ವಾದಿರಾಜರ ತಪೋಭೂಮಿ ಸೋಂದಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ
ಶಿರಸಿ, ಮಾ 14: ಶ್ರೀವಾದಿರಾಜ ಸ್ವಾಮಿಗಳ ಮೂಲ ವೃಂದಾವನದ ಸನ್ನಿಧಿ ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿರುವ ರಮಾತ್ರಿವಿಕ್ರಮ ದೇವರಿಗೆ ನೂತನ ಬ್ರಹ್ಮರಥವನ್ನು ಸಮರ್ಪಿಸಲಾಗುತ್ತಿದೆ.
ಸುಮಾರು ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬ್ರಹ್ಮರಥವನ್ನು ಹಾಲೀ ಉಡುಪಿ ಸೋದೆ ಮಠದ ಪೀಠಾಧಿಪತಿ ಶ್ರೀವಿಶ್ವವಲ್ಲಭತೀರ್ಥರು ನಿರ್ಮಾಣ ಮಾಡಿಸಿದ್ದರೆ, ಉಡುಪಿ ದೊಡ್ಡಣಗುಡ್ಡೆಯ ಸುದರ್ಶನ ಆಚಾರ್ಯರು ರಥವನ್ನು ನಿರ್ಮಿಸಿದ್ದಾರೆ. (ಸೋಂದಾ ಕ್ಷೇತ್ರ ಮಹಾತ್ಮೆ)
ಸೋಂದಾದಲ್ಲಿ ಮಾರ್ಚ್ 17ರಿಂದ ಹತ್ತು ದಿನಗಳ ವಾರ್ಷಿಕ ಜಾತ್ರೆ ಆರಂಭವಾಗಲಿದ್ದು, ಮಾ. 22ರಂದು ಭೂತರಾಜರ ದಂಡೆಬಲಿ ಧಾರ್ಮಿಕ ವಿದಿವಿಧಾನ ಕಾರ್ಯಕ್ರಮ ನಡೆಯಲಿದೆ. ಮಾ.23ರಂದು ನಡೆಯುವ ರಥೋತ್ಸವದ ವೇಳೆ ದೇವರಿಗೆ ಬ್ರಹ್ಮರಥ ಸಮರ್ಪಣೆ ನಡೆಯಲಿದೆ.
ಸೋಂದಾ ಕ್ಷೇತ್ರದಲ್ಲಿ ಈಗಾಗಲೇ ಎರಡು ರಥಗಳಿವೆ. ನೂತನ ಬ್ರಹ್ಮರಥದ ಉತ್ಸವ ಮಾರ್ಚ್ 23ರ ರಥೋತ್ಸವ, 24ರ ಚೂರ್ಣೋತ್ಸವ ಮತ್ತು ಮಾ.26ರ ವಾದಿರಾಜರ ಆರಾಧನೆಯ ವೇಳೆಯಲ್ಲಿ ನಡೆಯಲಿದೆ ಎಂದು ಸೋದೆ ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನೂತನ ಬ್ರಹ್ಮರಥದ ವೈಶಿಷ್ಟ್ಯ: ಸುದರ್ಶನ ಆಚಾರ್ಯರ ನೇತೃತ್ವದ ಹತ್ತಾರು ಕುಶಲಕರ್ಮಿಗಳು ಸೋಂದೆಯಲ್ಲಿ ಆರು ತಿಂಗಳು ವಾಸ್ತವ್ಯ ಹೂಡಿ ರಥವನ್ನು ನಿರ್ಮಿಸಿದ್ದಾರೆ. ರಥದ ಜಿಡ್ಡೆ 9.5 ಅಡಿ ಎತ್ತರವಿದ್ದು ಮುಗುಳಿ ಸೇರಿ 23 ಅಡಿ ಎತ್ತರವಿದೆ. (ಉಡುಪಿ ಪರ್ಯಾಯದ ಸುಂದರ ಛಾಯಾಚಿತ್ರ)
ಜಿಡ್ಡೆಯ ಬುಡ ಅಚ್ಚುಮರದ ಜಂತಿಯಲ್ಲಿ 12 ಮೊಸಳೆ ಮುಖಗಳು, ಚೌಕದ ಅಟ್ಟೆಯಲ್ಲಿ ಪ್ರಾಣಿ, ಪಕ್ಷಿಗಳ ಆಕರ್ಷಕ ಕೆತ್ತನೆಗಳು, ಅಷ್ಟಪಟ್ಟಿಯಲ್ಲಿ ಅಷ್ಟದಿಕ್ಪಾಲಕರು, ಮೂಲೆಗಳಲ್ಲಿ ಆನೆ, ಸಿಂಹದ ಕೆತ್ತನೆಗಳು, ವೃತ್ತಾಕಾರದ ಆಟ್ಟೆಗಳು, ವಾದ್ಯಮೇಳ, ನಾಟ್ಯಭಂಗಿ, ಬಳ್ಳಿಗಳು, ಸರ್ಪಗಳ ಸಾಲುಗಳಿವೆ.
ಅಲ್ಲದೇ, ಹಿತ್ತಾಳೆಯ ಗಂಟೆಗಳ ಸಾಲು, ಪದ್ಮಾಕೃತಿ, ದಶಾವತಾರ ವಿಗ್ರಹಗಳು, ಗಣಪತಿ, ಹಯಗ್ರೀವ, ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ, ತ್ರಿವಿಕ್ರಮ ವಿಗ್ರಹಗಳು, ಪವಿತ್ರ ಗಂಟಿನ ಸರಪಳಿ, ಸುತ್ತಲು ಬುರುಡೆಗಳು, ದರ್ಭೆ ಸಾಲಿನ ಕೆತ್ತನೆಗಳು ಸೇರಿ ಒಟ್ಟು 13 ಅಟ್ಟೆಗಳಿವೆ. 490 ಸಿಎಫ್ಟಿ ಹೆಬ್ಬಲಸು ಮತ್ತು ನಂದಿಮರವನ್ನು ಬಳಸಿ ಬ್ರಹ್ಮರಥವನ್ನು ನಿರ್ಮಿಸಲಾಗಿದೆ.