ಮಂಗಳೂರಲ್ಲಿ 28,891 ನೋಟಾ ಚಲಾವಣೆಗೆ ಕಾರಣವೇನು?
ಮಂಗಳೂರು, ಫೆಬ್ರವರಿ, 24: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಬಾರಿ "ನೋಟಾ" ಅಭ್ಯರ್ಥಿಗಳಿಗೆ ಸರಿಯಾಗಿಯೇ ಬರೆ ಎಳೆದಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನಾಗರಿಕರು "ನನ್ ಆಫ್ ದಿ ಎಬೊವ್" ಮೇಲಿನವರಲ್ಲಿ ಯಾರೂ ಅಲ್ಲ ಆಯ್ಕೆಯನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.
ತಾಪಂ, ಜಿಪಂ ಚುನಾವಣೆಯಲ್ಲಿ ಎರಡು ಜಿಲ್ಲೆಗಳಲ್ಲಿ ಒಟ್ಟು ಚಲಾವಣೆಯಾಗಿದ್ದು ಬರೋಬ್ಬರಿ 28,891 ನೋಟಾ! ಇದಕ್ಕೆ ಕಾರಣ ಸಹ್ಯಾದ್ರಿ ಸಂಚಾರ ತಂಡ. ಎತ್ತಿನಹೊಳೆ ಯೋಜನೆಯ ವಿರೋಧಿಸುವ ಸಲುವಾಗಿ ನೋಟಾ ಬಳಕೆ ಮಾಡಿ ಉತ್ತರ ನೀಡಿ ಎಂದು ಜಿಲ್ಲಾದ್ಯಂತ ಸಹ್ಯಾದ್ರಿ ಸಂಚಾರ ತಂಡ. ಪ್ರವಾಸ ಕೈಗೊಂಡಿತ್ತು. ಜನರಲ್ಲಿ ಜಾಗೃತಿ ಮೂಡಿಸಿತ್ತು. ಸುಮಾರು 30 ಸಾವಿರಕ್ಕೂ ಅಧಿಕ ಜನ ನೋಟಾ ಬಟನ್ ಒತ್ತಿದ್ದಾರೆ ಎಂದು ತಂಡದ ಸದಸ್ಯರೊಬ್ಬರು ಚುನಾವಣೆ ಮುಗಿದ ನಂತರ ಹೇಳಿದ್ದರು.[ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]
ಗ್ರಾಮಾಂತರ ಪ್ರದೇಶದ ಜನರು ಈ ಪ್ರಮಾಣದಲ್ಲಿ ನೋಟಾ ಬಳಸಿಕೊಳ್ಳಲು ಲಕಾರಣ ಎತ್ತಿನಹೊಳೆ ಯೋಜನೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸಲು ನಮಗೇಕೆ ತೊಂದರೆ ನೀಡುತ್ತೀರಿ ಎಂಬ ಅಭಿಪ್ರಾಯವನ್ನು ಜನರು ನೋಟಾ ಚಲಾವಣೆ ಮಾಡುವ ಮುಖೇನ ಹೊರಹಾಕಿದ್ದಾರೆ.[30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ಒನ್ ಇಂಡಿಯಾದೊಂದಿಗೆ ಮಾತನಾಡಿದ ಸಹ್ಯಾದ್ರಿ ಸಂಚಾರದ ಶಶಿಧರ್ "ಇದು ರಾಜಕೀಯ ಪಕ್ಷಗಳಿಗೆ ಒಂದು ಪಾಠವಾಗಬೇಕು. ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸುವ ಬದಲು ಹೊಸ ಸಮಸ್ಯೆಗಳನ್ನು ತಂದಿಡುತ್ತಿರುವವರಿಗೆ ಈ ನೋಟಾ ಚಲಾವಣೆ ಉತ್ತರ ಹೇಳಿದೆ" ಎಂದರು.