ಪ್ರಧಾನಿ ಮೋದಿ 'ಅಶ್ವಮೇಧ'ದ ಕುದುರೆಯನ್ನು ನಾವು ಕಟ್ಟಿ ಹಾಕುತ್ತೇವೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಶ್ವಮೇಧದ ಕುದುರೆಯನ್ನು ಜೆಡಿಎಸ್ ಕಟ್ಟಿಹಾಕಲಿದೆ.
ಬೆಂಗಳೂರು, ಮಾ 13: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವೇ ಬೇರೆ, ಕರ್ನಾಟಕದ ಪರಿಸ್ಥಿತಿಯೇ ಬೇರೆ. ಮೋದಿ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್ ರಾಜ್ಯಾಧಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಂಡು ಸೋಮವಾರ (ಮಾ 13) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿ ಅದೇನು ಸಾಧನೆ ಮಾಡಿದೆಯೆಂದು ಮೋದಿ ಇಲ್ಲಿಗೆ ಬಂದು ಮತಯಾಚಿಸುತ್ತಾರೆಂದು ಎಚ್ಡಿಕೆ ಪ್ರಶ್ನಿಸಿದ್ದಾರೆ. (ಜಾಲ ತಾಣಗಳಿಗೆ ಎಚ್ಡಿಕೆ ಎಂಟ್ರಿ)
ಉತ್ತರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಸೋಲಿಸಿದೆವು, ಕರ್ನಾಟಕದಲ್ಲೂ ಅದನ್ನೇ ಮುಂದುವರಿಸುತ್ತೇವೆ ಎಂದು ಮೋದಿ ಮತ್ತು ಅಮಿತ್ ಶಾ ಭ್ರಮೆಯಲ್ಲಿದ್ದರೆ ಅದು ದೊಡ್ಡ ತಪ್ಪು. ಇಲ್ಲಿಯ ಪರಿಸ್ಥಿತಿಯೇ ಬೇರೆ.
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕುಟುಂಬ ಜಗಳದಿಂದ ಮತ್ತು ಬಿಎಸ್ಪಿಯಲ್ಲಿನ ಟಿಕೆಟ್ ಹಂಚಿಕೆಯ ಗೊಂದಲದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೇ ಹೊರತು, ಮೋದಿ ಹೆಸರಿನಿಂದಲ್ಲಾ ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮನಸ್ಸಿಗೆ ಬಂದಂತೆ ಒಬ್ಬರೊನ್ನಬ್ಬರು ಟೀಕಿಸುತ್ತಿದ್ದಾರೆ. ಇವರಿಬ್ಬರೂ ರಾಜ್ಯದ ಹಿರಿಯ ರಾಜಕಾರಣಿಗಳು ಎನ್ನುವುದನ್ನು ಮರೆತಿದ್ದಾರೆಯೇ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತ ಪಡಿಸಿದ್ದಾರೆ. ಎಚ್ಡಿಕೆ ಗೋಷ್ಠಿಯ ಹೈಲೆಟ್ಸ್..
ಮೋದಿ ಅಶ್ವಮೇಧದ ಕುದುರೆ ಕಟ್ಟಿ ಹಾಕುತ್ತೇವೆ
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಅಶ್ವಮೇಧದ ಕುದುರೆಯನ್ನು ನಾವು ರಾಜ್ಯದಲ್ಲಿ ಕಟ್ಟಿ ಹಾಕುತ್ತೇವೆ. ಇದು ಜೆಡಿಎಸ್ ನಿಂದ ಮಾತ್ರ ಸಾಧ್ಯ - ಕುಮಾರಸ್ವಾಮಿ.
ಗುಂಡ್ಲುಪೇಟೆ ಮತ್ತು ನಂಜನಗೂಡು
ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ರಾಷ್ಟ್ರಾಧ್ಯಕ್ಷರು ಇದೇ ಬರುವ ಮಾರ್ಚ್ ಹದಿನೈದರ ನಂತರ ತೀರ್ಮಾನಿಸಲಿದ್ದಾರೆ - ಕುಮಾರಸ್ವಾಮಿ.
ಯಡಿಯೂರಪ್ಪ, ಸಿದ್ದರಾಮಯ್ಯ ಆರೋಪ, ಪ್ರತ್ಯಾರೋಪ
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಆರೋಪ, ಪ್ರತ್ಯಾರೋಪ ನೋಡಿದರೆ ಈ ಉಪಚುನಾವಣೆಯಿಂದ ದೂರ ಸರಿಯುವುದೇ ಒಳ್ಳೆಯದು ಎನ್ನುವುದು ನನ್ನ ವೈಯಕ್ತಿಕ ತೀರ್ಮಾನ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ಆಂತರಿಕ ಸಮಸ್ಯೆ
ಉತ್ತರಪ್ರದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಅಭಿವೃದ್ದಿ ಅನ್ನುವುದೇ ಆಗಿಲ್ಲ. ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ಆಂತರಿಕ ಸಮಸ್ಯೆ ಮತ್ತು ಆಡಳಿತ ವೈಖರಿಯಿಂದ ಬೇಸತ್ತು, ಜನ ಬಿಜೆಪಿಗೆ ಮತಹಾಕಿದ್ದಾರೆ - ಕುಮಾರಸ್ವಾಮಿ.
ಕುಮಾರಸ್ವಾಮಿ ವ್ಯಂಗ್ಯ
ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿಯವರ ಚುನಾವಣಾ ಉತ್ಸಾಹಕ್ಕೆ ಲಗಾಮು ಹಾಕಬೇಕಿದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಇದು ಸಾಧ್ಯನಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.