ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ಇಲ್ಲ: ಸಿದ್ದರಾಮಯ್ಯ
ಸದ್ಯಕ್ಕೆ ಸಚಿವ ವಿಸ್ತರಣೆ, ಪುನರ್ ರಚನೆ ವಿಷಯ ಮರೆತು ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಬಾಕಿ ಇರುವ ಎರಡು ಸ್ಥಾನಗಳನ್ನು ತುಂಬುವ ಪ್ರಕ್ರಿಯೆ ಸ್ಥಗಿತವಾಗಿದೆ.
ಬೆಂಗಳೂರು, ಜನವರಿ 17: ಸಂಪುಟ ವಿಸ್ತರಣೆ, ಪುನರ್ ರಚನೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಚಿಂತನೆ ಸದ್ಯಕ್ಕಿಲ್ಲ ಎಂದರು.
ರಾಸಲೀಲೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ ಅಬಕಾರಿ ಸಚಿವ ಎಚ್.ವೈ.ಮೇಟಿ ಹಾಗೂ ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳನ್ನು ತುಂಬಬೇಕಿದೆ.
ಈ ಎರಡು ಸ್ಥಾನಕ್ಕಾಗಿ ಆಕಾಂಕ್ಷಿಗಳಿಂದ ತೆರೆ ಮರೆಯಲ್ಲಿ ಲಾಬಿ ಜೋರಾಗಿದೆ. ಹಿರಿಯ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಹೇಳಿಕೆಯಿಂದ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಆಗ್ರಹ ಶುರುವಾಗಿತ್ತು. ಉತ್ತರ ಕರ್ನಾಟಕದ ಕುರುಬ ಸಮುದಾಯದ ಎಚ್ ವೈ ಮೇಟಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ಕುರುಬ ಸಮುದಾಯದ ಶಾಸಕರನ್ನು ಕರೆತರಬೇಕು. ಮಹದೇವಪ್ರಸಾದ್ ಅವರಿಂದ ತೆರವಾಗಿರುವ ಸ್ಥಾನವನ್ನು ಲಿಂಗಾಯತರಿಗೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತ್ತು.
ಇತ್ತೀಚೆಗೆ ಕೆ ಜೆ ಜಾರ್ಜ್ ಹಾಗೂ ರೋಷನ್ ಬೇಗ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಬಿಬಿಎಂಪಿ, ಬಿಡಿಎ, ಬಿಎಂಆರ್ ಸಿಎಲ್, ಬಿಎಂ ಆರ್ ಡಿಎ ಸೇರಿದಂತೆ ಬೆಂಗಳೂರಿನ ಎಲ್ಲಾ ಇಲಾಖೆಗಳ ಅಧಿಕಾರ ಜಾರ್ಜ್ ಪಾಲಾಗಿತ್ತು. ರೋಷನ್ ಬೇಗ್ ಅವರಿಗೆ ನಗರಾಭಿವೃದ್ಧಿಯ ಕೆಲವು ವಿಭಾಗಗಳ ಹೊಣೆ ನೀಡಲಾಗಿತ್ತು.
Comments
siddaramaiah cabinet expansion karnataka government ಸಿದ್ದರಾಮಯ್ಯ ಕರ್ನಾಟಕ ಸರ್ಕಾರ ಸಂಪುಟ ವಿಸ್ತರಣೆ ಬೆಂಗಳೂರು
English summary
No Cabinet expansion or reshuffle now said CM Siddaramaiah. Two seats are vacant in the cabinet after HY Meti's resignation and Mahadeva prasad's demise.