ವಿಧಾನಸೌಧದಲ್ಲಿ ಗೂಬೆ ಕುಂತಯ್ತಲ್ಲೋ? ಸಿಎಂಗೆ ಅಪಶಕುನ ಅಂತೇ..
ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿನ ಮೂಲೆಯಲ್ಲಿ ಮತ್ತೆ ಸೋಮವಾರ (ಜ 23) ಗೂಬೆ ಪ್ರತ್ಯಕ್ಷವಾಗುವ ಮೂಲಕ, ಮುಖ್ಯಮಂತ್ರಿಗಳಿಗೆ ಇದು ಅಪಶಕುನನಾ ಎನ್ನುವ ಚರ್ಚೆ ಆರಂಭವಾಗಿದೆ.
ಬೆಂಗಳೂರು, ಜ 24: ಈ ಕಾಗೆ ಗೂಬೆಗಳಿಗೆ ಸಿದ್ದರಾಮಯ್ಯನವರ ಸರಕಾರದಲ್ಲಿ ಏನ್ ಕೆಲಸ ಅಂತೀನಿ? ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳ ಕಾರಿನಲ್ಲಿ ಕಾಗೆ ಕೂತು, ಕಾರನ್ನೇ ಬದಲಾಯಿಸಿದ್ದಾಗೋಯಿತು.
ಈಗ ಸೋಮವಾರ (ಜ 23) ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿನ ಮೂಲೆಯಲ್ಲಿ ಗೂಬೆ ಪ್ರತ್ಯಕ್ಷವಾಗುವ ಮೂಲಕ, ಮುಖ್ಯಮಂತ್ರಿಗಳಿಗೆ ಇದು ಅಪಶಕುನನಾ ಎನ್ನುವ ಚರ್ಚೆ ಮತ್ತೆ ಆರಂಭವಾಗಿದೆ. (ಶನೈಶ್ಚರನ ಅನುಗ್ರಹಕ್ಕಾಗಿ ಇಲ್ಲಿವೆ 10 ಮಾರ್ಗಗಳು)
ಇತ್ತೀಚೆಗೆ ಸಿಎಂ ತಲೆಯ ಮೇಲೆ ಕಾಗೆ ಹಿಕ್ಕೆ ಮಾಡಿರುವುದೂ ಬಹಳ ಚರ್ಚೆ, ಅಪಹಾಸ್ಯಕ್ಕೆ ಒಳಗಾಗಿತ್ತು. ಪದೇ ಪದೇ ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಯಾಕೆ ಈ ರೀತಿ ನಡೆಯುತ್ತಿದೆ ಎನ್ನುವುದಕ್ಕೆ ಜ್ಯೋತಿಷ್ಯ ವಲಯದಿಂದ ಇನ್ನೂ ಸ್ಪಷ್ಟನೆ ಬರಬೇಕಷ್ಟೇ..
ಈ ಗೂಬೆಯಲ್ಲೂ ಎರಡು ರೀತಿಯಿದೆಯಂತೆ, ಬಿಳಿಗೂಬೆ ಕಂಡರೆ ಶುಭಶಕುನ, ಕಪ್ಪುಗೂಬೆ ಕಂಡರೆ ಅಪಶಕುನ. ಎರಡು ಮೂರು ವರ್ಷದ ಹಿಂದೆ ಇದೇ ಬಾಂಕ್ವೆಟ್ ಹಾಲ್ ನಲ್ಲಿ ಬಿಳಿಗೂಬೆ ಕಾಣಿಸಿಕೊಂಡಿತ್ತು. ಈಗ ಕಪ್ಪು ಗೂಬೆ ಸರದಿ.
ಬಿಳಿಗೂಬೆ ಮುಂದಾಗುವ ಶುಭದ ಸಂಕೇತ ಎಂದು ವಿಧಾನಸೌಧದ ಸಿಬ್ಬಂದಿಗಳು ಅಂದು ಮಾತನಾಡಿ ಕೊಳ್ಳುತ್ತಿದ್ದರು. ಗೂಬೆ ಕಾಣಿಸಿಕೊಂಡ ನಂತರ ಯಾರಿಗೆ ಶುಭವಾಯಿತು ಎನ್ನುವುದಕ್ಕೆ ಶಕ್ತಿಕೇಂದ್ರದ ಸಿಬ್ಬಂದಿಗಳಲ್ಲಿ ಉತ್ತರವಿರಲಿಲ್ಲ ಬಿಡಿ..
ಮುಖ್ಯಮಂತ್ರಿಗಳ ಕಾರಿನಲ್ಲಿ ಕಾಗೆ ಕೂತಿದ್ದಕ್ಕೂ, ಸಿಎಂ ಪುತ್ರನ ಅಕಾಲಿಕ ಮರಣಕ್ಕೂ ಹೋಲಿಕೆ ಮಾಡಿದ ಉದಾಹರಣೆಗಳೂ ಇವೆ. ಈಗ ಗೂಬೆ ಕೂತಿರುವುದೂ ಅಪಶಕುನ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಯಾರಿಗೆ ಏನು ಅಪಶಕುನನೋ, ಗೂಬೆಯನ್ನು ನೋಡಲು ಸೋಮವಾರ ವಿಧಾನಸೌಧದ ಸಿಬ್ಬಂದಿಗಳು ದೌಡಾಯಿಸಿದ್ದರಿಂದ, ಏನು ಮಾಡಬೇಕೆಂದು ತೋಚದೇ ಗೂಬೆ ಪಿಳಿಪಿಳಿ ಕಣ್ ಕಣ್ ಬಿಟ್ಕೊಂಡು ಕೂತಿದ್ದು ಮಾತ್ರ ಗೂಬೆಗಾದ ಅಪಶಕನನೋ ಏನು?