿ ಪ್ರಮಾಣಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ಸಲ್ಲಿಸಲೇಬೇಕು.