ಧರ್ಮಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲು: ಸ್ವರೂಪಾನಂದ ಸರಸ್ವತಿ
ಚಿಕ್ಕಬಳ್ಳಾಪುರ, ಅಕ್ಟೋಬರ್ 12: ದೇಶದ ಗಡಿಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಾಗೂ ಅಮಾಯಕರ ಸಾವಿಗೆ ಕಾರಣವಾಗುತ್ತಿರುವ ಪಾಕಿಸ್ತಾನವು ಧರ್ಮಯುದ್ಧಕ್ಕಾಗಿ ಆಹ್ವಾನಿಸುತ್ತಿದೆ. ದೇವತೆಗಳು ಅಸುರರನ್ನು ಕೊಲ್ಲುವುದರ ದ್ಯೋತಕವಾಗಿ ವಿಜಯದಶಮಿ ಆಚರಿಸ್ತೀವಿ. ಈ ಧರ್ಮಯುದ್ಧದಲ್ಲಿ ಪಾಕಿಸ್ತಾನ ಗೆಲ್ಲುವುದಿಲ್ಲ ಎಂದು ದ್ವಾರಕಾ ಪೀಠದ ಸ್ವರೂಪಾನಂದ ಸ್ವಾಮೀಜಿ ಚಿಕ್ಕಬಳ್ಳಾಪುರದಲ್ಲಿ ಹೇಳಿದರು.
ಮನುಷ್ಯನಲ್ಲಿ ಶುದ್ಧ ಆಲೋಚನೆ ಬರಬೇಕು. ಅದಕ್ಕೆ ಮೊದಲು ದೇಹ ಪವಿತ್ರವಾಗಬೇಕು. ಬೆವರು ಸುರಿಸಿ ದುಡಿಯುವುದನ್ನು ಜನರು ಮರೆಯುತ್ತಿದ್ದಾರೆ. ಸರಕಾರದ ಕೆಲಸ ಮಾಡುವವರು ಲಂಚ ಕೇಳುತ್ತಿದ್ದಾರೆ. ವ್ಯಾಪಾರಿಗಳು ವಂಚಕರಾಗಿದ್ದಾರೆ. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ. ಕಾರ್ಮಿಕರು ತೆಗೆದುಕೊಂಡ ಕೂಲಿಗೆ ತಕ್ಕ ಕೆಲಸ ಮಾಡುತ್ತಿಲ್ಲ ಎಂದರು.[ಭಾರತ-ಪಾಕ್ ಮಧ್ಯೆ ಯುದ್ಧ ನಡೆಯುತ್ತೆ: ಮಾತಾ ಮಾಣಿಕೇಶ್ವರಿ ಭವಿಷ್ಯ]
ಗೋ ರಕ್ಷಣೆ ಇಂದಿನ ಅಗತ್ಯ. ಗೋವಿನ ಮೂತ್ರದಲ್ಲಿ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಇದೆ. ಗೋಮೂತ್ರ ಸಿಂಪಡಿಸಿದ ತರಕಾರಿ ಸೇವಿಸಿ. ದೇಶದಲ್ಲಿ ನಡೆಯುತ್ತಿರುವ ಗೋ ಹತ್ಯೆ ಮತ್ತು ರಫ್ತನ್ನು ತಕ್ಷಣವೇ ನಿಲ್ಲಿಸಬೇಕು. ಮಕ್ಕಳಿಗೆ ರಾಮಾಯಣ-ಮಹಾಭಾರತ ಓದಲು ಹೇಳಿ. ಧರ್ಮಾಚರಣೆ ಬೋಧಿಸುವುದಕ್ಕಿಂತ ಅದನ್ನೇ ಜೀವನದಲ್ಲಿ ಅನುಸರಿಸಿದ ಶ್ರೀರಾಮ ನಮ್ಮ ಆದರ್ಶವಾಗಲಿ ಎಂದರು.[ಗಡಿಯಲ್ಲಿ ಹೈ ಅಲರ್ಟ್ : ಶಸ್ತ್ರಸನ್ನದ್ಧವಾಗಿದೆ ಭಾರತೀಯ ಸೇನೆ]
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮಾತನಾಡಿ, ತಮ್ಮ 92ನೇ ವಯಸ್ಸಿನಲ್ಲೂ ದೇಶ ಸಂಚರಿಸುತ್ತಾ ಚಿಂತನೆಗಳನ್ನು ಬೋಧಿಸುತ್ತಿರುವ ಸ್ವರೂಪಾನಂದರ ಶಕ್ತಿ ಅಪಾರ ಹಾಗೂ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಶಾಸಕ ಡಾ.ಕೆ.ಸುಧಾಕರ್, ಜಾತ್ಯತೀತವಾಗಿ ಈ ದೇಶವನ್ನು ಕಟ್ಟುವ ಕೆಲಸವಾಗಬೇಕು ಎಂದು ಹೇಳಿದರು.