ಇನ್ನು 5ವರ್ಷ ಸೋಂದಾ ವಾದಿರಾಜ ಮಠದಲ್ಲಿ ಇಷ್ಟಾರ್ಥ ಸೇವೆ ಇರುವುದಿಲ್ಲ
ವಾದಿರಾಜ ಗುರುಗಳ ಮೂಲ ಬೃಂದಾವನ ಮತ್ತು ಭೂತರಾಜರನ್ನು ಆರಾಧಿಸುವ ಪುಣ್ಯಭೂಮಿ ಶಿರಸಿ ತಾಲೂಕು, ಸೋಂದಾ ವಾದಿರಾಜ ಮಠದಲ್ಲಿ, ಮುಂದಿನ ಕೆಲವು ವರ್ಷಗಳಲ್ಲಿ ಕೆಲವೊಂದು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಶಿರಸಿ, ಏ 12: ರಮಾತ್ರಿವಿಕ್ರಮ ದೇವರು, ವಾದಿರಾಜ ಗುರುಗಳ ಮೂಲ ಬೃಂದಾವನ ಮತ್ತು ಭೂತರಾಜರನ್ನು ಆರಾಧಿಸುವ ಪುಣ್ಯಭೂಮಿ ಸೋಂದಾ ವಾದಿರಾಜ ಮಠದಲ್ಲಿ, ಮುಂದಿನ 4-5 ವರ್ಷಗಳಲ್ಲಿ ಭಕ್ತಾದಿಗಳು ಸಲ್ಲಿಸುವ ಕೆಲವೊಂದು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಕ್ಷೇತ್ರದಲ್ಲಿ ವಿವಿಧ ಜೀರ್ಣೋದ್ದಾರ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದ ಇಷ್ಟಾರ್ಥ ಸಿದ್ದಿಸೇವೆ (ಕಾಯಿಕಟ್ಟುವ ಸೇವೆ) ಸಹಿತ ಕೆಲವು ಸೇವೆಗಳು ಸದ್ಯಕ್ಕೆ ಇರುವುದಿಲ್ಲ, ಭಕ್ತಾದಿಗಳು ಸಹಕರಿಸಬೇಕೆಂದು ಸೋಂದಾ ಮಠ ಮನವಿ ಮಾಡಿಕೊಂಡಿದೆ. [ಸೋಂದಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ]
ಸೋಂದಾ ಮಠದ ಯತಿ ಶ್ರೀ ವಿಶ್ವವಲ್ಲಭ ತೀರ್ಥರು ಸುಮಾರು 30 ಕೋಟಿ ವೆಚ್ಚದಲ್ಲಿ ಸಮಗ್ರ ಸೋಂದಾ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವ ಸಂಕಲ್ಪ ಮಾಡಿದ್ದು, ಸುಮಾರು 4 ರಿಂದ 5 ವರ್ಷಗಳ ಕಾಲ ಜೀರ್ಣೋದ್ಧಾರದ ಕಾಮಗಾರಿಗಳು ನಡೆಯಲಿವೆ.
ವೃದ್ಧರಿಗೆ, ಅಶಕ್ತರಿಗೆ ಮಠದ ಆವರಣದಲ್ಲಿ ಅನಾನುಕೂಲವಾಗುವ ಸಾಧ್ಯತೆಯಿದೆ, ಜೊತೆಗೆ ಭಕ್ತಾದಿಗಳಿಗೆ ವಸತಿ ಸೌಲಭ್ಯ ನೀಡಲೂ ತೊಂದರೆಯಾಗಬಹುದು. ಆದರೆ ದೈನಂದಿನ ಪೂಜಾ ಪದ್ದತಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.
ವಿಶ್ವವಲ್ಲಭ ತೀರ್ಥರ ಮಹತ್ವಾಕಾಂಕ್ಷೆಯ ಈ ಕೆಲಸಕ್ಕೆ ಭಕ್ತಾದಿಗಳು ಸಹಕರಿಸಬೇಕೆಂದು ಕೋರಲಾಗಿದೆ. (ಚಿತ್ರ: ಮಧ್ವೇಶ್ ತಂತ್ರಿ)